ಪಿಟಿಸಿಎಲ್‌ ಜಮೀನು ಕೊಳ್ಳುವವರು ಭೂ ಸುಧಾರಣೆ ಕಾಯ್ದೆಯಡಿ ಅರ್ಹರಿರಬೇಕು | ಕಂದಾಯ ಇಲಾಖೆಯಿಂದ ಮತ್ತಷ್ಟು ಷರತ್ತು | ಅರ್ಜಿದಾರರು ಈ ಜಮೀನನ್ನು ಇತ್ತೀಚಿನ ಮಾರುಕಟ್ಟೆಬೆಲೆಗೆ ಮಾರಾಟ ಮಾಡಬೇಕು | ಜಮೀನು ಮಾರಾಟ ಮಾಡಿ ಬಂದ ಹಣದಿಂದ ಬೇರೆ ಕಡೆ ಜಮೀನು ಖರೀದಿಸಬೇಕು | ಜಮೀನು ಖರೀದಿಸಿರುವ ಬಗ್ಗೆ ಕಡ್ಡಾಯವಾಗಿ ಶುದ್ಧ ನೋಂದಣಿ ಕ್ರಯ ಪತ್ರ ಸಲ್ಲಿಸಬೇಕು

ಬೆಂಗಳೂರು (ನ.13): ಪರಿಶಿಷ್ಟಜಾತಿ, ಪಂಗಡಗಳ ಫಲಾನುಭವಿ​ಗಳಿಗೆ ಮಂಜೂರು ಮಾಡಿದ ಜಮೀನು ಮಾರಾಟ ದುರುಪಯೋಗ ತಡೆಗಟ್ಟುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಪಿಟಿಸಿಎಲ್‌ ಕಾಯ್ದೆಗೆ ಮತ್ತಷ್ಟು ಷರತ್ತುಗಳನ್ನು ವಿಧಿಸಿದೆ.

Add Asianetnews Kannada as a Preferred SourcegooglePreferred

ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ವರ್ಗದ ಜನ ಭೂ ರಹಿತರಾಗುವುದನ್ನು ತಪ್ಪಿಸುವ ಉದ್ದೇಶದಿಂದ ಕಂದಾಯ ಇಲಾಖೆ ಗುರುವಾರ ಸುತ್ತೋಲೆ ಹೊರಡಿಸಿ​ದ್ದು, 2009ರ ಸುತ್ತೋಲೆ​ಯನ್ನು ಹಿಂಪಡೆದುಕೊಂಡಿದೆ.

‘ಪರಿಶಿಷ್ಟಜಾತಿ ಮತ್ತು ಪಂಗಡ ವರ್ಗದ ಜನರಿಗೆ ಮಂಜೂರು ಮಾಡಿರುವ ಜಮೀನು ಪರಭಾರೆಗೆ ಸರ್ಕಾರದ ಪೂರ್ವಾನುಮತಿ ಕೋರಿ ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಅರ್ಜಿದಾರರು ಬದಲಿ ಜಮೀನನ್ನು ಕ್ರಯಕ್ಕೆ ಪಡೆದುಕೊಂಡ ಬಗ್ಗೆ ಶುದ್ಧ ನೋಂದಣಿ ಕ್ರಯ ಪತ್ರ ಹಾಜರುಪಡಿಸಿದರೆ ಮಾತ್ರ ಅಂಥ ಪ್ರಸ್ತಾವನೆಗಳನ್ನು ಸರ್ಕಾರಕ್ಕೆ ಸಲ್ಲಿಸಬೇಕು' ಎಂದು ಕಂದಾಯ ಇಲಾಖೆ ಸುತ್ತೋಲೆ ಹೊರಡಿಸಿದೆ.

ಪಿಟಿಸಿಎಲ್‌ ಕಾಯ್ದೆಗೆ ಸಂಬಂಧಿಸಿದ ಪ್ರಸ್ತಾವನೆ​ಗಳನ್ನು ಜಿಲ್ಲಾಧಿಕಾರಿಗಳು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು. ಪ್ರಾದೇಶಿಕ ಆಯುಕ್ತರು ನಿಯ​ಮಾನು​ಸಾರ ಪರಿಶೀಲಿಸಿ ಅದನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿ​ಕಾರಿಗಳು, ತಹಸೀಲ್ದಾರ್‌ಗಳಿಗೆ ಸೂಚಿಸಿದೆ.

ಪಿಟಿಸಿಎಲ್‌ ಕಾಯ್ದೆ ಅಡಿ ಜಮೀನು ಮಾರಾಟ ಮಾಡಲು ಅನುಮತಿ ಕೋರಿ ಸಲ್ಲಿಕೆಯಾಗುತ್ತಿದ್ದ ಪ್ರಸ್ತಾವನೆಗಳನ್ನು ಕಳುಹಿಸುವ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತರ ಹಂತದಲ್ಲಿ ವಿಳಂಬ​ವಾಗು​ತ್ತಿತ್ತು. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ನೇರ​​ವಾಗಿ ಪಿಟಿಸಿಎಲ್‌ ಕಾಯ್ದೆಗೆ ಸಂಬಂಧಿಸಿದ ಪ್ರಸ್ತಾವನೆ​​ಗಳನ್ನು ಸರ್ಕಾರಕ್ಕೆ ನೇರವಾಗಿ ಸಲ್ಲಿಸುತ್ತಿ​ದ್ದರು. ಈ ವರ್ಗದ ಜನರಿಗೆ ಮಂಜೂರಾಗಿರುವ ಜಮೀನು​ಗಳನ್ನು ಅತ್ಯಂತ ಕಡಿಮೆ ದರದಲ್ಲಿ ಖರೀದಿಸುತ್ತಿರುವ ಹಲವು ಪ್ರಭಾವಿ ಸಂಘ, ಸಂಸ್ಥೆಗಳು, ವ್ಯಕ್ತಿಗಳು ಅತ್ಯಂತ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಈ ಹಿನ್ನಲೆಯಲ್ಲಿ ಕಂದಾಯ ಇಲಾಖೆ ಹೊಸ ಸುತ್ತೋಲೆ ಹೊರಡಿಸಿದೆ.

ಜಮೀನುಗಳ ಬೆಲೆ ವ್ಯಾಪಕವಾಗಿ ಹೆಚ್ಚಳ​ವಾಗುತ್ತಿರುವ ಕಾರಣ ಪಿಟಿಸಿಎಲ್‌ ಅಡಿ ಮಂಜೂ​ರಾದ ಜಮೀನುಗಳು ಅವ್ಯಾ​ಹತ​ವಾಗಿ ಮಾರಾಟ​ವಾಗುತ್ತಿದೆ. ಪರಿಶಿಷ್ಟಜಾತಿ, ಪಂಗಡ ವರ್ಗದ ಜನರ ಜೀವನೋಪಾಯಕ್ಕೆ ಸರ್ಕಾರ ಮಂಜೂರು ಮಾಡಿರುವ ಜಮೀ​ನು​ಗಳು ಉದ್ಯಮಿಗಳು, ಕಟ್ಟಡ ನಿರ್ಮಾಣ ಸಂಸ್ಥೆಗಳು, ಪ್ರತಿಷ್ಠಿತ ಗೃಹ ನಿರ್ಮಾಣ ಸಹಕಾರ ಸಂಘಗಳು ಮತ್ತು ಪ್ರಭಾವಶಾಲಿ ರಾಜಕಾರಣಿಗಳ ಕೈ ಸೇರುತ್ತಿವೆ.

ಬೆಂಗಳೂರು, ತುಮಕೂರು ಸೇರಿ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಪರಿಶಿಷ್ಟಜಾತಿ, ಪಂಗಡ ವರ್ಗದ ಜಮೀನುಗಳನ್ನು ಮಾರಾಟ ಮಾಡ​ಲಾಗು​ತ್ತಿದೆ. ಬಹುತೇಕ ಪ್ರಕರ​ಣಗಳಲ್ಲಿ ಈ ವರ್ಗದ ಜನರ ಆರ್ಥಿಕ ಸಂಕಷ್ಟವನ್ನು ಬಲಾಢ್ಯರು ದುರುಪಯೋಗ​ಪಡಿ​ಸಿ​​P​æೂಂಡು ಅವರಿಗೆ ಮಂಜೂರಾಗಿರುವ ಜಮೀನು​​​​​ಗಳನ್ನು ಕಡಿಮೆ ಬೆಲೆಯಲ್ಲಿ ಖರೀದಿ​ಸುತ್ತಿದ್ದಾರೆ.

ಮಂಜೂರಾಗಿರುವ ಜಮೀನು ಮಾರಾಟ ಮಾಡಿದ ನಂತರ ಭೂರಹಿತರಾಗುತ್ತಿರುವ ಪರಿಶಿಷ್ಟಜಾತಿ, ಪಂಗಡ ವರ್ಗದ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಇಂಥÜ ಜಮೀನು ಮಾರಾಟ ಮಾಡುವ ಪೂರ್ವ​​ದಲ್ಲಿ ಹೊಸದಾಗಿ ಜಮೀನು ಖರೀದಿಸ​ಬೇಕೆಂಬ ನಿಬಂಧನೆ ಪಾಲನೆಯಾಗುತ್ತಿಲ್ಲ. ಮಾರಾಟ ಮಾಡುವಾಗಲೂ ಕೇವಲ ಕ್ರಯ ಪತ್ರವನ್ನಷ್ಟೇ ಹಾಜರುಪಡಿಸಿ, ನಂತರ ಕ್ರಯ ನೋಂದಣಿ ಪತ್ರ ಮಾಡದೇ ಸರ್ಕಾರ ವಿಧಿಸಿರುವ ಷರತ್ತು, ನಿಬಂಧನೆ​ಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳ ಸಂಖ್ಯೆ​ಯೂ ಹೆಚ್ಚಿವೆ. ಇದರಲ್ಲಿ ಕಂದಾಯ ಇಲಾಖೆ ಅಧಿ​ಕಾರಿ​ಗಳು, ಉದ್ಯಮಿಗಳ ಜತೆ ಕೈ ಜೋಡಿಸಿ ಹಲವು ಜಮೀನುಗಳು ಇಂದಿಗೂ ಮಾರಾಟವಾಗುತ್ತಿವೆ.

ಪಿಟಿಸಿಎಲ್‌ ಕಾಯ್ದೆ ಕಲಂ 4(1)ರ ಅನ್ವಯ ಮಂಜೂರಾತಿಯ ಯಾವುದೇ ಕಾಯ್ದೆ, ಮಂಜೂರಾತಿಯ ನಿಯಮಗಳಲ್ಲಿನ ಷರತ್ತುಗಳಿಗೆ ವಿರುದ್ಧವಾಗಿ ಪರಭಾರೆ ಮಾಡು​ವುದು ಕಾಯ್ದೆಯ ಉಲ್ಲಂಘನೆ. ಮಂಜೂ​ರಾತಿ ಷರತ್ತುಗಳಲ್ಲಿ ವಿಧಿಸಲಾಗಿ​ರುವ ಪರಭಾರೆ ನಿಷೇಧ ಅವಧಿ ಪೂರ್ಣ​ಗೊಂಡಿಲ್ಲದ ಜಮೀನುಗಳನ್ನು ಪರಭಾರೆ ಮಾಡಲು ಅನುಮತಿ ನೀಡಲು ಅವಕಾಶ​ವಿಲ್ಲ. ಆದರೂ ಪಿಟಿಸಿಎಲ್‌ ಅಡಿ ಮಂಜೂರಾಗಿರುವ ಜಮೀನುಗಳು ಮಾರಾಟವಾಗುತ್ತಲೇ ಇವೆ.
ಹತ್ತು ವರ್ಷಗಳಲ್ಲಿ ಪಿಟಿಸಿಎಲ್‌ ಕಾಯ್ದೆಯಡಿ ಒಟ್ಟು 22,938 ಪ್ರಕರಣಗಳು ಉಲ್ಲಂಘನೆಯಾಗಿ ನೋಂದಣಿಯಾಗಿವೆ. ಈ ಪೈಕಿ 18,165 ಪ್ರಕರಣ​ಗಳನ್ನು ಕಂದಾಯ ಇಲಾಖೆ ಬಗೆಹರಿಸಿದೆ. ಉಳಿದ 4,773 ಪ್ರಕರಣಗಳು ವಿಚಾರಣೆ ಹಂತದಲ್ಲಿವೆ.