ಕಣ್ಮರೆಯಾಗಲಿವೆ ರಾಜ್ಯದ 1900 ಬಾರುಗಳು: ಬೊಕ್ಕಸಕ್ಕೆ ಹಾನಿಯಾಗದಂತೆ ಸರ್ಕಾರ ಮಾಡುತ್ತಿದೆ ಪ್ಲಾನ್!
ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿರುವ ಸುಮಾರು 1900 ಬಾರ್'ಗಳಿಗೆ ಇಂದು ಮಧ್ಯರಾತ್ರಿಯಿಂದಲೇ ಬೀಗ ಬೀಳಲಿದೆ. ಖಜಾನೆ ಹರಿದು ಬರುವ ದೊಡ್ಡ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ಬಾರ್ಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕೊನೆಯ ದಿನ ಬಂದ್ರೂ ಬಾರ್ ಮಾಲೀಕರು ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ.
ನವದೆಹಲಿ(ಜೂ.30): ಸುಪ್ರೀಂಕೋರ್ಟ್ ಆದೇಶದ ಮೇರೆಗೆ ರಾಜ್ಯದಲ್ಲಿರುವ ಸುಮಾರು 1900 ಬಾರ್'ಗಳಿಗೆ ಇಂದು ಮಧ್ಯರಾತ್ರಿಯಿಂದಲೇ ಬೀಗ ಬೀಳಲಿದೆ. ಖಜಾನೆ ಹರಿದು ಬರುವ ದೊಡ್ಡ ಆದಾಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದ್ದು, ಬಾರ್ಗಳನ್ನು ಉಳಿಸಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಕೊನೆಯ ದಿನ ಬಂದ್ರೂ ಬಾರ್ ಮಾಲೀಕರು ಮಾತ್ರ ಇನ್ನೂ ಗೊಂದಲದಲ್ಲೇ ಇದ್ದಾರೆ.
ಇಂದು ಮಧ್ಯರಾತ್ರಿಯಿಂದ ಬಾರ್ ಬಂದ್!
ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿ 500 ಮೀಟರ್ ವ್ಯಾಪ್ತಿಯಲ್ಲಿರುವ ಬಾರುಗಳಿಗೆ ಇಂದು ಮಧ್ಯ ರಾತ್ರಿಯಿಂದಲೇ ಬೀಗ ಬೀಳಲಿದೆ. ಬಾರುಗಳನ್ನು ಮುಚ್ಚಲು ಜೂನ್ 30ರವರೆಗೆ ಅವಕಾಶ ನೀಡಿತ್ತು. ಹೀಗಾಗಿ ಬೆಂಗಳೂರು ನಗರದ 340 ಬಾರುಗಳು ಸೇರಿದಂತೆ 1900 ಬಾರುಗಳು ಕಣ್ಮರೆಯಾಗಲಿವೆ. ರಾಜ್ಯದ ನಗರ ಪಟ್ಟಣದಲ್ಲಿ ಹಾದು ಹೋಗುವ 858 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿಯನ್ನು ಸ್ಥಳೀಯ ರಸ್ತೆಗಳು ಎಂದು ಘೋಷಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಈ ಮಧ್ಯೆ ರಾಜ್ಯ ಹೆದ್ದಾರಿಗಳನ್ನು ಡಿನೋಟಿಫೈ ಮಾಡುವ ಮೂಲಕ ಸ್ಥಳೀಯ ರಸ್ತೆಗಳನ್ನಾಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ 1600 ಬಾರುಗಳನ್ನು ಉಳಿಸಿಕೊಂಡು ಬೊಕ್ಕಸಕ್ಕೆ ಹಾನಿಯಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಇನ್ನಿಲ್ಲದ ಕಸರತ್ತು ಮುಂದುವರೆಸಿದೆ.
ಬೆಂಗಳೂರಿನ ಕೇಂದ್ರ ಭಾಗವಾಗಿರುವ ಎಂಜಿ ರಸ್ತೆ. ಕೆಜಿ ರಸ್ತೆ, ಕ್ವೀನ್ಸ್ ರಸ್ತೆ, ಬಳ್ಳಾರಿ ರಸ್ತೆ ಸೇರಿದಂತೆ 45 ಕಿಲೋ ಮೀಟರ್ ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಬರಲಿದೆ. ಹೀಗಾಗಿ ರಾಜಧಾನಿಯ 340 ಬಾರ್'ಗಳು ಕ್ಲೋಸ್ ಆಗಲಿವೆ. ಬಾರುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಬಾರ್ ಅಸೋಸೊಯೇಷನ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದು, ಆದೇಶವನ್ನು ಪ್ರಶ್ನಿಸಿದ್ದು, ಈವರೆಗೂ ಆದೇಶ ಆದೇಶ ಹೊರಬಿದ್ದಿಲ್ಲ. ಮತ್ತೊಂದೆಡೆ ರಾಜ್ಯ ಸರ್ಕಾರವೂ ಕೂಡ ನಗರ ಮತ್ತು ಪಟ್ಟಣಗಳಲ್ಲಿ ಹಾದು ಹೋಗುವ ರಸ್ತೆಗಳನ್ನು ಕಾರ್ಪೋರೇಷನ್ ವ್ಯಾಪ್ತಿಗೆ ನೀಡಿ ವಿನಾಯ್ತಿ ನೀಡುವಂತೆ ಮನವಿ ಮಾಡಿದ್ದು, ಈ ಸಂಬಂಧವೂ ಕೇಂದ್ರ ಸಾರಿಗೆ ಇಲಾಖೆಯಿಂದ ಯಾವುದೇ ಉತ್ತರ ಬಂದಿಲ್ಲ.
ರಾಜ್ಯದ ಬೊಕ್ಕಸಕ್ಕೆ ಅಬಕಾರಿಯಿಂದಲೇ ಹೆಚ್ಚಿನ ಆದಾಯ ಬರುತ್ತಿದೆ. ಈ ಆದಾಯವನ್ನು ಕಳೆದುಕೊಳ್ಳಲು ರಾಜ್ಯ ಸರ್ಕಾರ ಸುತಾರಂ ಸಿದ್ದವಿಲ್ಲ. ಹೀಗಾಗಿ ರಾಜ್ಯ ರಸ್ತೆಗಳನ್ನು ಡಿನೋಟಿಫೈ ಮಾಡಿ ಸ್ಥಳೀಯ ರಸ್ತೆಗಳು ಎಂದು ನೋಟಿಫೀಕೇಷನ್ ಹೊರಡಿಸಲು ಸಿದ್ದತೆ ನಡೆಸಿದೆ. ಹೀಗಾಗಿ ರಾಜ್ಯ ಹೆದ್ದಾರಿಯಲ್ಲಿರುವ ಬಾರ್ಗಳ ಮಾಲೀಕರು ಕೊಂಚ ರಿಲೀಫ್ ಆಗಿದ್ದು, ಇನ್ನೂ ಯಾವುದೇ ಆದೇಶ ಹೊರಬಿದ್ದಿಲ್ಲ. ಜುನ್ 30ಕ್ಕೆ ಮುಕ್ತಾಯವಾಗಲಿರುವ ಬಾರ್ ಲೈಸೆನ್ಸ್ ಅವದಿಯನ್ನು ಸರ್ಕಾರ ಇನ್ನೂ ನವೀಕರಣ ಮಾಡದೇ ಇರೋದು ಮಾಲೀಕರ ತಲೆನೋವಿಗೆ ಕಾಅರಣವಾಗಿದೆ. ಒಟ್ಟಾರೆ ಸುಪ್ರೀಂ ಕೋರ್ಟ್ ಆದೇಶ ಬಾರ್ ಮಾಲೀಕರು ಹಾಗೂ ರಾಜ್ಯ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದ್ದು, ಬಾರ್ಗಳನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ಮುಂದುವರೆಸಿದೆ.