ಇದೇ ಸೆಪ್ಟೆಂಬರ್‌ 19ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಬಳಿಕ ಇವರಿಬ್ಬರಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ನಿಜಾನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಇದೇ ಸೆಪ್ಟೆಂಬರ್‌ 19ರಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾದ ಬಳಿಕ ಇವರಿಬ್ಬರಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಫೋಟೋದಲ್ಲಿ ಮಂದಿರದ ರೇಖಾಚಿತ್ರದ ಹಿನ್ನೆಲೆಯಲ್ಲಿ ‘ಶ್ರೀರಾಮ್‌’ ಎಂದು ಬರೆದಿರುವ ಶ್ವೇತ ಬಣ್ಣದ ಎನ್‌ವಲಪ್‌ ಅನ್ನು ಶಾ ಮತ್ತು ಮಮತಾ ಬ್ಯಾನರ್ಜಿ ಹಿಡಿದುಕೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ಫೋಟೋವನ್ನು ಪೋಸ್ಟ್‌ ಮಾಡಿ, ಮಮತಾ ಬ್ಯಾನರ್ಜಿಯವರ ಬೂಟಾಟಿಕೆ ಬಯಲಾಗಿದೆ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಲಾಗುತ್ತಿದೆ. ಅಲ್ಲದೆ ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಕುತೂಹಲವನ್ನು ಹುಟ್ಟಿಸಿತ್ತು. ಮೀರಜ್‌ ಅಜಾದ್‌ ಎಂಬುವವರು ಇದನ್ನು ಪೋಸ್ಟ್‌ ಮಾಡಿ, ‘ಬಿಜೆಪಿ ಕಾರ‍್ಯಕರ್ತರು ಜೈ ಶ್ರೀರಾಮ್‌ ಘೋಷಣೆ ಕೂಗಿದಾಗ ಅವರನ್ನು ಬೆನ್ನಟ್ಟಿದವರು ಮಮತಾ. ಆದರೆ ಈಗ ಅಮಿತ್‌ ಶಾ ಪಕ್ಕದಲ್ಲಿಯೇ ನಿಂತು ನಗುತ್ತಾ ಜೈ ಶ್ರೀರಾಮ್‌ ಘೋಷಣೆ ಇರುವ ಫಲಕ ಹಿಡಿದಿದ್ದಾರೆ. ಬಂಗಾಳದಲ್ಲಿ ಮಮತಾಗಿಂತ ದೊಡ್ಡ ಆರ್‌ಎಸ್‌ಎಸ್‌ ಲೀಡರ್‌ ಮತ್ತೊಬ್ಬರಿಲ್ಲ’ ಎಂದು ವಿಡಂಬನಾತ್ಮಕವಾಗಿ ಒಕ್ಕಣೆ ಬರೆದುಕೊಂಡಿದ್ದಾರೆ.

ಆದರೆ ನಿಜಕ್ಕೂ ಮಮತಾ ಬ್ಯಾನರ್ಜಿ ಶ್ರೀರಾಮ್‌ ಎಂದು ಬರೆದಿರುವ ಎನ್‌ವಲಪ್‌ ಅನ್ನು ಹಿಡಿದಿದ್ದರೇ ಎಂದು ಇಂಡಿಯಾ ಟುಡೇ ಆ್ಯಂಟಿ ಫೇಕ್‌ನ್ಯೂಸ್‌ ವಾರ್‌ ರೂಮ್‌ ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ.

ಶಾ ಭೇಟಿ ವೇಳೆ ರಾಷ್ಟ್ರೀಯ ನಾಗರಿಕ ನೋಂದಣಿ ( ಎನ್‌ಆರ್‌ಸಿ ) ಕುರಿತ ವೈಟ್‌ ಎನ್‌ವಲಪ್‌ ಅನ್ನು ಮಮತಾ ನೀಡಿದ್ದರು. ಇದನ್ನೇ ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ, ಅದರ ಮೇಲೆ ಜೈ ಶ್ರೀರಾಮ್‌ ಎಮದು ಬರೆದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ.

- ವೈರಲ್ ಚೆಕ್