ಕರ್ನಾಟಕದೊಂದಿಗೆ ಸುಷ್ಮಾ ನಂಟು..ಒಂದೊಂದು ಪುಟಗಳು ರೋಚಕ
ಮಾಜಿ ವಿದೇಶಾಂಗ ಸಚಿವೆ, ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ನಿಧನರಾಗಿದ್ದಾರೆ. ಇಡೀ ದೇಶವೇ ಸ್ವರಾಜ್ ಅವರ ನಿಧನಕ್ಕೆ ಕಂಬನಿ ಮಿಡಿಯುತ್ತಿದೆ. ಸುಷ್ಮಾ ರಾಷ್ಟ್ರ ಮಟ್ಟದ ನಾಯಕಿಯಾಗಿದ್ದರೂ ಕರ್ನಾಟಕದ ಜತೆ ಅವಿನಾಭಾವ ಸಂಬಂಧ ಹೊಂದಿದ್ದರು.
ಬೆಂಗಳೂರು[ಆ. 06] ಬಿಜೆಪಿ ಹಿರಿಯ ನಾಯಕಿ ಸುಷ್ಮಾ ಕರ್ನಾಟಕದ ಜತೆ ಮೊದಲಿನಿಂದಲೂ ನಿಕಟ ಸಂಬಂಧ ಇರಿಸಿಕೊಂಡು ಬಂದವರು. ಅದರಲ್ಲಿಯೂ ವಿಶೇಷವಾಗಿ ಬಳ್ಳಾರಿಯೊಂದಿಗಿನ ಅವರ ನಂಟನ್ನು ನೆನಪಿಸಿಕೊಳ್ಳಲೇಬೇಕು. ಅವರು ಕನ್ನಡ ಕಲಿತು ಮಾತನಾಡಿದ್ದು ಸಹ ಅಷ್ಟೇ ರೋಚಕ.
ಕರ್ನಾಟಕದ ಜೊತೆ ಉತ್ತಮ ನಂಟು ಹೊಂದಿದ್ದ ಸುಷ್ಮಾ ಸ್ವರಾಜ್ 1999ರಲ್ಲಿ ಬಳ್ಳಾರಿಯಲ್ಲಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದರು. ಸೋನಿಯಾ ಗಾಂಧಿ ವಿರುದ್ಧ ಸ್ಪರ್ಧೆ ಮಾಡಿದ್ದ ಸುಷ್ಮಾ ಸ್ವರಾಜ್ ಪರಾಭವಗೊಂಡಿದ್ದರೂ ಕರ್ನಾಟಕದ ಪ್ರೀತಿ ಸಂಪಾದಿಸಿದ್ದರು.ಲೋಕ ಸಮರದ ವೇಳೆ ಸುಷ್ಮಾಮಾಡಿದ್ದ ಕನ್ನಡದ ಭಾಷಣ ಎಂದಿಗೂ ಮರೆಯುವ ಹಾಗಿಲ್ಲ.
ಈ ದಿನಕ್ಕಾಗಿ ಕಾಯುತ್ತಿದ್ದೆ; ಸುಷ್ಮಾ ಧನ್ಯವಾದದ ಕೊನೆಯ ಟ್ವೀಟ್!
ಬಿಜೆಪಿ ನಾಯಕರಾಗಿದ್ದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಜೊತೆ ಉತ್ತಮ ಭಾಂಧವ್ಯ ಹೊಂದಿದ್ದರು. ಸುಷ್ಮಾ ಸ್ವರಾಜ್ಅವರನ್ನು ತಾಯಿ ಎಂದೇ ರೆಡ್ಡಿ ಸಹೋದರರು ಗೌರವಿಸುತ್ತಿದ್ದರು.
ಪ್ರತಿ ವರ್ಷ ವರಮಹಾಲಕ್ಷ್ಮೀ ಹಬ್ಬಕ್ಕೆ ಬಳ್ಳಾರಿಗೆ ಆಗಮಿಸುತ್ತಿದ್ದ ಸುಷ್ಮಾ ವಿವಿಧ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಿದ್ದರು. ಜನಾರ್ದನ ರೆಡ್ಡಿ ನಡೆಸುತ್ತಿದ್ದ ಸಾಮೂಹಿಕ ವಿವಾಹದಲ್ಲಿ ಭಾಗಿಯಾಗುತ್ತಿದ್ದರು. ಡಾ.ಬಿ.ಕೆ ಸುಂದರ್ ಅವರ ಮನೆಯ ಪೂಜೆಗಳಲ್ಲಿ ಸಹ ಸುಷ್ಮಾ ಕಾಣಿಸಿಕೊಳ್ಳುತ್ತಿದ್ದರು.