ಮಹದಾಯಿ ಜಾಗೃತಿ ಸಭೆಗೆ ಗೋವಾ ಸಿಎಂ, ಶಾಸಕರ ಗೈರು
ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಗೋವಾ ಸಿಎಂ ಮನೋಹರ್ ಪರ್ರಿಕರ್ ಸೇರಿದಂತೆ ಬಹುತೇಕ ಶಾಸಕರು ಗೈರಾಗಿದ್ದರು.
ಪಣಜಿ: ಮಹದಾಯಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸೋಮವಾರ ಇಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಗೋವಾ ಸಿಎಂ ಮನೋಹರ್ ಪರ್ರಿಕರ್ ಸೇರಿದಂತೆ ಬಹುತೇಕ ಶಾಸಕರು ಗೈರಾಗಿದ್ದರು.
ಗೋವಾ ವಿಧಾನಸಭೆ ವತಿಯಿಂದ ಆಯೋಜಿತ ವಾಗಿದ್ದ ಈ ಕಾರ್ಯಕ್ರಮದಲ್ಲಿ 40 ಶಾಸಕರಲ್ಲಿ ಕೇವಲ ಆರು ಮಂದಿ ಮಾತ್ರ ಭಾಗವಹಿಸಿದ್ದರು. ಮಹದಾಯಿ ಬಚಾವೊ ಅಭಿಯಾನದ ನಾಯಕ ರಾಜೇಂದ್ರ ಕೆರ್ಕರ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಸ್ವತಃ ಗೋವಾ ನೀರಾವರಿ ಸಚಿವರೂ ಕಾರ್ಯಕ್ರಮದಿಂದ ಗೈರಾಗಿದ್ದರು. ಸಚಿವರು ಸೇರಿ ಎಲ್ಲ ಶಾಸಕರಿಗೂ ನಾವು ಆಹ್ವಾನಿಸಿದ್ದೆವು. ಆದರೆ, ಶಾಸಕರು ಭಾಗವಹಿಸದಿರುವುದು, ವಿಷಯಕ್ಕೆ ಸಂಬಂಧಿಸಿ ಅವರು ಗಂಭೀರವಾಗಿಲ್ಲ ಎಂಬುದನ್ನು ತೋರಿಸುತ್ತದೆ. ತಮ್ಮ ಪಕ್ಷ ಕರ್ನಾಟಕದಲ್ಲಿ ಗೆಲ್ಲಬೇಕೆಂಬ ಉದ್ದೇಶದಿಂದ ಗೋವಾ ಸರ್ಕಾರ ವಿವಾದಕ್ಕೆ ಸಂಬಂಧಿಸಿ ರಾಜ್ಯದ ಹಿತಾಸಕ್ತಿಯಲ್ಲಿ ರಾಜಿ ಮಾಡಿಕೊಳ್ಳಕೂಡದು ಎಂದು ಅವರು ಪ್ರತಿಪಾದಿಸಿದ್ದಾರೆ.