ಮಕ್ಕಳಲ್ಲಿ ನಗದು ರಹಿತ ವಹಿವಾಟಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ಸಾರ್ವಜನಿಕ​ರಲ್ಲೂ ಕ್ಯಾಶ್‌ಲೆಸ್‌ ವಹಿವಾಟಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದರು.

ಬೆಂಗಳೂರು: ನಗದು ರಹಿತ ವಹಿವಾಟು ಬಗ್ಗೆ ಸಾರ್ವಜನಿ​ಕರಲ್ಲಿ ಹಾಗೂ ಮಕ್ಕಳಲ್ಲಿ ಜಾಗೃತಿ ಮೂಡಿ​ಸುವ ಉದ್ದೇಶದಿಂದ ಮುಂದಿನ ದಿನಗಳಲ್ಲಿ ಪಠ್ಯ ಪುಸ್ತಕದಲ್ಲಿ ‘ನಗದು ರಹಿತ ವಹಿ​ವಾಟು' ಕುರಿತ ಪಠ್ಯ ಅಳವಡಿಕೆಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಕೇಂದ್ರ ಸಚಿವ ಸದಾನಂದ ಗೌಡ ತಿಳಿಸಿದ್ದಾರೆ.

ಬನಶಂಕರಿಯಲ್ಲಿನ ನಗರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕೆನರಾ ಬ್ಯಾಂಕ್‌ ಆಯೋಜಿಸಿದ್ದ ವಿವಿಧ ಇಲಾಖೆಗಳಿಗೆ ನೀಡುವ ಸಾಲ ಸೌಲಭ್ಯಗಳ ಕುರಿತ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಮಕ್ಕಳಲ್ಲಿ ನಗದು ರಹಿತ ವಹಿವಾಟಿನ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ. ಈ ಮೂಲಕ ಸಾರ್ವಜನಿಕ​ರಲ್ಲೂ ಕ್ಯಾಶ್‌ಲೆಸ್‌ ವಹಿವಾಟಿನ ಕುರಿತು ಜಾಗೃತಿ ಮೂಡಿಸುವ ಉದ್ದೇಶವಿದೆ ಎಂದರು.

ಕೇಂದ್ರ ಸರ್ಕಾರ ದೇಶದಲ್ಲಿ ನಗದು ರಹಿತ ವ್ಯವಸ್ಥೆಯನ್ನು ಜಾರಿಗೊಳಿಸಲು ಮುಂದಾಗಿದೆ. ಅದರ ಹಿನ್ನೆಲೆಯಲ್ಲಿ ದೇಶದ ಜನತೆಗೆ ಈ ಕುರಿತು ಮಾಹಿತಿ ನೀಡ​ಬೇ​ಕಿದ್ದು, ಪ್ರಮುಖವಾಗಿ ಭವಿಷ್ಯದ ಪ್ರಜೆ​ಗ​ಳಾ​ಗಿರುವ ಮಕ್ಕಳಿಗೆ ನಗದು ರಹಿತ ವ್ಯವ​ಸ್ಥೆಯ ಕುರಿತು ಜಾಗೃತಿ ಮೂಡಿಸು​ವುದು ಅನಿವಾರ್ಯವಾಗಿದೆ ಎಂದು ಹೇಳಿದರು.

ಫಲಾನುಭವಿಗಳಿಗೆ ತೊಂದರೆ: ‘ವಸತಿ ನಿರ್ಮಾಣಕ್ಕಾಗಿ ಫಲಾನುಭವಿಗಳಿಗೆ ಸರ್ಕಾರದಿಂದ ಹಣ ಬಿಡುಗಡೆಯಾಗಿದೆ. ಆದರೆ ಬಿಡುಗಡೆಯಾಧ ಹಣ ಪಡೆದು ಮನೆ ನಿರ್ಮಾಣ ಕಾರ್ಯದಲ್ಲಿ ತೊಡಗಲು ಫಲಾನುಭವಿಗಳಿಗೆ ತೊಂದರೆಯಾಗುತ್ತಿದೆ. ವಾರದಲ್ಲಿ ಕೇವಲ ರೂ.24 ಸಾವಿರ ಹಣ ಬಿಡಿಸಿಕೊಳ್ಳಲು ಅವಕಾಶವಿರುವ ಕಾರಣ, ಫಲಾನುಭವಿಗಳು ಸಮಸ್ಯೆ ಎದುರಿಸುತ್ತಿ​ದ್ದಾರೆ' ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲ ಬ್ಯಾಂಕ್‌'ಗಳ ಮ್ಯಾನೆಜರ್‌ಗಳು, ಕೇಂದ್ರ ಸಚಿವರ ಗಮನಕ್ಕೆ ತಂದರು.

ಇದಕ್ಕೆ ಉತ್ತರಿಸಿದ ಸದಾನಂದಗೌಡ, ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾದ ನಿಯಮಗಳಿಗೆ ತಕ್ಕಂತೆ ನಾವೆಲ್ಲ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದಕ್ಕಿಂತ ಹೆಚ್ಚು ಹಣ ನೀಡಲು ನಿಯಮಗಳ ಪ್ರಕಾರ ಸಾಧ್ಯವಿಲ್ಲ. ಫಲಾನುಭವಿಗಳ ತೊಂದರೆಗಳ ಕುರಿತು ಉನ್ನತ ಮಟ್ಟದ ಸಭೆಯಲ್ಲಿ ಚರ್ಚಿ​ಸುವ ಭರವಸೆ ನೀಡಿದರು.

ಕಪ್ಪುಹಣದ ವಿರುದ್ಧದ ಪ್ರಧಾನ ಮಂತ್ರಿಯವರು ನಡೆಸುತ್ತಿರುವ ಹೋರಾಟ​ದಲ್ಲಿ ಬ್ಯಾಂಕ್‌ ಸಿಬ್ಬಂದಿ ಹಣ ಮಾಡುತ್ತಿದ್ದಾರೆ ಎಂದು ಕೆಲವರು ತಪ್ಪು ಮಾಹಿತಿ ಹರಡುತ್ತಿದ್ದಾರೆ. ಒಂದೆರಡು ಬ್ಯಾಂಕ್‌'ಗಳು ಮಾಡಿದ ತಪ್ಪಿಗೆ ದೇಶದ ಎಲ್ಲ ಬ್ಯಾಂಕ್‌ಗಳನ್ನು ಆರೋಪಿಗಳಂತೆ ನೋಡು​ವುದು ಸರಿಯಲ್ಲ. ಶೇ.40ರಷ್ಟುನಗದು ರಹಿತ ವಹಿವಾಟು ನಡೆದರೆ ದೇಶದ ಅತಿದೊಡ್ಡ ಸಾಧನೆಯಾಗುತ್ತದೆ. ಹೊಸ ನೋಟುಗಳಿ​ಂದಲೂ ಸಮಾಜದಲ್ಲಿ ಕಪ್ಪು ಹಣ ಹೆಚ್ಚ​ಬಹುದು. ಆದರೆ, ಕೇಂದ್ರ ಸರ್ಕಾರ ಇಂತಹ ಕಪ್ಪು ಹಣ ಚಲಾವಣೆಯಾಗದ ರೀತಿಯಲ್ಲಿ ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂ​ಡಿದೆ ಎಂದು ಸಚಿವ ಸದಾನಂದ ಗೌಡ ಮಾಹಿತಿ ನೀಡಿದರು.

ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳನ್ನು ರದ್ದು ಮಾಡುವ ಕುರಿತು ನಮಗೂ ಮಾಹಿತಿ ಇರಲಿಲ್ಲ. ಗ್ರಾಮೀಣ ಭಾಗಗಳಲ್ಲಿ ರೂ.100 ನೋಟುಗಳ ಹೆಚ್ಚು ಅಗತ್ಯವಿದ್ದು, ನೋಟುಗಳು ದೊರೆಯದೆ ರೈತರು ತೊಂದರೆ ಅನುಭವಿಸಿದ್ದಾರೆ. ಆದರೆ, ತೊಂದರೆ ನಡುವೆಯೂ ಅವರು ಬೆಂಬಲ ಸೂಚಿಸಿದ್ದಾರೆ. ಬೆಂಗಳೂರಿನ ಮಲ್ಲೇ​ಶ್ವರದ ಶಾಸಕ ಡಾ.ಸಿ.ಎನ್‌. ಅಶ್ವತ್ಥ್ ನಾರಾಯಣ ಅವರು ಕ್ಷೇತ್ರದ ಪ್ರತಿಯೊ​ಬ್ಬರಿಗೂ ಬ್ಯಾಂಕ್‌ ಖಾತೆ ಹೊಂದವಂತೆ ತಿಳಿಸಿದ್ದು, ನಗದು ರಹಿತ ವಹಿವಾಟಿನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂ​ಡಿ​ದ್ದಾರೆ. ಅದೇ ರೀತಿಯಲ್ಲಿ ಬ್ಯಾಂಕ್‌ ಸಿಬ್ಬಂದಿ ಸಹ ನಗದು ರಹಿತ ವಹಿವಾಟಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು.

ಭಯೋತ್ಪಾದನೆ ನಿಂತಿದೆ!
ದೇಶದಲ್ಲಿ ರೂ.500, ರೂ.1000 ಮುಖ​ಬೆಲೆಯ ನೋಟುಗಳನ್ನು ಅಮಾನ್ಯ​ಗೊಳಿಸಿದ ನಂತರ ಕಾಶ್ಮೀರದಲ್ಲಿ ಭಯೋತ್ಪನೆ ನಿಂತಿದೆ. ಇದರೊಂದಿಗೆ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಈ ಹಿಂದೆ ಭಯೋತ್ಪಾದಕ ಚಟುವಟಿಕೆಗಳಿಗೆ ಕಪ್ಪು ಹಣ, ನಕಲಿ ನೋಟುಗಳನ್ನು ಬಳಸಲಾಗುತ್ತಿತ್ತು. ಜಾರ್ಖಂಡ್‌,​ಆಂಧ್ರ​ಪ್ರದೇಶ ಸೇರಿ ಹಲವು ಭಾಗಗಳಲ್ಲಿ ನಕ್ಸಲರ ಬಳಿಯೂ ಸಾವಿರಾರು ಕೋಟಿ ಹಳೆಯ ನೋಟು ದೊರೆತಿವೆ. ದೇಶದಲ್ಲಿ ಭಯೋತ್ಪಾದನೆ, ನಕಲಿ ನೋಟುಗಳ ಹಾವಳಿ ಹಾಗೂ ಕಪ್ಪುಹಣ ನಿಯಂತ್ರಿ​ಸುವಲ್ಲಿ ಕೇಂದ್ರದ ನೋಟು ಅಮಾನ್ಯ ನಿರ್ಧಾರ ಸಫಲವಾಗಿದೆ ಎಂದು ಸದಾನಂದಗೌಡ ಹರ್ಷ ವ್ಯಕ್ತಪಡಿಸಿದರು.

(epaper.kannadaprabha.in)