ಜನರು ಹಾಗೂ ಜನಪ್ರತಿನಿಧಿಗಳು ಮಠಾಧೀಶರ ಕಾಲಿಗೆ ಬೀಳುವುದನ್ನು ನಿಲ್ಲಿಸುವವರೆಗೆ ದೇಶ ಉದ್ಧಾರವಾಗುವುದಿಲ್ಲ, ದೇಶದಲ್ಲಿರುವ ಶೇ. 95ರಷ್ಟು ಮಠಾಧೀಶರು ನಂಬಿಕೆ ಉಳಿಸಿಕೊಳ್ಳದೇ ಮಠಗಳ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಚಿಂತಕ ಜಿ.ಕೆ.ಗೋವಿಂದರಾವ್ ಟೀಕಿಸಿದ್ದಾರೆ.

ಬೆಂಗಳೂರು: ಜನರು ಹಾಗೂ ಜನಪ್ರತಿನಿಧಿಗಳು ಮಠಾಧೀಶರ ಕಾಲಿಗೆ ಬೀಳುವುದನ್ನು ನಿಲ್ಲಿಸುವವರೆಗೆ ದೇಶ ಉದ್ಧಾರವಾಗುವುದಿಲ್ಲ, ದೇಶದಲ್ಲಿರುವ ಶೇ. 95ರಷ್ಟು ಮಠಾಧೀಶರು ನಂಬಿಕೆ ಉಳಿಸಿಕೊಳ್ಳದೇ ಮಠಗಳ ಮೂಲಕ ದಬ್ಬಾಳಿಕೆ ಮಾಡುತ್ತಿದ್ದಾರೆ ಎಂದು ಚಿಂತಕ ಜಿ.ಕೆ.ಗೋವಿಂದರಾವ್ ಟೀಕಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಯನ ಸಭಾಂಗಣದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ ಹಮ್ಮಿಕೊಂಡಿದ್ದ ‘ಡಾ. ಬಿ.ಆರ್. ಅಂಬೇಡ್ಕರ್ ಧಮ್ಮ ದೀಕ್ಷ ಪರಿವರ್ತನಾ ದಿನ’ ಆಚರಣೆಯಲ್ಲಿ ಮಾತನಾಡಿದ ಅವರು, ದೇಶದಲ್ಲಿರುವ ಶೇ.95ರಷ್ಟು ಕಾವಿಧಾರಿಗಳು ತಮ್ಮ ಅಧಿಕಾರಕ್ಕಾಗಿ ಜನರನ್ನು ಜಾತಿ, ಧರ್ಮಗಳ ಸಂಕೋಲೆಯಲ್ಲಿ ಕಟ್ಟಿ ಹಾಕುತ್ತಿದ್ದಾರೆ. ಮನುಷ್ಯ ಹುಟ್ಟಿದ ಜಾತಿಯಲ್ಲೇ ಇರಬೇಕೆಂದು ಹೇಳಲು ಮಠಾಧೀಶರು ಯಾರು? ಎಂದು ಪ್ರಶ್ನಿಸಿದರು.

ಕಾವಿ ಧರಿಸಿದರೆ ವಿವೇಕ, ಅನುಭವ ಬರುವುದಿಲ್ಲ. ಅಧಿಕಾರದ ಪೀಠ ಬರುತ್ತದೆ. ಅಧಿಕಾರ ಬಂದ ಬಳಿಕ ದೇವರ ಏಜೆಂಟ್‌ಗಳಾಗುತ್ತಾರೆ ಎಂದ ಅವರು, ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ ವಿರೋಧಿಗಳಾಗಿರುವ ಎಲ್ಲಾ ಮಠಗಳ ಒಳಮರ್ಮ ಅಧಿಕಾರ ಉಳಿಸಿಕೊಳ್ಳುವುದಾಗಿದೆ ಎಂದು ಆರೋಪಿಸಿದರು.

ಕಾರ್ಯಕ್ರಮದಲ್ಲಿ ಕೊಳ್ಳೆಗಾಲದ ಜೀತೋವನದ ಮನೋರಖ್ಸಿತ ಭಂತೇ, ಲೇಖಕ ಸಿ.ಎಚ್. ರಾಜಶೇಖರ, ದಸಂಸ ವಿಭಾಗೀಯ ಸಂಚಾಲಕ ಜೀವನಹಳ್ಳಿ ಆರ್. ವೆಂಕಟೇಶ್ ಇತರರು ಉಪಸ್ಥಿತರಿದ್ದರು.