ಭಾರತ ಮೂಲ ಹುಡುಕಿ ಫ್ರಾನ್ಸ್'ನಿಂದ ಬಂದ ಡಯಾನಾ! : 2 ಶತಮಾನದ ಹಿಂದೆ ವಲಸೆ ಹೋಗಿದ್ದ ಇವರ ಕುಟುಂಬ
ಅದಕ್ಕೂ ಮೊದಲು, ಕರ್ನಾಟಕದಲ್ಲಿನ ಕಾಫಿ ಘಮಲು ಆಸ್ವಾದಿಸಲು ಚಿಕ್ಕಮಗಳೂರಿಗೆ ಹೊರಟಿದ್ದಾರೆ.
-ಎಂ ಎನ್ ಪ್ರಶಾಂತ್ ಕುಮಾರ್ ಬೆಂಗಳೂರು
ಪ್ರವಾಸಿ ಭಾರತೀಯ ದಿವಸ್ ಕೇವಲ ಉತ್ಸವವಲ್ಲ, ಸಮಾವೇಶವಲ್ಲ. ಜಗದಗಲಕ್ಕೆ ಚದುರಿ ಹೋಗಿರುವ ಭಾರತೀಯ ಮೂಲದ ಜನರಿಗೆ ತಮ್ಮ ಮೂಲ ಬೇರುಗಳನ್ನು ಹಿಂದಿನ ತಲೆಮಾರುಗಳನ್ನು ಅರಿಯುವ ಮಹತ್ತರ ಅವಕಾಶ ಕಲ್ಪಿಸಿದಂತೆ ಕಾಣುತ್ತಿದೆ. ಇದಕ್ಕೆ ಕಾರಣವೂ ಇದೆ. ಪ್ರವಾಸಿ ದಿವಸ್ನಲ್ಲಿ ಪಾಲ್ಗೊಂಡಿರುವ ಫ್ರಾನ್ಸ್ನ ಮಾರ್ಟಿನಿಕ್ ದ್ವೀಪದ ಡಯಾನಾ ರಾಮಸ್ವಾಮಿ ತಮ್ಮ ಭಾರತೀಯ ಮೂಲದ ಹುಡುಕಾಟವನ್ನು ಸಮಾವೇಶದ ಮೂಲಕ ಆರಂಭಿಸಿದ್ದಾರೆ.
ಅದಕ್ಕಾಗಿಯೇ ತಮ್ಮ ಪೂರ್ವಜರು ನೆಲೆಸಿದ್ದ ಪುದುಚೇರಿಗೂ ಸದ್ಯದಲ್ಲೇ ಪ್ರಯಾಣ ಬೆಳೆಸಲಿದ್ದಾರೆ. ಅದಕ್ಕೂ ಮೊದಲು, ಕರ್ನಾಟಕದಲ್ಲಿನ ಕಾಫಿ ಘಮಲು ಆಸ್ವಾದಿಸಲು ಚಿಕ್ಕಮಗಳೂರಿಗೆ ಹೊರಟಿದ್ದಾರೆ. 1853ರ ಸುಮಾರಿಗೆ ವೆಸ್ಟ್ ಇಂಡೀಸ್ ದ್ವೀಪ ರಾಷ್ಟ್ರಗಳಿಂದ ಕೆರಿಬಿಯನ್ ಸಾಗರದ ಪೂರ್ವ ಭಾಗದ ಫ್ರಾನ್ಸ್ನ 16 ಪ್ರಾಂತ್ಯಗಳಲ್ಲಿ ಒಂದಾದ ಮಾರ್ಟಿನಿಕ್ಗೆ ವಲಸೆ ಹೋಗಿರುವ ತಮ್ಮ ತಾತ- ಮುತ್ತಾತಂದಿರ ಮೂಲ ಭಾರತ ಎಂಬುದಷ್ಟೇ ಡಯಾನಾರಿಗೆ ಗೊತ್ತು. ಆದರೆ ತಾವು ತಮಿಳುನಾಡಿನವರೋ, ಪುದುಚೇರಿಯವರೋ ಅಥವಾ ಇನ್ನಾವ ರಾಜ್ಯದವರೋ ಎಂಬುದು ಗೊತ್ತಿಲ್ಲ.
ಇವರ ವಂಶಾವಳಿ ಕುರಿತಾಗಿ ಫ್ರಾನ್ಸ್ ನಲ್ಲಿ ಯಾವುದೇ ಪತ್ರಾಗಾರ(ಆರ್ಕೈವ್ಸ್) ಇಲ್ಲ. ಸುಮಾರು 25 ಸಾವಿರದಷ್ಟುಭಾರತ ಮೂಲದವರು ಮಾರ್ಟಿನಿಕ್ನಲ್ಲಿದ್ದಾರಂತೆ. ಆದರೆ ಇವರಲ್ಲಿ ಅನೇಕರಿಗೆ ತಾವು ಭಾರತದ ಯಾವ ಪ್ರದೇಶದವರು ಎಂಬುದು ಗೊತ್ತೇ ಇಲ್ಲ. ‘‘ಮಾರ್ಟಿನಿಕ್ನಲ್ಲಿನ್ನೂ ಭಾರತೀಯತೆ ಜೀವಂತವಾಗಿದೆ. ಭಾರತದ ಯೋಗ, ಭರತನಾಟ್ಯ, ಇಲ್ಲಿನ ಹೋಳಿ ಹುಣ್ಣಿಮೆಗಳನ್ನೂ ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಅಲ್ಲಿಯೂ ಬೃಹತ್ತಾಗಿ ಆಯೋಜನೆ ಯಾಗಿತ್ತು,'' ಎನ್ನುತ್ತಾರೆ ಡಯಾನಾ.
ಈ ಹಿನ್ನೆಲೆಯಲ್ಲಿ ಸ್ವತ: ಡಯಾನಾ ತಮ್ಮ ಮೂಲ ಹುಡುಕುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದೇ ಮೊಟ್ಟಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿರುವ ಅವರು ಮೊದಲಿಗೆ ತಮ್ಮ ವೃತ್ತಿಯಾದ ಕಾಫಿ ತೋಟಗಳತ್ತ ಗಮನಹರಿಸಲಿದ್ದಾರೆ. ಚಿಕ್ಕಮಗಳೂರಿನ ಕಾಫಿ ತೋಟಗಳ ಕುರಿತು ಅಂತರ್ಜಾಲದಲ್ಲಿ ಮಾಹಿತಿ ತಿಳಿದುಕೊಂಡಿರುವ ಅವರು ಮಹಿಳೆಯರಿಂದಲೇ ನಿರ್ವಹಿಸಲ್ಪಡುತ್ತಿರುವ ಹಳ್ಳಿ ಬೆರ್ರಿ(ಕಂಬಿಹಳ್ಳಿ) ಎಸ್ಟೇಟ್ಗೆ ಭೇಟಿ ನೀಡುತ್ತಿದ್ದಾರೆ.
ತಮಿಳು ಬರೆಯುವಂತಿಲ್ಲ!: ಭಾರತೀಯ ಮೂಲದ ನಿವಾಸಿಗಳು ಮಾರ್ಟಿನೀಕ್ನಲ್ಲಿ ಸಾಧನೆ ಮೆರೆದಿದ್ದಾರೆ. ಎಲ್ಲ ಕಡೆಗಳಲ್ಲೂ ಇವರು ತಮ್ಮ ಹೆಜ್ಜೆ ಗುರುತು ಮೂಡಿಸಿದ್ದಾರೆ. ಆಡಳಿತ ವ್ಯವಸ್ಥೆ, ರಾಜಕೀಯ ನಾಯಕರೂ ಆಗಿದ್ದಾರೆ. ಫ್ರಾನ್ಸ್ನ ಅಭಿವೃದ್ಧಿಯಲ್ಲಿ ಇವರು ಪಾಲುದಾರಾಗಿದ್ದಾರೆ. ಆದರೆ ಇಲ್ಲಿ ತಮಿಳು ಬರವಣಿಗೆಗೆ ನಿಷಿದ್ಧವಿದೆ. ತಮಿಳು ಮಾತನಾ ಡಬಹುದು. ಭಾರತೀಯ ಮೂಲದವರ ಕುರಿತು ಇನ್ನೂ ಇಲ್ಲಿ ಸಂಕುಚಿತ ಮನೋಭಾವವಿದೆ. ದ್ವೀಪದಲ್ಲಿದ್ದ ಗಾಂಧೀಜಿ ಪ್ರತಿಮೆ ಯನ್ನು ದುಷ್ಕರ್ಮಿಗಳು ಹಾಳುಗೆಡವಿದ್ದ ಬಗ್ಗೆ ಡಯಾನ ಸೇರಿದಂತೆ ಇಲ್ಲಿನ ಭಾರತೀಯ ಮೂಲದವರಿಗೆ ಅಪಾರ ನೋವಿದೆ. ಅವರ ಅಹಿಂಸಾ ತತ್ವಗಳನ್ನು ಇಲ್ಲೂ ಪಸರಿಸುವ ಉದ್ದೇಶ ಡಯಾನಾರದ್ದು.
(ಕನ್ನಡ ಪ್ರಭ)