ಗಡಿಯಲ್ಲಿ ಮತ್ತೆ ಬಾಂಬ್ ಸ್ಪೋಟ: ಐವರು ಸಿಆರ್ಪಿಎಫ್ ಯೋಧರಿಗೆ ಗಾಯ
ಶ್ರೀನಗರ(ಸೆ.26): ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಗ್ರೆನೇಡ್ ದಾಳಿ ನಡೆಸಲಾಗಿದ್ದು, ದಾಳಿಯಲ್ಲಿ 5 ಸಿಆರ್'ಪಿಎಫ್ ಯೋಧರು ಗಾಯಗೊಂಡಿರುವ ಘಟನೆ ಇಂದು ನಡೆದಿದೆ.
ವಾನ್ಪೋಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರೆನೇಡ್ ದಾಳಿ ನಡೆಸಲಾಗಿದೆ. ಗಾಯಗೊಂಡ ಯೋಧರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ನಾಗರೀಕರಿಗೆ ಗಾಯಗಳಾಗಿರುವ ಕುರಿತಂತೆ ಇದುವರೆಗೂ ಯಾವುದೇ ವರದಿಗಳಾಗಿಲ್ಲ. ದಾಳಿಯ ಹೊಣೆಯನ್ನು ಈ ವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊತ್ತುಕೊಂಡಿಲ್ಲ.
ಜುಲೈ 8 ರಂದು ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಕಮಾಂಡರ್ ಬುಹ್ರಾನ್ ವಾನಿ ಹತ್ಯೆಯ ನಂತರ ಕಳೆದ ಒಂದೂವರೆ ತಿಂಗಳಿನಿಂದ ಕುಲ್ಗಾಮ್ ಜಿಲ್ಲೆಯೊಂದರಲ್ಲೇ ನಡೆದ ಗಲಭೆಯಲ್ಲಿ 90ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.