ನಕ್ಸಲರ ಟಾಪ್ ಬಾಸ್ ಗಣಪತಿ ಪದತ್ಯಾಗ- ಹೊಸ ನಾಯಕನ ಆಯ್ಕೆ!
ಮಾವೋವಾದಿ ಸಂಘಟನೆಯ ನಾಯಕ ಗಣಪತಿ ತಮ್ಮ ಸ್ಥಾನದಿಂದ ಕೆಳಗಿಳಿದಿದ್ದಾರೆ. ಇದೀಗ ಈ ಸ್ಥಾನಕ್ಕೆ ನೂನತ ನಾಯಕನನ್ನ ಆಯ್ಕೆ ಮಾಡಲಾಗಿದೆ. ಅಷ್ಟಕ್ಕೂ ಗಣಪತಿ ದಿಢೀರ್ ನಾಯಕ ಸ್ಥಾನ ತ್ಯಜಿಸಿದ್ದೇಕೆ? ಇಲ್ಲಿದೆ.
ವಿಶಾಖಪಟ್ಟಣ(ನ.08): ನಿಷೇಧಿತ ಸಿಪಿಐ (ಮಾವೋವಾದಿ) ಸಂಘಟನೆಯ ನಾಯಕ ಮುಪ್ಪಳ ಲಕ್ಷ್ಮಣರಾವ್ ಅಲಿಯಾಸ್ ಗಣಪತಿ (72), ನಾಯಕತ್ವದಿಂದ ಕೆಳಗಿಳಿದ್ದಾರೆ. ತೀವ್ರ ಮಂಡಿನೋವಿನಿಂದ ಬಳಲುತ್ತಿರುವ ಕಾರಣ ಸಂಘಟನೆಯ ನಾಯಕತ್ವ ಮತ್ತು ಗೆರಿಲ್ಲಾ ಕಾರ್ಯಾಚರಣೆಯಿಂದ ಹಿಂದೆ ಸರಿಯಲು ಗಣಪತಿ ನಿರ್ಧರಿಸಿದ್ದಾರೆ.
ಗಣಪತಿ ಅವರ ನಿರ್ಧಾರವನ್ನು ಸಂಘಟನೆ ಕೂಡಾ ಮಾನ್ಯ ಮಾಡಿದೆ ಎಂದು ಮೂಲಗಳು ತಿಳಿಸಿವೆ. ತೀವ್ರ ಮಂಡಿನೋವಿಗೆ ಹೋಮಿಯೋಪತಿ ಚಿಕಿತ್ಸೆ ಪಡೆಯುತ್ತಿದ್ದ ಗಣಪತಿ, ಅಲೋಪತಿ ಚಿಕಿತ್ಸೆ ಪಡೆಯಲು ನಗರಕ್ಕೆ ತೆರಳುವುದು ಸಾಧ್ಯವಿಲ್ಲದ ಕಾರಣ, ಸಕ್ರಿಯ ಚಟುವಟಿಕೆಗಳಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.
ಹೀಗಾಗಿ ಅವರ ಸ್ಥಾನಕ್ಕೆ ನಂಬಲ್ಲ ಕೇಶವ ರಾವ್ ಅಲಿಯಾಸ್ ಬಸವ ರಾಜ್ ಅವರನ್ನು ನೇಮಿಸಲಾಗಿದೆ. ಜೊತೆಗೆ ಸಂಘಟನೆಯ ಕೇಂದ್ರೀಯ ಸಮಿತಿಗೆ ಹೊಸದಾಗಿ 6 ಜನರನ್ನು ಸೇರ್ಪಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.