25 ಕೋಟಿ ಗಿಡ ನೆಡಲು ಸದ್ಗುರು, ಸರ್ಕಾರ ಒಪ್ಪಂದ
ದೇಶಾದ್ಯಂತ ನದಿಗಳ ರಕ್ಷಣೆಗಾಗಿ ಆಂದೋಲನ ನಡೆಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶಾ ಫೌಂಡೇಶನ್ ಜೊತೆ ಸೇರಿ ರಾಜ್ಯದಲ್ಲಿ 25 ಕೋಟಿ ಗಿಡ ನೆಡುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ.
ಬೆಂಗಳೂರು: ದೇಶಾದ್ಯಂತ ನದಿಗಳ ರಕ್ಷಣೆಗಾಗಿ ಆಂದೋಲನ ನಡೆಸುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಈಶಾ ಫೌಂಡೇಶನ್ ಜೊತೆ ಸೇರಿ ರಾಜ್ಯದಲ್ಲಿ 25 ಕೋಟಿ ಗಿಡ ನೆಡುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಸಹಿ ಹಾಕಿದೆ.
ಈಶಾ ಫೌಂಡೇಶನ್ ರಾಜಧಾನಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ನದಿಗಳನ್ನು ರಕ್ಷಿಸಿ ಅಭಿಯಾನದ ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಈಶಾ ಫೌಂಡೇಶನ್ ಸದ್ಗುರು ಜಗ್ಗಿ ಅವರು ಗಿಡ ನೆಡುವ ಒಪ್ಪಂದಕ್ಕೆ ಸಹಿ ಹಾಕಿದರು.
ನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಒಪ್ಪಂದದ ಮೂಲಕ ನದಿ ಪಾತ್ರದ ಎರಡೂ ಭಾಗಗಳಲ್ಲಿ ಸುಮಾರು ಒಂದು ಕಿಲೋಮೀಟರ್ ಪ್ರದೇಶದಲ್ಲಿ ಗಿಡ ನೆಡಲಾಗುವುದು, ಜತೆಗೆ ಸರ್ಕಾರಿ ಜಮೀನನಲ್ಲಿ ಗಿಡ ನೆಡಲು ಮುಕ್ತ ಅವಕಾಶ ನೀಡಲಾಗುವುದೆಂದು ಪ್ರಕಟಿಸಿದರು.
ಸದ್ಗುರು ಹಮ್ಮಿಕೊಂಡಿರುವ ಅಭಿಯಾನ ಸಮಯೋಚಿತವಾಗಿದೆ. ನಾವೆಲ್ಲರೂ ಕಡ್ಡಾಯವಾಗಿ ಮಾಡಲೇಬೇಕಾದ ಕಾರ್ಯವನ್ನು ಅವರು ಕೈಗೆತ್ತಿಕೊಂಡಿದ್ದಾರೆ. ಇದಕ್ಕಿಂತ ಮಹತ್ತರ ಕಾರ್ಯ ಮತ್ತೊಂದು ಇಲ್ಲ. ಮಹತ್ತರ ಕಾರ್ಯಕ್ರಮಕ್ಕೆ ಸರ್ಕಾರ ಸದಾ ನಿಮ್ಮ ಜತೆಯಲ್ಲಿರಲಿದೆ ಎಂದು ಭರವಸೆ ನೀಡಿದರು.