ಡೈರಿಯಲ್ಲಿರುವ ಎಲ್ಲಾ ಸಚಿವರೂ ರಾಜೀನಾಮೆ ನೀಡಬೇಕು: ಗೋ. ಮಧುಸೂದನ್ ಆಗ್ರಹ
ಗೋವಿಂದರಾಜು ಡೈರಿಯಲ್ಲಿ ನಮೂದಾಗಿರುವ ಎಲ್ಲಾ ಸಚಿವರೂ ರಾಜೀನಾಮೆ ನೀಡಬೇಕು ಎಂದು ಗೋ.ಮಧುಸೂದನ್ ಆಗ್ರಹಿಸಿದ್ದಾರೆ.
ಬೆಂಗಳೂರು(ಮಾ. 02): ಸ್ಟೀಲ್ ಬ್ರಿಡ್ಜ್ ಯೋಜನೆಯನ್ನು ಕೈಬಿಡುವ ಸರಕಾರದ ನಿರ್ಧಾರವನ್ನು ಬಿಜೆಪಿ ಮುಖಂಡ ಗೋ.ಮಧುಸೂದನ್ ಸ್ವಾಗತಿಸಿದ್ದಾರೆ. ಗೋವಿಂದರಾಜು ಡೈರಿ ಪ್ರಕರಣದ ಭೀತಿಯಿಂದ ಸರಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಬಿಜೆಪಿ ಮುಖಂಡ ವಿಶ್ಲೇಷಿಸಿದ್ದಾರೆ. ಅಲ್ಲದೇ, ಯೋಜನೆಗೆ ಯಾರಾರಿಂದ ಹಣ ಪಡೆಯಲಾಗಿದೆಯೋ, ಅವರಿಗೆಲ್ಲಾ ಹಣವನ್ನ ಮರಳಿಸಬೇಕು. ಆ ಬಳಿಕವಷ್ಟೇ ಯೋಜನೆ ರದ್ದು ಮಾಡಬೇಕು ಎಂದೂ ಈ ವೇಳೆ ಗೋ.ಮಧುಸೂದನ್ ಆಗ್ರಹಿಸಿದ್ದಾರೆ.
ಗೋವಿಂದರಾಜು ಡೈರಿಯಲ್ಲಿ ಯೋಜನೆಯಿಂದ 65 ಕೋಟಿ ರೂ ಪಡೆದಿರುವುದು ಹಾಗೂ ಬಿಡಿಎ ಅಧಿಕಾರಿ ಎಲ್.ರಘು ಅವರನ್ನು ವರ್ಗಾವಣೆ ಮಾಡಿರುವುದು ಸ್ಟೀಲ್ ಬ್ರಿಡ್ಜ್ ಯೋಜನೆಯಲ್ಲಿ ಸರಕಾರದ ಅವ್ಯವಹಾರ ನಡೆದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಮಧುಸೂದನ್ ಆರೋಪಿಸಿದ್ದಾರೆ.
ಗೋವಿಂದರಾಜು ಡೈರಿಯಲ್ಲಿ ನಮೂದಾಗಿರುವ ಎಲ್ಲಾ ಸಚಿವರೂ ರಾಜೀನಾಮೆ ನೀಡಬೇಕು ಎಂದು ಹೇಳಿದ ಮಧುಸೂದನ್, ಮುಖ್ಯಮಂತ್ರಿಗಳ ಸಲಹೆಗಾರ ಸ್ಥಾನದಿಂದ ಕೆಂಪಯನ್ನವರನ್ನು ಯಾವಾಗ ಕಿತ್ತುಹಾಕಲಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ.