ಅಣ್ಣನಿಗೆ ಕಿಡ್ನಿ ದಾನ ಮಾಡಲು ತಮ್ಮ ಆತ್ಮಹತ್ಯೆ
- ನೈತಿಕ್ ಕುಮಾರ್ ತಂಡಾಲ್ [19]ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ
- ನನ್ನ ಕಿಡ್ನಿಗಳನ್ನು ನನ್ನ ಅಣ್ಣನಿಗೆ ದಾನ ಮಾಡಿ ಎಂದು ಡೆತ್ ನೋಟ್
- 2 ಕಿಡ್ನಿಗಳು ವಿಫಲವಾಗಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದ ನೈತಿಕ್ ಅಣ್ಣ
ವಡೋದರ[ಜೂ.25]: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅಣ್ಣನನ್ನು ಉಳಿಸಲು ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಹೃದಯಾವಿದ್ರಾವಕ ಘಟನೆ ಗುಜರಾತ್'ನ ವಡೋದರದಲ್ಲಿ ನಡೆದಿದೆ.
2ನೇ ವರ್ಷದ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದ ನೈತಿಕ್ ಕುಮಾರ್ ತಂಡಾಲ್ [19]ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ಈತ ವಡೋದರದ ವಾರ್ನಾಮದಲ್ಲಿ ಬಾರ್ಬಿಯಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ.
ಜೂ.20 ರಂದು ಕಾಲೇಜಿನ ಹಾಸ್ಟೆಲಿಗೆ ಆಗಮಿಸಿದ ನೈತಿಕ್ 'ನನ್ನ ಸಾವಿಗೆ ಯಾರು ಕಾರಣರಲ್ಲ ಸ್ವಯಂ ಇಚ್ಛೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿನ ನಂತರ ನನ್ನ 2 ಕಿಡ್ನಿಗಳನ್ನು ನನ್ನ ಅಣ್ಣನಿಗೆ ದಾನ ಮಾಡಿ. ಉಪಯೋಗಕ್ಕೆ ಬರುವ ಇತರ ಅಂಗಾಂಗಳನ್ನು ತೊಂದರೆಯಲ್ಲಿರುವವರಿಗೆ ದಾನ ಮಾಡಿ' ಎಂದು ಡೆತ್ ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ 2 ದಿನದ ನಂತರ ಯಾರೂ ಕೊಠಡಿಯ ಕಡೆ ಬಾರದಿರುವ ಕಾರಣ ಮೃತನ ದೇಹ ಸಂಪೂರ್ಣ ಕೊಳೆತು ಹೋಗಿದೆ. 36 ಗಂಟೆಯೊಳಗೆ ಈತನ ದೇಹವನ್ನು ಗಮನಿಸಿದ್ದರೆ ಕಿಡ್ನಿಯನ್ನು ದಾನ ಮಾಡಬಹುದಿತ್ತು. ಹಾಳಾಗಿರುವ ದೇಹದಿಂದ ಯಾವುದೇ ಅಂಗಾಂಗವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ' ಎಂದು ವೈದ್ಯರು ತಿಳಿಸಿದ್ದಾರೆ.
ನೈತಿಕ್ ಅಣ್ಣ ಕೆನಿಶ್ ಕೆಲವು ವರ್ಷಗಳಿಂದ 2 ಕಿಡ್ನಿಗಳು ವಿಫಲವಾಗಿ ಡಯಾಲಿಸಿಸ್ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾನೆ. ಆರ್ಥಿಕವಾಗಿ ತೊಂದರೆಯಲ್ಲಿರುವ ಈತನ ಪೋಷಕರಿಗೆ ಚಿಕಿತ್ಸೆ ಭರಿಸಲು ಕಷ್ಟವಾಗುತ್ತಿತ್ತು. ಅಣ್ಣನನ್ನು ಉಳಿಸಲು ಸ್ವತಃ ಪ್ರಾಣ ತ್ಯಜಿಸಿದರೂ ಯಾವುದೇ ಉಪಯೋಗವಾಗಿಲ್ಲ.