ಕಾವೇರಿಗಾಗಿ ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯ: ‘ಐತಿಹಾಸಿಕ’ ಐಡಿಯಾ ಕೊಟ್ಟಿದ್ದು ಗೌಡರು!
ಕಾವೇರಿ ವಿವಾದ ಸದ್ಯಕ್ಕೆ ತಣ್ಣಗಾಗಿದೆ. ವಿಧಾನಸಭೆಯಲ್ಲಿ ಐತಿಹಾಸಿಕ ನಿರ್ಣಯವನ್ನು ತೆಗೆದುಕೊಂಡಿದೆ. ಸಿಎಂ ಸಿದ್ದರಾಮಯ್ಯರ ಈ ಜಾಣ ನಿರ್ಣಯಕ್ಕೆ ರಾಜ್ಯಾದ್ಯಂತ ಪ್ರಶಂಸೆ ವ್ಯಕ್ತವಾಗ್ತಿದೆ. ಆದರೆ, ಸಿದ್ದರಾಮಯ್ಯ ಈ ಐಡಿಯಾ ಹಿಂದೆ ಇರುವವರು ಮಾಜಿ ಪ್ರಧಾನಿ, ರಾಜಕೀಯ ಮುತ್ಸದ್ಧಿ ದೇವೇಗೌಡರು.
ತಮ್ಮ ಅಗಾಧವಾದ ರಾಜಕೀಯ ಅನುಭವದಿಂದ ರಾಜ್ಯಕ್ಕೆ ಅದ್ಭುತವಾದ ಸಲಹೆ ನೀಡಿ ಕಾವೇರಿ ನೀರು ಬಿಡದಂತೆ ಸೂಚಿಸಿ ಕನ್ನಡಿಗರ ಮನದಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ವಿಶೇಷ ಅಧಿವೇಶನ ಕರೆದು ಅಲ್ಲಿ ಸರ್ವಾನುಮತದಿಂದ ಕಾವೇರಿ ನೀರು ಬಿಡದಿರಲು ನಿರ್ಣಯ ಮಂಡನೆ ಮಾಡಿ ಅದನ್ನು ಅಂಗೀಕರಿಸುವ ಮೂಲಕ ಸೇಫ್ ಗೇಮ್ ಆಡಿದ್ದಲ್ಲದೇ, ನ್ಯಾಯಾಂಗ ನಿಂದನೆ ತಪ್ಪಿಸುವ ಒಂದು ಮಾಸ್ಟರ್ಸ್ಟ್ರೋಕ್ ಎಂದು ಕಾನೂನು ಮತ್ತು ರಾಜಕೀಯ ತಜ್ಞರು ಹೇಳುತ್ತಿದ್ದಾರೆ.
ವಿಧಾನಸಭೆಯಲ್ಲಿ ನಿರ್ಧಾರ ಮಂಡನೆ ಮಾಡುವುದರಿಂದ ಈ ನಿರ್ಣಯವನ್ನು ಕೋರ್ಟ್ ಪ್ರಶ್ನಿಸುವಂತಿಲ್ಲ. ಈ ಸಲಹೆ ಕಾನೂನು ಪಂಡಿತರಿಗೂ ಹೊಳೆದಿರಲಿಲ್ಲ. ಸಿಎಂ ಸಿದ್ದರಾಮಯ್ಯ ದೇವೇಗೌಡರ ನಿವಾಸಕ್ಕೆ ಸಲಹೆ ಪಡೆಯಲು ಹೋಗಿದ್ದರು. ಈ ವೇಳೆ ರಾಜ್ಯದ ಪರ ವಕೀಲ ಮೋಹನ್ ಕಾತರಕಿ ಅವರೂ ಇದ್ದರು. ಈ ವೇಳೆ ಹೇಳಿದ ಗೌಡರು, ಕೂಡಲೇ ಅಧಿವೇಶನ ಕರೆಯಿರಿ, ಅಧಿವೇಶನದಲ್ಲಿ ಕೈಗೊಂಡ ನಿರ್ಣಯವನ್ನು ಪ್ರಶ್ನಿಸುವಂತಿಲ್ಲ. ಕಲಾಪದಲ್ಲಿ ಮಂಡನೆಯಾದ ನಿರ್ಣಯವು ನ್ಯಾಯಾಂಗ ನಿಂದನೆ ಆಗುವುದಿಲ್ಲ ಅಂತ ಸಲಹೆ ಕೊಟ್ಟಿದ್ದರು.