‘ನನ್ನ ಪುತ್ರ ಏನೇ ಕೆಲಸ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಜಯ ಸಾಧಿಸಬೇಕು ಎಂಬ ಛಲ ಹೊಂದಿರುತ್ತಿದ್ದ. ಇದೇ ಕಾರಣಕ್ಕಾಗಿ ಅವನು ಸಚಿನ್‌ ತೆಂಡೂಲ್ಕರ್‌ ಅವರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ’- ಮೇಜರ್ ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಉನ್ನಿಕೃಷ್ಣನ್‌

ಬೆಂಗಳೂರು[ನ.26]: 164 ಜನರ ಬಲಿ ಪಡೆದ ಮುಂಬೈ ದಾಳಿಗೆ ಸೋಮವಾರ 10 ವರ್ಷ ತುಂಬಲಿದೆ. ಈ ಹಿನ್ನೆಲೆಯಲ್ಲಿ, ಘಟನೆ ನಡೆದಾಗ ಉಗ್ರರ ವಿರುದ್ಧ ಹೋರಾಡಿ ಮೃತಪಟ್ಟತಮ್ಮ ಪುತ್ರ ಸಂದೀಪ್‌ ಉನ್ನಿಕೃಷ್ಣನ್‌ ಬಗ್ಗೆ ಅವರ ತಂದೆ ಉನ್ನಿಕೃಷ್ಣನ್‌ ನೆನಪು ಮಾಡಿಕೊಂಡಿದ್ದಾರೆ.

Add Asianetnews Kannada as a Preferred SourcegooglePreferred

ಈ ಬಗ್ಗೆ ಪಿಟಿಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಅವರು ‘ನನ್ನ ಪುತ್ರ ಏನೇ ಕೆಲಸ ಆಯ್ಕೆ ಮಾಡಿಕೊಂಡರೂ ಅದರಲ್ಲಿ ಜಯ ಸಾಧಿಸಬೇಕು ಎಂಬ ಛಲ ಹೊಂದಿರುತ್ತಿದ್ದ. ಇದೇ ಕಾರಣಕ್ಕಾಗಿ ಅವನು ಸಚಿನ್‌ ತೆಂಡೂಲ್ಕರ್‌ ಅವರನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ,’ ಎಂದು ಸಂದೀಪ್‌ ಉನ್ನಿಕೃಷ್ಣನ್‌ ಅವರ ತಂದೆ ಉನ್ನಿಕೃಷ್ಣನ್‌ ಅವರು ಹೇಳಿದ್ದಾರೆ. ‘ನನ್ನ ಮಗ ಸಂದೀಪ್‌ ಯಾವಾಗಲೂ ದೇಶದ ಕೀರ್ತಿ ಬಗ್ಗೆಯೇ ಯೋಚಿಸುತ್ತಿದ್ದ. ಒಂದು ವೇಳೆ ಕ್ರಿಕೆಟ್‌ನಲ್ಲಿ ಭಾರತ ಸೋಲುಂಡರೆ, ಹೆಚ್ಚು ಅಸಮಾಧಾನಗೊಳ್ಳುತ್ತಿದ್ದ. ಅಲ್ಲದೆ, ಇಸ್ರೋ ಯೋಜನೆ ವಿಫಲವಾದಾಗ ನನ್ನನ್ನೂ ಸಹ ಸಾಂತ್ವನ ಪಡಿಸುತ್ತಿದ್ದ. ಸೋಲು ಎಂಬುದನ್ನು ಆತ ಇಷ್ಟಪಡುತ್ತಿರಲಿಲ್ಲ. ಆತನ ಸೇವಾ ಮನೋಭಾವನೆ ಬಗ್ಗೆ ನನಗೆ ಗೊತ್ತೇ ಇರಲಿಲ್ಲ. ಆತನ ಬ್ಯಾಂಕ್‌ನಲ್ಲಿ ಕೇವಲ 3000-4000 ರು. ಇರುವುದನ್ನು ಕಂಡು, ಸಂದೀಪ್‌ ದುಬಾರಿ ಬೆಲೆಯ ವಸ್ತುಗಳನ್ನು ಖರೀದಿಸುತ್ತಾನೆ ಎಂದುಕೊಂಡಿದ್ದೆ. ಆದರೆ, ತನ್ನ ಸಹೋದ್ಯೋಗಿ ಮತ್ತು ಕಷ್ಟದಲ್ಲಿದ್ದವರಿಗೆ ನೆರವಾಗುತ್ತಿದ್ದ ಎಂಬುದು ಆತನ ಸಹೋದ್ಯೋಗಿಗಳಿಂದಲೇ ಗೊತ್ತಾಯಿತು’ ಎಂದು ಇಸ್ರೋನ ನಿವೃತ್ತ ಅಧಿಕಾರಿಯಾದ ಉನ್ನಿಕೃಷ್ಣನ್‌ ಅವರು ಹೇಳಿದ್ದಾರೆ.