ಮೋದಿ ಸರ್ಕಾರಕ್ಕೆ ಮತ್ತೊಂದು ರಾಜತಾಂತ್ರಿಕ ಗೆಲುವು| ಲಂಡನ್ನಲ್ಲಿರುವ ವಜ್ರ ಉದ್ಯಮಿ ನೀರವ್ ಮೋದಿ ಬಂಧನ| ಉದ್ಯಮಿ ನೀರವ್ ಮೋದಿಗೆ ಜಾಮೀನು ರಹಿತ ವಾರಂಟ್ ಜಾರಿ| ಬಂಧನದ ಆದೇಶ ಹೊರಡಿಸಿದ ವೆಸ್ಟ್ಮಿನ್ಸ್ಟರ್ ಕೋರ್ಟ್| ಸಾಲ ಮರುಪಾವತಿಸದೇ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ನೀರವ್ ಮೋದಿ| ನೀರವ್ ಮೋದಿ ಹಸ್ತಾಂತರಕ್ಕೆ ಇಂಗ್ಲೆಂಡ್ಗೆ ಭಾರತ ಸರ್ಕಾರ ಮನವಿ|
ಲಂಡನ್(ಮಾ.20): ಮಹತ್ವದ ಬೆಳವಣಿಗೆಯೊಂದರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್ಗೆ ವಂಚನೆ ಮಾಡಿ ಪರಾರಿಯಾಗಿದ್ದ ಉದ್ಯಮಿ ನೀರವ್ ಮೋದಿಯನ್ನು ಇಂಗ್ಲೆಂಡ್ ನಲ್ಲಿ ಬಂಧಿಸಲಾಗಿದೆ.
ಉದ್ಯಮಿ ವಿಜಯ್ ಮಲ್ಯ ಅವರ ಬಂಧನದ ಬಳಿಕ ಇದೀಗ ವಜ್ರ ಉದ್ಯಮಿ ನೀರವ್ ಮೋದಿ ಸರದಿ ಬಂದಿದ್ದು, ಲಂಡನ್ನ ವೆಸ್ಟ್ಮಿನಿಸ್ಟರ್ ಕೋರ್ಟ್ ಬಂಧನದ ಆದೇಶ ಹೊರಡಿಸಿದೆ.
ವೆಸ್ಟ್ಮಿನ್ಸ್ಟರ್ ಕೋರ್ಟ್ನಿಂದ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು, ಮುಂದಿನ 24 ಗಂಟೆಗಳಲ್ಲಿ ನೀರವ್ ಮೋದಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ.
ಶೀಘ್ರವೇ ನೀರವ್ ಮೋದಿಯನ್ನು ಲಂಡನ್ ಪೊಲೀಸರು ಬಂಧಿಸಲಿದ್ದು, ವೆಸ್ಟ್ಮಿನ್ಸ್ಟರ್ ಕೋರ್ಟ್ ವಿಚಾರಣೆಯನ್ನು ಮಾರ್ಚ್ 25ಕ್ಕೆ ಮುಂದೂಡಿದೆ.
ಪಂಜಾಬ್ ಬ್ಯಾಂಕ್ಗೆ 13 ಸಾವಿರ ಕೋಟಿ ರೂ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಬಂಧನವಾಗಿರುವುದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದೊರೆತ ರಾಜತಾಂತ್ರಿಕ ಗೆಲುವು ಎಂದು ಬಣ್ಣಿಸಲಾಗಿದೆ.
