ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಈ ವಿಷಯವನ್ನು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ನಗದು ಸಂಗ್ರಹವಿದೆ. ಆತಂಕಕ್ಕೊಳಗಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ನವದೆಹಲಿ(ನ. 15): ಕಾಳಧನಿಕರು ತಮ್ಮ ಬಳಿ ಇರುವ ಹಣವನ್ನು ಹೇಗಾದರು ಬಿಳಿ ಮಾಡಲು ನಿರಂತರ ಪ್ರಯತ್ನದಲ್ಲಿದ್ದಾರೆ. ಬ್ಯಾಂಕ್’ಗಳಲ್ಲಿ ಒಬ್ಬನೇ ವ್ಯಕ್ತಿ ವಿವಿಧ ದಾಖಲೆಗಳನ್ನು ನೀಡಿ ನೋಟು ಬದಲಾವಣೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ದೇಶಾದ್ಯಂತ ವರದಿಯಾಗುತ್ತಿವೆ. ಈ ಅಕ್ರಮ ವಹಿವಾಟನ್ನು ತಡೆಗಟ್ಟಲು ಕೇಂದ್ರ ಸರಕಾರ ಹಲವು ಪ್ರತಿತಂತ್ರಗಳನ್ನು ರೂಪಿಸಿದೆ. ಚುನಾವಣೆ ವೇಳೆ ಮತದಾರನ ಕೈಗೆ ಇಂಕು ಹಾಕುವಂತೆ ಬ್ಯಾಂಕ್’ಗಳಿಗೆ ನೋಟು ಬದಲಾವಣೆಗೆ ಬರುವ ಗ್ರಾಹಕರ ಕೈಗೂ ಶಾಹಿ ಹಾಕುವ ಕ್ರಮವೂ ಇದರಲ್ಲಿ ಒಳಗೊಂಡಿದೆ.

ಇಂದು ಸುದ್ದಿಗೋಷ್ಠಿಯಲ್ಲಿ ಕೇಂದ್ರ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಶಕ್ತಿಕಾಂತ ದಾಸ್ ಈ ವಿಷಯವನ್ನು ತಿಳಿಸಿದ್ದಾರೆ. ದೇಶದಲ್ಲಿ ಸಾಕಷ್ಟು ನಗದು ಸಂಗ್ರಹವಿದೆ. ಆತಂಕಕ್ಕೊಳಗಾಗಬೇಕಾದ ಸನ್ನಿವೇಶ ಸೃಷ್ಟಿಯಾಗಿಲ್ಲ ಎಂದವರು ಸ್ಪಷ್ಟಪಡಿಸಿದ್ದಾರೆ.

ನಕಲಿ ನೋಟುಗಳ ಹಾವಳಿ ತಪ್ಪಿಸಲು ಸೂಕ್ಷ್ಮವೆನಿಸಿದ ಕೆಲ ಪ್ರದೇಶಗಲ್ಲಿ ವಿಶೇಷ ಕಾರ್ಯಪಡೆಗಳನ್ನು ರಚಿಸಿ ನಿಯೋಜಿಸುತ್ತಿರುವುದಾಗಿ ದಾಸ್ ತಿಳಿಸಿದ್ದಾರೆ. ಅಲ್ಲದೇ, ಮಠ, ಮಂದಿರಗಳು ತಮ್ಮಲ್ಲಿ ಭಕ್ತರು ಇರಿಸುವ 500 ರೂ.ಗಿಂತ ಕಡಿಮೆ ಮುಖಬೆಲೆಯ ನೋಟುಗಳನ್ನು ಬ್ಯಾಂಕ್’ಗಳಿಗೆ ಹಾಕಬೇಕೆಂದು ಸರಕಾರ ಮನವಿ ಮಾಡಿಕೊಂಡಿದೆ. ಇದರಿಂದ ಆ ನೋಟುಗಳು ಮಾರುಕಟ್ಟೆಯಲ್ಲಿ ಚಲಾವನೆಯಾಗಿ ಜನಸಾಮಾನ್ಯರ ಚಿಲ್ಲರೆ ಸಮಸ್ಯೆಗಳಿಗೆ ನೆರವಾಗಬಹುದು ಎಂದು ಶಕ್ತಿಕಾಂತ್ ದಾಸ್ ಕರೆಕೊಟ್ಟಿದ್ದಾರೆ.