ಅಪ್ರಾಪ್ತೆ ಫೇಸ್ಬುಕ್ ಲವ್ ಅತ್ಯಾಚಾರದಲ್ಲಿ ಅಂತ್ಯ!
ಮೂರು ತಿಂಗಳ ‘ಫೇಸ್ಬುಕ್' ಪರಿಚಯದಲ್ಲಿ ಬೆಂಗಳೂರು ಬಾಲಕಿಯನ್ನು ಮರುಳು ಮಾಡಿದ್ದಲ್ಲದೆ, ಮೊದಲ ಭೇಟಿಯಲ್ಲೇ ಹರಿಯಾಣಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ ಕೇರಳ ಮೂಲದ ಯುವಕನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಬೆಂಗಳೂರು(ಮೇ.29): ಮೂರು ತಿಂಗಳ ‘ಫೇಸ್ಬುಕ್' ಪರಿಚಯದಲ್ಲಿ ಬೆಂಗಳೂರು ಬಾಲಕಿಯನ್ನು ಮರುಳು ಮಾಡಿದ್ದಲ್ಲದೆ, ಮೊದಲ ಭೇಟಿಯಲ್ಲೇ ಹರಿಯಾಣಕ್ಕೆ ಹೊತ್ತೊಯ್ದು ಅತ್ಯಾಚಾರ ಎಸಗಿದ್ದ ಕೇರಳ ಮೂಲದ ಯುವಕನೊಬ್ಬ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಈ ಮೂಲಕ ಸಾಮಾಜಿಕ ಜಾಲತಾಣದ ಪ್ರೇಮ ನಾಟಕಕ್ಕೆ ಬಲಿಯಾಗಿದ್ದ 17 ವರ್ಷದ ಅಪ್ರಾಪ್ತೆಯನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ರಕ್ಷಿಸಿದ್ದಾರೆ. ಕೇರಳದ ನಿವಾಸಿ ಮಹಮದ್ ಆಸೀಫ್ (21) ಎಂಬಾತನನ್ನು ಪೊಕ್ಸೋ ಕಾಯ್ದೆಯಡಿ ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ.
ಮೂಲತಃ ಒಡಿಶಾ ರಾಜ್ಯದ ಮಹಮದ್ ಆಸೀಫ್ ಕುಟುಂಬ ಕಳೆದ 10 ವರ್ಷಗಳ ಹಿಂದೆ ಕೇರಳಕ್ಕೆ ಸ್ಥಳಾಂತರಗೊಂಡಿದೆ. ಆಸೀಫ್ ಕೇರಳದಲ್ಲಿ ಪೇಂಟರ್ ಕೆಲಸ ಮಾಡಿ ಕುಟುಂಬ ನಿರ್ವಹಣೆ ಮಾಡುತ್ತಿದ್ದ. 17 ವರ್ಷದ ಅಪ್ರಾಪ್ತೆ ನಗರದ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಈಕೆಗೆ ಸಾಮಾಜಿಕ ಜಾಲತಾಣ ‘ಫೇಸ್ಬುಕ್'ನಲ್ಲಿ ಆರೋಪಿ ಆಸೀಫ್ನ ಪರಿಚಯವಾಗಿದೆ. ಬಳಿಕ ಇಬ್ಬರೂ ಫೇಸ್ಬುಕ್ ಮುಖಾಂತರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಪರಸ್ಪರ ಸಂದೇಶ ಕಳುಹಿಸುತ್ತಿದ್ದರು.
ಫೇಸ್ಬುಕ್ನಲ್ಲಿ ಅಪ್ರಾಪ್ತೆ ಫೋಟೋ ನೋಡಿದ ಆಸೀಫ್ ಆಕೆ ಸುಂದರವಾಗಿದ್ದರಿಂದ ಪ್ರೀತಿಸತೊಡಗಿದ್ದ. ತನ್ನ ಪ್ರೀತಿಯನ್ನು ಆಕೆ ಬಳಿ ನಿವೇದಿಸಿಕೊಂಡಿದ್ದ. ಆಸೀಫ್ ಕೂಡ ಚೆನ್ನಾಗಿದ್ದರಿಂದ ಅಪ್ರಾಪ್ತೆ ಆತನ ಪ್ರೀತಿಯನ್ನು ಪುರಸ್ಕರಿಸಿದ್ದಳು. ಹೀಗೆ ಇಬ್ಬರು ಮೂರು ತಿಂಗಳ ಕಾಲ ಫೇಸ್ಬುಕ್ ಹಾಗೂ ಮೊಬೈಲ್ನಲ್ಲಿಯೇ ನಿರಂತರ ಸಂಭಾಷಣೆಯಲ್ಲಿ ತೊಡಗಿದ್ದರು.
ಆಸೀಫ್ ಹಾಗೂ ಅಪ್ರಾಪ್ತೆ ಒಮ್ಮೆಯೂ ನೇರವಾಗಿ ಭೇಟಿಯಾಗಿರಲಿಲ್ಲ. ಆಸೀಫ್ ಅಪ್ರಾಪ್ತೆಗೆ ವಿವಾಹವಾಗುವುದಾಗಿ ನಂಬಿಸಿದ್ದು, ಮನೆ ಬಿಟ್ಟು ಹೋಗಿ ಮದುವೆಯಾಗೋಣ ಎಂದು ಪುಸಲಾಯಿಸಿದ್ದ. ಅದರಂತೆ ಕೇರಳದಿಂದ ರೈಲಿನಲ್ಲಿ ಆಸೀಫ್ ಬೆಂಗಳೂರು ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ. ಅಪ್ರಾಪ್ತೆ ಕೂಡ ಮನೆಯಿಂದ ಬಂದು ಇಬ್ಬರು ರೈಲು ಹತ್ತಿದ್ದರು. ರಾತ್ರಿ ಇಡೀ ಅಪ್ರಾಪ್ತೆಯ ಪೋಷಕರು ಎಲ್ಲೆಡೆ ಹುಡುಕಾಡಿದ್ದು, ಮಗಳು ಪತ್ತೆಯಾಗಿಲ್ಲ. ಬಳಿಕ ಮಾಗಡಿ ರಸ್ತೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಪೊಲೀಸರಿಗೆ ಚಳ್ಳೆಹಣ್ಣು: ದೂರು ದಾಖಲಿಸಿಕೊಂಡ ಪೊಲೀಸರು ಕೂಡಲೇ ಬಾಲಕಿ ಪತ್ತೆಗೆ ಮುಂದಾಗಿದ್ದರು. ಬಾಲಕಿಯ ಮೊಬೈಲ್ ಸಂಖ್ಯೆ ಪರಿಶೀಲಿಸಿದಾಗ ಮೊಬೈಲ್ ಟವರ್ ಮೆಜೆಸ್ಟಿಕ್ ಬಳಿ ಪತ್ತೆಯಾಗಿದೆ. ಅಷ್ಟೊತ್ತಿಗೆ ಆರೋಪಿ ಪೊಲೀಸರ ದಾರಿ ತಪ್ಪಿಸುವ ಸಲುವಾಗಿ ಬಾಲಕಿಯನ್ನು ಬೆಂಗಳೂರಿನಿಂದ ರೈಲು ಮೂಲಕ ನೇರವಾಗಿ ಶಿವಮೊಗ್ಗಕ್ಕೆ ಕರೆದೊಯ್ದಿದ್ದ. ಶಿವಮೊಗ್ಗದಿಂದ ಬೆಂಗಳೂರಿಗೆ ವಾಪಸ್ ಬಂದಿರುವ ಆರೋಪಿ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಚೆನ್ನೈ ಮೂಲಕ ವಿಶಾಖಪಟ್ಟಣಕಕೆ ತೆರಳಿದ್ದ. ನಂತರ ಬಾಲಕಿ ಮೊಬೈಲ್ ಸ್ವಿಚ್ ಆಫ್ ಆಗಿದೆ.
ತನಿಖಾ ತಂಡ ಬಾಲಕಿಯ ಕಾಲ್ಡೀಟೆಲ್ಸ್ ಪಡೆದಿದ್ದು, ಹಲವು ಬಾರಿ ಒಂದೇ ನಂಬರ್ಗೆ 10ಕ್ಕೂ ಹೆಚ್ಚು ಕರೆ ಮಾಡಿರುವುದು ತಿಳಿದಿದೆ. ಆ ನಂಬರ್ ಪಡೆದು ಪೊಲೀಸರ ವಿಚಾರಣೆ ನಡೆಸಿದಾಗ ಬಾಲಕಿ ಯುವಕನೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುವುದು ತಿಳಿದಿದೆ. ಯುವಕನ ಮೊಬೈಲ್ ಸಂಖ್ಯೆ ಒಡಿಶಾದ ವಿಳಾಸ ತೋರಿಸಿದೆ. ಪೊಲೀಸರ ತಂಡವೊಂದು ತ್ರಿಶೂಲ್ಗೆ ಹೋಗಿ ತಪಾಸಣೆ ನಡೆಸಿದಾಗ ಯುವಕನ ಕುಟುಂಬದವರು ಹತ್ತು ವರ್ಷಗಳ ಹಿಂದೆಯೇ ಕೇರಳಕ್ಕೆ ಸ್ಥಳಾಂತರಗೊಂಡಿರುವ ವಿಷಯ ತಿಳಿದಿದೆ. ಕೇರಳಕ್ಕೆ ತೆರಳಿದ ಮತ್ತೊಂದು ತಂಡ ಆತನ ಮನೆ ಬಳಿ ಹೋದಾಗ ಆಸೀಫ್ನ ತಾಯಿ ಮತ್ತು ತಂಗಿ ಮಾತ್ರ ಇದ್ದರು. ಮಗ ಎಲ್ಲಿಗೆ ಹೋಗಿದ್ದಾನೆ ಎಂಬುದು ಗೊತ್ತಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದರು. ಆರೋಪಿಯ ನಂಬರ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಪ್ರಕರಣ ಭೇದಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.
ಸ್ನೇಹಿತನಿಗೆ ಕೊನೆ ಕರೆ: ಮೊಬೈಲ್ ಸ್ವಿಚ್ ಆಫ್ ಮಾಡುವ ಮುನ್ನ ಆಸೀಫ್ ಹರಾರಯಣದ ಪಾಣಿಪತ್ನ ಸ್ನೇಹಿತ ಸಂದು ಎಂಬುವನಿಗೆ ಕರೆ ಮಾಡಿ ಮದುವೆಯಾಗಲು ಬೆಂಗಳೂರಿನಿಂದ ಪ್ರಿಯತಮನೆಯನ್ನು ಕರೆದುಕೊಂಡು ಬರುವ ವಿಷಯ ತಿಳಿಸಿದ್ದ.
ಬಳಿಕ ಆಸೀಫ್ ಮತ್ತು ಅಪ್ರಾಪ್ತೆ ಪಾಣಿಪತ್ಗೆ ತೆರಳಿದ್ದು, ಅಲ್ಲಿ ಸಂದು ಇಬ್ಬರಿಗೂ ಉಳಿದುಕೊಳ್ಳಲು ಕೊಠಡಿ ವ್ಯವಸ್ಥೆ ಮಾಡಿದ್ದ. ಕೊನೆಯ ಬಾರಿ ಸ್ನೇಹಿತನಿಗೆ ಆಸೀಫ್ ಕರೆ ಮಾಡಿದ್ದ ಸಂಖ್ಯೆ ಪಡೆದ ಬೆಂಗಳೂರು ಪೊಲೀಸರು ಪಾಣಿಪತ್ನಲ್ಲಿ ಸಂದುವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ಸಿಕ್ಕಿಬಿದ್ದಿದ್ದಾನೆ. ಜತೆಗಿದ್ದ ಅಪ್ರಾಪ್ತೆಯನ್ನು ನಗರಕ್ಕೆ ಕರೆ ತಂದು ಆಕೆಯ ಪೋಕಷರ ಸುರ್ಪದಿಗೆ ಒಪ್ಪಿಸಿದ್ದಾರೆ. ಪಾಣಿಪತ್ನ ಸ್ನೇಹಿತನ ರೂಮ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ನೇಹಿತೆ ಮನೆಗೆ ಹೋಗ್ತೀನಿ ಅಂದ್ಲು!
ಅಪ್ರಾಪ್ತೆ ಮಧ್ಯಾಹ್ನದ ಸಮಯದಲ್ಲಿ ಮನೆಯಿಂದ ಹೊರಡುವಾಗ ಆಕೆಯ ತಾಯಿ ಎಲ್ಲಿಗೆ ಹೋಗುತ್ತಿದ್ದೀಯಾ ಎಂದು ಪ್ರಶ್ನಿಸಿದ್ದರು. ಸ್ನೇಹಿತೆ ಮನೆಗೆ ಹೋಗಿ ನೋಟ್ ಬುಕ್ ತೆಗೆದುಕೊಂಡು ಬರುವುದಾಗಿ ಬಾಲಕಿ, ತಾಯಿ ಬಳಿ ಹೇಳಿದ್ದು, ಇದಕ್ಕೆ ತಾಯಿ ಕೂಡ ವಿರೋಧ ವ್ಯಕ್ತಪಡಿಸಿದ್ದರು. ಬಾಲಕಿ ತನ್ನ ಸ್ನೇಹಿತೆಯಿಂದ ತಾಯಿಗೆ ಕರೆ ಮಾಡಿಸಿ ನಮ್ಮ ಮನೆಗೆ ಬರುತ್ತಿದ್ದಾಳೆ ಕಳುಹಿಸಿ ಎಂದು ಹೇಳಿಸಿದ್ದಳು. ಇದನ್ನು ನಂಬಿದ ತಾಯಿ ಮಗಳನ್ನು ಕಳುಹಿಸಿಕೊಟ್ಟಿದ್ದರು. ಫೇಸ್ಬುಕ್ನಲ್ಲಿ ಪರಿಚಯವಾದ ಅಪ್ರಾಪ್ತೆಗೆ ಆಸೀಫ್ ತಾನು ಎಂಜಿನಿಯರ್ ಎಂದು ಹೇಳಿಕೊಂಡಿದ್ದ. ಇದನ್ನು ಅಪ್ರಾಪ್ತೆ ಕೂಡ ನಂಬಿ ಆತನನ್ನು ಪ್ರೀತಿಸತೊಡಗಿ ದ್ದಳು ಎಂದು ಪೊಲೀಸರು ಹೇಳಿದ್ದಾರೆ.