ಪೊಲೀಸ್ ಕಾನ್ಸ್‌ಟೇಬಲ್‌ ಹುದ್ದೆಯ ನೇಮಕಾತಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಇಬ್ಬರು ಬಿಜೆಪಿ ನಾಯಕರನ್ನು ಬಂಧಿಸಲಾಗಿದೆ.

ಪೊಲೀಸ್ ಕಾನ್ಸ್‌ಟೇಬಲ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿ ಪಿ. ವಿ. ಪಟೇಲ್, ರೂಪಲ್ ಶರ್ಮಾ ಸೇರಿದಂತೆ ಇಬ್ಬರು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಈ ಪ್ರಕರಣದ ಮುಖ್ಯ ಆರೋಪಿ ನಗರ ನಿಗಮ ಕಾಂಟ್ರ್ಯಾಕ್ಟರ್ ಯಶ್ ಪಾಲ್ ಸಿಂಗ್ ಸೋಲಂಕಿ ಎನ್ನಲಾಗಿದೆ. ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆಯಲ್ಲಿ ಭಾನುವಾರದಂದು ನಡೆಯಬೇಕಿದ್ದ ಗುಜರಾತ್ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಪರೀಕ್ಷೆ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಮಂಡಳಿಗೆ ಸೋರಿಕೆ ಮಾಹಿತಿ ಸಿಕ್ಕಿತ್ತು.

Add Asianetnews Kannada as a Preferred SourcegooglePreferred

ಈ ಪರೀಕ್ಷೆ ಆಯೋಜಿಸಿದ್ದ ಲೋಕ ರಕ್ಷಕ ಮಂಡಳಿಯ ಅಧ್ಯಕ್ಷ ವಿಕಾಸ್ ಸಹಾಯ್ ಮಾತನಾಡುತ್ತಾ ಪರೀಕ್ಷೆ ಆರಂಭವಾಗುವ ಕೆಲ ಗಂಟೆಗಳ ಹಿಂದಷ್ಟೇ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಮಾಹಿತಿ ಲಭಿಸಿತ್ತು. ಹೀಗಾಗಿ ಆ ಕೂಡಲೇ ಪರೀಕ್ಷೆ ರದ್ದುಗೊಳಿಸಿದ್ದೆವು ಎಂದಿದ್ದಾರೆ.

ಯಾರೋ ನನಗೆ ಉತ್ತರವಿರುವ ಪ್ರತಿಯನ್ನು ಕಳುಹಿಸಿದ್ದರು, ಅವುಗಳು ನಾವು ಪರೀಕ್ಷೆಗೆ ನಿಗಧಿಪಡಿಸಿದ್ದ ಪ್ರಶ್ನೆಗಳ ಉತ್ತರಗಳಾಗಿದ್ದವು. ಈ ಉತ್ತರ ಪತ್ರಿಕೆಯನ್ನು ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಲಾಗಿತ್ತು. ನಾವು ಪರೀಕ್ಷೆ ಪ್ರಶ್ನೆ ಪತ್ರಿಕೆಗಳನ್ನು ಇರಿಸಿದ್ದ ಕೆಂದ್ರಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಿದ್ದೆವು ಭದ್ರತಾ ಸಿಬ್ಬಂದಿಗಳನ್ನೂ ನಿಯೋಜಿಸಿದ್ದೆವು. ಇಷ್ಟಿದ್ದರೂ ಸೋರಿಕೆ ಹೇಗಾಯ್ತು ಎಂಬುವುದೇ ತಿಳಿಯುತ್ತಿಲ್ಲ.

- ವಿಕಾಸ್ ಸಹಾಯ್, ಲೋಕ ರಕ್ಷಕ ಮಂಡಳಿಯ ಅಧ್ಯಕ್ಷ

ಗುಜರಾತ್ ಪೊಲೀಸ್ ಕಾನ್ಸ್‌ಟೇಬಲ್ ವಿಭಾಗದ 9000 ಹುದ್ದೆಗಳಿಗೆ ನೇಮಕಾತಿ ನಡೆಯಬೇಕಿತ್ತು. ಇದಕ್ಕಾಗಿ ಅರ್ಜಿ ಸಲ್ಲಿಸಿದ್ದ 8.75 ಲಕ್ಷ ಅಭ್ಯರ್ಥಿಗಳಿಗೆ ಇಲ್ಲಿನ 2440 ಕೇಂದ್ರಗಳಲ್ಲಿ ಪರೀಕ್ಷೆಯನ್ನು ಆಯೋಜಿಸಲಾಗಿತ್ತು. ಆದರೀಗ ಪರೀಕ್ಷೆ ರದ್ದಾಗಿದ್ದು ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸುವುದಾಗಿ ಮಂಡಳಿ ತಿಳಿಸಿದೆ .