ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂಗಳೂರಿನ ವಿಧಿವಿಜ್ಞಾನ ತಜ್ಞ ಮಹಾಬಲ ಶೆಟ್ಟಿಯವರೂ ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ. ಈಗ ಸಿಕ್ಕಿರುವ ಫೋರೆನ್ಸಿಕ್ ವರದಿಗಳಲ್ಲಿನ ಅಂಶಗಳನ್ನು ಗಮನಿಸಿದರೆ ಅನುರಾಗ್ ಅವರದ್ದು ಅಸಹಜ ಸಾವಾಗಿರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರು(ಮೇ 24): ಉತ್ತರಪ್ರದೇಶದಲ್ಲಿ ಕರ್ನಾಟಕದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವನ್ನಪ್ಪಿದ ಪ್ರಕರಣಕ್ಕೆ ಇಂದು ಬಹುದೊಡ್ಡ ಟ್ವಿಸ್ಟ್ ಸಿಕ್ಕಿದೆ. ತಿವಾರಿಯದ್ದು ಅಸಹಜ ಸಾವು ಎನ್ನುವ ವಾದಕ್ಕೆ ಪುಷ್ಟಿ ನೀಡುವಂಥ ಬೆಳವಣಿಗೆ ಇಂದು ನಡೆದಿದೆ. ಲಕ್ನೋ ಆಸ್ಪತ್ರೆ ವೈದ್ಯರು ನೀಡಿರುವ ವರದಿಯೊಂದರ ಪ್ರಕಾರ ಅನುರಾಗ್ ತಿವಾರಿಯವರ ಮೇಲೆ ಭೀಕರವಾಗಿ ಹಲ್ಲೆ ಮಾಡಿ ಕೊಲೆಗೈದಿರುವ ಸಾಧ್ಯತೆ ಇದೆ. ತಿವಾರಿ ದೇಹದ ಮೇಲೆ ಅಲ್ಲಲ್ಲಿ ಆಳವಾದ ಗಾಯಗಳಿರುವುದು ಪರೀಕ್ಷೆಯಲ್ಲಿ ಪತ್ತೆಯಾಗಿದೆ.

ಅನುರಾಗ್ ತಿವಾರಿಯವರು ಬೆಳಗಿನ ಜಾವ ತಮ್ಮ ಗೆಸ್ಟ್ ಹೌಸ್'ನ ಹೊರಗಿನ ರಸ್ತೆಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಆದರೆ, ಮರಣೋತ್ತರ ಪರೀಕ್ಷೆ ವರದಿ ಪ್ರಕಾರ ಅವರ ಸಾವು ರಾತ್ರಿ 2-3 ಗಂಟೆಯಲ್ಲಿ ಸಂಭವಿಸಿರಬಹುದೆನ್ನಲಾಗಿದೆ. ತಿವಾರಿ ಸಾಯುವಾಗ ಮೂತ್ರ ಮಾಡಿಕೊಂಡಿದ್ದು, ಅವರು ತಿಂದ ಆಹಾರ ಇನ್ನೂ ಪಚನವಾಗದೇ ಇರುವುದು, ಇವೆಲ್ಲವೂ ಅವರದ್ದು ಅಸಹಜ ಸಾವು ಎಂಬ ವಿಷಯವನ್ನು ಸೂಚಿಸುತ್ತದೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ಮಂಗಳೂರಿನ ವಿಧಿವಿಜ್ಞಾನ ತಜ್ಞ ಮಹಾಬಲ ಶೆಟ್ಟಿಯವರೂ ಕೂಡ ಈ ವಾದವನ್ನು ಪುಷ್ಟೀಕರಿಸಿದ್ದಾರೆ. ಈಗ ಸಿಕ್ಕಿರುವ ಫೋರೆನ್ಸಿಕ್ ವರದಿಗಳಲ್ಲಿನ ಅಂಶಗಳನ್ನು ಗಮನಿಸಿದರೆ ಅನುರಾಗ್ ಅವರದ್ದು ಅಸಹಜ ಸಾವಾಗಿರಬಹುದೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.