Asianet Suvarna News Asianet Suvarna News

ಸುಷ್ಮಾ ಅಗಲಿಕೆಗೆ ಫೇಸ್‌ಬುಕ್‌ನಲ್ಲಿ ಗಾಲಿ ಜನಾರ್ದನ ರೆಡ್ಡಿ ಸಂತಾಪ

ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಕೊಟ್ಟ ಮಾತಿನಂತೆ ಸತತ 13ವರ್ಷಗಳ ಕಾಲ ಸುಷ್ಮಾ ಅವರು ಬಳ್ಳಾರಿಗೆ ಬಂದು ಉಚಿತ ಸಾಮೂಹಿಕ ವಿವಾಹ ಹಾಗೂ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುತ್ತಿದ್ದುದನ್ನೂ ಅವರು ನೆನಪಿಸಿಕೊಂಡಿದ್ದಾರೆ.

Former Minister Gali Janardhan Reddy pays tribute to former FM Sushma Swaraj in Facebook
Author
Bangalore, First Published Aug 7, 2019, 12:00 PM IST

ಬೆಂಗಳೂರು(ಆ.07): ಮಾಜಿ ಸಚಿವ ಗಾಲಿ ಜನಾರ್ದನ  ರೆಡ್ಡಿ ಅವರು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಅಗಲಿಕೆಗೆ ಸಂತಾಪ ಸೂಚಿಸಿ ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. ಕೊಟ್ಟ ಮಾತಿನಂತೆ ಸತತ 13ವರ್ಷಗಳ ಕಾಲ ಸುಷ್ಮಾ ಅವರು ಬಳ್ಳಾರಿಗೆ ಬಂದು ಉಚಿತ ಸಾಮೂಹಿಕ ವಿವಾಹ ಹಾಗೂ ವರಮಹಾಲಕ್ಷ್ಮಿ ಪೂಜೆಯಲ್ಲಿ ಭಾಗವಹಿಸುತ್ತಿದ್ದುದನ್ನೂ ಅವರು ನೆನಪಿಸಿಕೊಂಡಿದ್ದಾರೆ.

'ತಾಯಿಯ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ನಾನು ಸೇರಿದಂತೆ ಇಡೀ ದೇಶದ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಹೇಳಲಾಗದ ನೋವಿನಿಂದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ. ವರಮಹಾಲಕ್ಷ್ಮಿ ವ್ರತದ ಈ ದಿನಗಳಲ್ಲಿ ತಾಯಿಯ ಅಗಲುವಿಕೆಯ ಈ ಸುದ್ದಿ ನಮಗೆ ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ' ಎಂದು ಅವರು ಬರೆದುಕೊಂಡಿದ್ದಾರೆ.

ಪಾಕ್ ನಂಟು, ತುರ್ತುಪರಿಸ್ಥಿತಿ ವೇಳೆ ವಿವಾಹ: ಸುಷ್ಮಾ ಬಗ್ಗೆ ಗೊತ್ತಿರದ ಸಂಗತಿಗಳು

1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ಸುಷ್ಮಾ ಸ್ವರಾಜ್ ಕಣಕ್ಕಿಳಿದಿದ್ದರು. ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಈ ಚುನಾವಣೆಯಲ್ಲಿ ಸುಷ್ಮಾ ಪರ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ್ದು ಗಾಲಿ ಜನಾರ್ದನ ರೆಡ್ಡಿ ಹಾಗೂ ಶಾಸಕ ಶ್ರೀರಾಮುಲು. ಅಂದಿನಿಂದಲೂ ಅವರು ಸುಷ್ಮಾ ಅವರನ್ನು ಅಮ್ಮಾ ಎಂದೇ ಕರೆಯುತ್ತಿದ್ದರು. ಇದೀಗ ಸುಷ್ಮಾ ಅಗಲಿಕೆಗೆ ಜನಾರ್ಧನ ರೆಡ್ಡಿ ಅವರು ಫೇಸ್‌ಬುಕ್‌ ಮೂಲಕ ಸಂತಾಪ ಸೂಚಿಸಿದ್ದಾರೆ.

13ವರ್ಷ ವರಮಹಾಲಕ್ಷ್ಮೀ ಪೂಜೆಯಲ್ಲಿ ಭಾಗಿ:

1999ರ ಚುನಾವಣೆಯಿಂದಲೇ ಸುಷ್ಮಾ ಸ್ವರಾಜ್ ಅವರಿಗೆ ಬಳ್ಳಾರಿಯ ನಂಟು ಬೆಳೆಯಿತು. ಚುನಾವಣೆಯಲ್ಲಿ ಸೋಲನುಭವಿಸಿದರೂ ಬಳ್ಳಾರಿಯ ಜೊತೆಗಿನ ಸುಷ್ಮಾ ನಂಟು ಹಾಗೆಯೇ ಮುಂದುವರಿದಿತ್ತು. 1999ರ ಲೋಕಸಭಾ ಚುನಾವಣೆಯ ನಂತರವೂ ಸುಷ್ಮಾ ಸ್ವರಾಜ್ ಬಳ್ಳಾರಿಗೆ ಭೇಟಿ ನೀಡುತ್ತಲೇ ಇದ್ದರು. ಸತತ 13ವರ್ಷ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ವರಮಹಾಲಕ್ಷ್ಮಿ ಪೂಜೆಯಲ್ಲಿ ಸುಷ್ಮಾ ಸ್ವರಾಜ್ ಭಾಗವಹಿಸಿದ್ದರು.

Former Minister Gali Janardhan Reddy pays tribute to former FM Sushma Swaraj in Facebook

ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಜನಾರ್ದನ ರೆಡ್ಡಿ ಬಂಧನಕ್ಕೊಳಗಾದ ನಂತರ ಸುಷ್ಮಾ ಅವರು ಜನಾರ್ಧನ ರೆಡ್ಡಿ ಹಾಗೂ ಶ್ರೀರಾಮುಲು ಅವರಿಂದ ಅಂತರವನ್ನು ಕಾಯ್ದುಕೊಂಡಿದ್ದರು.

ಜನಾರ್ಧನ ರೆಡ್ಡಿ ಅವರು ಪ್ರೀತಿಯ ಅಮ್ಮನ ನೆನಪಿನಲ್ಲಿ ಪೋಸ್ಟ್ ಮಾಡಿದ ಫೇಸ್‌ಬುಕ್ ಬರಹ ಹೀಗಿದೆ:

ತಾಯಿಯ ಮಡಿಲು .....

ಭಾರತಾಂಬೆಯ ಹೆಮ್ಮೆಯ ಪುತ್ರಿ , ಭಾರತೀಯ ನಾರಿ ಸ್ವರೂಪದ ಪ್ರತಿರೂಪ, ಅಪ್ರತಿಮ ಪಾಂಡಿತ್ಯ, ದೇಶಭಕ್ತಿ, ಸಾಮಾಜಿಕ ಕಳಕಳಿ, ಎಲ್ಲದಕ್ಕಿಂತಲೂ ಹೆಚ್ಚಾಗಿ ನಂಬಿಕೆ, ಪ್ರೀತಿ ವಿಶ್ವಾಸದ ಮತ್ತೊಂದು ಹೆಸರೇ ಶ್ರೀಮತಿ ಸುಷ್ಮಾ ಸ್ವರಾಜ್.

ನನ್ನ ಜೀವನದಲ್ಲಿ ನನಗೆ ಜನ್ಮಕೊಟ್ಟ ತಾಯಿ ರುಕ್ಮಿಣಮ್ಮ ಚೆಂಗಾರೆಡ್ಡಿ ಒಂದು ಕಡೆಯಾದರೆ ಮತ್ತೊಂದು ಕಡೆ ನನ್ನ ರಾಜಕೀಯ ಬದುಕಿನ ಬೆಳಕು ತೋರಿದ ಮತ್ತು ಪ್ರೀತಿ ವಿಶ್ವಾಸದ ಮಡಿಲಲ್ಲಿ ಹಾಕಿಕೊಂಡು ಬೆಳೆಸಿದೆ ನನ್ನ ಮತ್ತೊಬ್ಬ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್.

ಸುಷ್ಮಾ ಸ್ವರಾಜ್ ನಮ್ಮನ್ನು ಅಗಲಿದ್ದಾರೆ ಎಂದರೆ ನಂಬಲಿಕ್ಕೆ ಸಾಧ್ಯವಾಗುತ್ತಿಲ್ಲ . ಆ ತಾಯಿಯ ಮುಖದ ತೇಜಸ್ಸು, ಅವರೊಂದಿಗೆ ನನ್ನ ಪುತ್ರ ವಾತ್ಸಲ್ಯ ಸಂಬಂಧ ನಿಜಕ್ಕೂ ನನ್ನನ್ನು ಅತ್ಯಂತ ದುಃಖಿತ ನನ್ನಾಗಿ ಮಾಡಿದೆ.

ಬರ್ತಿದ್ದಾಳೆ ‘ವರಮಹಾಲಕ್ಷ್ಮೀ’; ಮನೆ ತುಂಬಿಸಿಕೊಳ್ಳಲು ಹೀಗೆ ಪೂಜೆ ಮಾಡಿ!

ಆಕಸ್ಮಿಕ ರಾಜಕೀಯ ಬೆಳವಣಿಗೆಯೊಂದರಲ್ಲಿ ಭಾರತಾಂಬೆಯ ಆಶೀರ್ವಾದದಿಂದ ದೊರೆತ ಈ ಮಹಾನ್ ತಾಯಿ ಶ್ರೀಮತಿ ಸುಷ್ಮಾ ಸ್ವರಾಜ್ ಅವರೊಂದಿಗಿನ ನನ್ನ ತಾಯಿ - ಮಗನ ಸಂಬಂಧವನ್ನು ಶಬ್ದಗಳಲ್ಲಿ ವರ್ಣಿಸಲು ಶಬ್ದಗಳೇ ಸಾಲದು.

ಬಳ್ಳಾರಿಗೆ ಆಗಮಿಸಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಕೇವಲ ಹದಿನೆಂಟು ದಿನದಲ್ಲಿ ಕನ್ನಡ ಭಾಷೆಯನ್ನು ಕಲಿತು, ನಾವು ಮತ್ತು ನಮ್ಮ ಕುಟುಂಬ ಮಾತ್ರವಲ್ಲದೆ ಇಡೀ ಜಿಲ್ಲೆ, ರಾಜ್ಯ ಮತ್ತು ವಿಶ್ವದ ಗಮನವನ್ನು ಸೆಳೆದ ಅಪ್ರತಿಮ ಮೇಧಾವಿ ಶ್ರೀಮತಿ ಸುಷ್ಮಾ ಸ್ವರಾಜ್ .

ಸತತವಾಗಿ ಹದಿಮೂರು ವರ್ಷಗಳ ಕಾಲ ಕೊಟ್ಟ ಮಾತಿನಂತೆ ಬಳ್ಳಾರಿಗೆ ಆಗಮಿಸಿ ನಾವು ನಡೆಸುವ ಐತಿಹಾಸಿಕ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ ಮತ್ತು ವರಮಹಾಲಕ್ಷ್ಮಿ ಪೂಜೆಗೆ ಆಗಮಿಸಿದ್ದು ನಿಜಕ್ಕೂ ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೆಂದೇ ಭಾವಿಸುತ್ತೇನೆ .

Former Minister Gali Janardhan Reddy pays tribute to former FM Sushma Swaraj in Facebook

1999 ರ ಲೋಕಸಭೆ ಚುನಾವಣೆಯಲ್ಲಿ ಪರಾಭವಗೊಂಡ ಅವರನ್ನು ಬೀಳ್ಕೊಡಲು ವಿಮಾನ ನಿಲ್ದಾಣಕ್ಕೆ ತೆರಳಿದ ಸಂದರ್ಭದಲ್ಲಿ ಅವರ ಸೋಲಿನ ದುಃಖವನ್ನು ಭರಿಸಲಾಗದೆ ನಾನು ಮತ್ತು ನನ್ನ ಸ್ನೇಹಿತ ಶ್ರೀರಾಮುಲು ಕಣ್ಣಲ್ಲಿ ನೀರು ತಂದುಕೊಂಡಾಗ ಒಬ್ಬ ತಾಯಿಯಂತೆ ನಮ್ಮನ್ನು ಸಮಾಧಾನಪಡಿಸಿದ ಮಹಾನ್ ತಾಯಿಯನ್ನು ನನ್ನ ಜೀವನದ ಕೊನೆ ಉಸಿರಿರುವವರೆಗೂ ಮರೆಯಲು ಸಾಧ್ಯವಿಲ್ಲ .

ಕೇವಲ ನಾನು ಮಾತ್ರವಲ್ಲ ಇಡೀ ನನ್ನ ಕುಟುಂಬ ವಿಶೇಷವಾಗಿ ನನ್ನ ಪುತ್ರಿ ಶ್ರೀಮತಿ ಬ್ರಹ್ಮಣಿ ಸುಷ್ಮಾ ಸ್ವರಾಜ್ ಅವರ ಬಗ್ಗೆ ಅತಿಯಾದ ಮಧುರ ಬಾಂಧವ್ಯವನ್ನು ಹೊಂದಿದ್ದರು. ಪ್ರತಿ ಬಾರಿ ಬಳ್ಳಾರಿಗೆ ಆಗಮಿಸಿದಾಗ ನನ್ನ ಧರ್ಮಪತ್ನಿ ಶ್ರೀಮತಿ ಲಕ್ಷ್ಮೀ ಅರುಣಾ ಎರಡು ದಿನಗಳ ಮುಂಚೆಯೇ ಮಾತಾಜಿಯ ಆಗಮನಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದರು. ಒಟ್ಟಾರೆ ಆ ತಾಯಿ ಬಳ್ಳಾರಿಗೆ ಬರುವುದೆಂದರೆ ನಮಗೆ ದೊಡ್ಡ ಹಬ್ಬ .

ಏಳು ಬಾರಿ ಸಂಸದೆಯಾಗಿ , ಅತಿ ಕಿರಿಯ ವಯಸ್ಸಿನಲ್ಲಿ ಹರಿಯಾಣ ರಾಜ್ಯದಲ್ಲಿ ಮಂತ್ರಿಯಾಗಿ, ದೆಹಲಿಯ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ, ಕೇಂದ್ರ ಸಚಿವೆಯಾಗಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಹಲವಾರು ಉನ್ನತ ಸ್ಥಾನಗಳನ್ನು ಅಲಂಕರಿಸಿ,
ಈ ದೇಶಕ್ಕಾಗಿ ತನ್ನನ್ನೇ ತಾನು ಸಮರ್ಪಿಸಿಕೊಂಡ ಭಾರತ ದೇಶದ ವೀರ ಮಹಿಳೆ.

ನಿನ್ನೆಯ ದಿನ ತಮ್ಮ ಬದುಕಿನ ಕೊನೆಯ ಕ್ಷಣಗಳಲ್ಲೂ ಜಮ್ಮು ಕಾಶ್ಮೀರ ವಿಧೇಯಕ ಜಾರಿಗೊಂಡ ಬಗ್ಗೆ ಟ್ವೀಟ್ ಮಾಡಿ ಹರ್ಷ ವ್ಯಕ್ತಪಡಿಸಿದ್ದು ತನ್ನ ಪ್ರಾಣಕ್ಕಿಂತ ದೇಶವೇ ತನಗೆ ಮುಖ್ಯವೆಂಬುದನ್ನು ಸಾಬೀತುಪಡಿಸಿದ ದೇಶಪ್ರೇಮಿ.

ತಾಯಿಯ ಅಗಲುವಿಕೆಯ ದುಃಖವನ್ನು ಭರಿಸುವ ಶಕ್ತಿ ನಾನು ಸೇರಿದಂತೆ ಇಡೀ ದೇಶದ ಜನತೆಗೆ ಆ ಭಗವಂತ ಕರುಣಿಸಲಿ ಎಂದು ಹೇಳಲಾಗದ ನೋವಿನಿಂದ ಭಕ್ತಿ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ.

ವರಮಹಾಲಕ್ಷ್ಮಿ ವ್ರತದ ಈ ದಿನಗಳಲ್ಲಿ ತಾಯಿಯ ಅಗಲುವಿಕೆಯ ಈ ಸುದ್ದಿ ನಮಗೆ ಬರ ಸಿಡಿಲು ಬಡಿದು ಅಪ್ಪಳಿಸಿದಂತಾಗಿದೆ .

- ಗಾಲಿ ಜನಾರ್ದನ ರೆಡ್ಡಿ

Follow Us:
Download App:
  • android
  • ios