ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತ ಅನುಮಾನ ದಿನೇದಿನೇ ಬಲ ಗೊಳ್ಳುತ್ತಿರುವಾಗಲೇ, ಜಯಾ ಅವರು ಆಸ್ಪತ್ರೆಗೆ ದಾಖಲಾದಾಗ ಯಾವ ಸ್ಥಿತಿಯಲ್ಲಿದ್ದರು ಎಂಬ ಕುರಿತು ಇದೇ ಮೊದಲ ಬಾರಿಗೆ ಮಾಹಿತಿ ಲಭಿಸಿದೆ. 2016ರ ಸೆ.22ರಂದು ಚೆನ್ನೈ ಅಪೋಲೋ ಆಸ್ಪತ್ರೆಗೆ ಜಯಲಲಿತಾರನ್ನು ಕರೆ ತಂದಾಗ ಅವರು ಮಂಪರಿನಲ್ಲಿದ್ದರು. ಉಸಿರಾಡಲು ಕಷ್ಟಪಡುತ್ತಿದ್ದರು. ಆದಾಗ್ಯೂ ಮಾತನಾಡುತ್ತಿದ್ದರು ಎಂಬ ಅಂಶ ಆಸ್ಪತ್ರೆಯ ಪ್ರಥಮ ವೈದ್ಯಕೀಯ ವರದಿಯಲ್ಲಿದೆ. ವರದಿಯ ಪ್ರತಿ ತನ್ನ ಬಳಿ ಇದೆ ಎಂದು ತಮಿಳುನಾಡಿನ ಮಾಧ್ಯಮವೊಂದು ವರದಿ ಮಾಡಿದೆ.

ಚೆನ್ನೈ(ಸೆ.29): ತಮಿಳುನಾಡು ಮಾಜಿ ಮುಖ್ಯ ಮಂತ್ರಿ ಜೆ. ಜಯಲಲಿತಾ ಸಾವಿನ ಕುರಿತ ಅನುಮಾನ ದಿನೇದಿನೇ ಬಲ ಗೊಳ್ಳುತ್ತಿರುವಾಗಲೇ, ಜಯಾ ಅವರು ಆಸ್ಪತ್ರೆಗೆ ದಾಖಲಾದಾಗ ಯಾವ ಸ್ಥಿತಿಯಲ್ಲಿದ್ದರು ಎಂಬ ಕುರಿತು ಇದೇ ಮೊದಲ ಬಾರಿಗೆ ಮಾಹಿತಿ ಲಭಿಸಿದೆ. 2016ರ ಸೆ.22ರಂದು ಚೆನ್ನೈ ಅಪೋಲೋ ಆಸ್ಪತ್ರೆಗೆ ಜಯಲಲಿತಾರನ್ನು ಕರೆ ತಂದಾಗ ಅವರು ಮಂಪರಿನಲ್ಲಿದ್ದರು. ಉಸಿರಾಡಲು ಕಷ್ಟಪಡುತ್ತಿದ್ದರು. ಆದಾಗ್ಯೂ ಮಾತನಾಡುತ್ತಿದ್ದರು ಎಂಬ ಅಂಶ ಆಸ್ಪತ್ರೆಯ ಪ್ರಥಮ ವೈದ್ಯಕೀಯ ವರದಿಯಲ್ಲಿದೆ. ವರದಿಯ ಪ್ರತಿ ತನ್ನ ಬಳಿ ಇದೆ ಎಂದು ತಮಿಳುನಾಡಿನ ಮಾಧ್ಯಮವೊಂದು ವರದಿ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಯಲಲಿತಾ ಅವರು ಆಸ್ಪತ್ರೆಗೆ ಬಂದಾಗ ಅವರ ದೇಹದಲ್ಲಿನ ಸಕ್ಕರೆಯ ಅಂಶ 508ಕ್ಕೆ ಏರಿತ್ತು. ಆಮ್ಲಜನಕ ಪ್ರಮಾಣ ಶೇ.43ಕ್ಕೆ ಕುಸಿದಿತ್ತು. ಅವರ ದೇಹದ ಮೇಲೆ ಯಾವುದೇ ಗಾಯಗಳಿರಲಿಲ್ಲ ಎಂದು ಆಸ್ಪತ್ರೆಯ ವರದಿ ಹೇಳಿದೆ. ತನ್ಮೂಲಕ ಪೋಯೆಸ್ ಗಾರ್ಡನ್ ನಿವಾಸದಲ್ಲಿ ಕೆಲವರು ನೂಕಿ ದ್ದರಿಂದಾಗಿ ಬಿದ್ದು ಜಯಾ ಗಂಭೀರ ಗಾಯಗೊಂಡಿದ್ದರು. ಹಾಗಾಗಿಯೇ ಆಸ್ಪತ್ರೆಗೆ ಸೇರಿದ್ದರು ಎಂಬ ಆರೋಪಗಳಿಗೆ ತೆರೆ ಬಿದ್ದಂತಾಗಿದೆ.

ಜಯಲಲಿತಾಗೆ ನ್ಯುಮೋನಿಯಾ ಇರಬಹುದು ಎಂಬ ಶಂಕೆಯನ್ನು ವೈದ್ಯಕೀಯ ವರದಿಯಲ್ಲಿ ವ್ಯಕ್ತಪಡಿ ಸಲಾಗಿದೆ. ರಕ್ತದೊತ್ತಡ ಕೂಡ ಹೆಚ್ಚಿತ್ತು. ಸೋಂಕು, ನೀರಿನಂಶ ಕುಸಿತದಂತಹ ಸಮಸ್ಯೆಗಳಿಂದ ಅವರು ಬಾಧಿತರಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ ಈ ಕುರಿತು ಪ್ರತಿಕ್ರಿಯಿಸಲು ಅಪೋಲೋ ಆಸ್ಪತ್ರೆ ನಿರಾಕರಿಸಿದ್ದು, ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಕಾರಣವನ್ನು ನೀಡಿದೆ.

73 ದಿನಗಳ ಸತತ ಆಸ್ಪತ್ರೆ ವಾಸದ ಬಳಿಕ ಡಿ.5ರಂದು ಜಯಲಲಿತಾ ಅವರು ಕೊನೆಯುಸಿರೆಳೆದಿದ್ದರು. ಆದರೆ ಅವರ ಸಾವಿನ ಕುರಿತು ಹಲವು ಅನುಮಾನಗಳು ಎದ್ದಿದ್ದವು. ಇದಕ್ಕೆ ಪುಷ್ಟಿ ನೀಡುವಂತೆ ಜಯಾ ಆಸ್ಪತ್ರೆಯಲ್ಲಿದ್ದಷ್ಟೂ ದಿನ ಅವರನ್ನು ಭೇಟಿ ಮಾಡಲು ಶಶಿಕಲಾ ಅವರು ಯಾರಿಗೂ ಅವಕಾಶ ನೀಡಿರಲಿಲ್ಲ ಎಂದು ಅಣ್ಣಾಡಿಎಂಕೆ ನಾಯಕರೇ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ತಮಿಳುನಾಡಿನ ಹಾಲಿ ಸರ್ಕಾರ ಜಯಲಲಿತಾ ಸಾವಿನ ಕುರಿತು ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಆರ‌್ಮುಗಸ್ವಾಮಿ ನೇತೃತ್ವದ ತನಿಖಾ ಆಯೋಗ ರಚಿಸಿದೆ.