ಕಾರು ಹರಿದು ಬಾಲಕಿ ಸಾವು : ಬಿಜೆಪಿ ಶಾಸಕರ ಪುತ್ರಗೆ ಜಾಮೀನು
ಬಿಜೆಪಿ ಶಾಸಕರ ಪುತ್ರನ ಕಾರು ಹರಿದು ಬಾಲಕಿಯೋರ್ವಳು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಷನ್ ಬೇಲ್ ಮಂಜೂರು ಮಾಡಿ ಆತನನ್ನು ಬಿಡುಗಡೆಗೊಳಿಸಲಾಗಿದೆ. ಗೋವಾ ಬಿಜೆಪಿ ಶಾಸಕರ ಪುತ್ರನಿಂದ ಬೆಳಗಾವಿಯಲ್ಲಿ ಈ ಅಪಘಾತ ನಡೆದಿತ್ತು.
ಬೆಳಗಾವಿ : ಕಾರು ಹರಿದು ಬಾಲಕಿಯೋರ್ವಳು ಸಾವನ್ನಪ್ಪಿದ್ದ ಪ್ರಕರಣ ಸಂಬಂಧ ಬಂಧಿತನಾಗಿದ್ದ ಗೋವಾ ಬಿಜೆಪಿ ಶಾಸಕರ ಪುತ್ರನಿಗೆ ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿದೆ.
ಸೋಮವಾರ ಬೆಳಗಾವಿಯ ಪ್ರೂಟ್ ಮಾರ್ಕೆಟ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಗೋವಾ ಬಿಜೆಪಿ ಶಾಸಕ ಗ್ಲೇನ್ ಸೋಜಾ ಪುತ್ರ ಕಾಯಿಲ್ ಟಿಕ್ಲೋ ಎಂಬುವನಿಂದ ಈ ಅಪಘಾತ ನಡೆದಿತ್ತು.
ರಸ್ತೆ ದಾಟುತ್ತಿದ್ದ ಇಲ್ಲಿನ ಆಜಾದ್ ನಗರದ ನಿವಾಸಿ ತೇಹನಿಯತ್ ಬಿಸ್ತಿ ಎಂಬ ಬಾಲಕಿ ಶಾಸಕರ ಪುತ್ರ ಕಾರು ಹರಿದು ಸ್ಥಳದಲ್ಲಿ ಮೃತಪಟ್ಟಿದ್ದಳು. ಅಲ್ಲದೇ ಇನ್ನೋರ್ವ ಬಾಲಕಿ ಈ ವೇಳೆ ಗಂಭೀರವಾಗಿ ಗಾಯಗೊಂಡಿದ್ದು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಅಪಘಾತವಾದ ಸಂದರ್ಭದಲ್ಲಿ ಸ್ಥಳೀಯರು ಸೇರಿ ಕಾರಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ಉತ್ತರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆತನನ್ನು ಬಂಧಿಸಲಾಗಿದ್ದು, ಮಂಗಳವಾರ ಸ್ಟೇಷನ್ ಬೇಲ್ ನೀಡಿ ಬಿಡುಗಡೆ ಮಾಡಲಾಗಿದೆ.