ಪಾನಿಪುರಿ ಕಿಟ್ಟಿಯನ್ನು ಸಂಪರ್ಕಿಸಿದ ವಿಜಿ ಮೊದಲ ಪತ್ನಿ
ಹಲ್ಲೆ ಪ್ರಕರಣದಲ್ಲಿ ಜಾಮೀನು ಸಿಗದೆ ನಟ ವಿಜಯ್ ಅವರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಅವರ ಮೊದಲ ಪತ್ನಿ ನಾಗರತ್ನ ಮಾರುತಿ ಗೌಡ ಹಾಗೂ ಪಾನಿಪುರಿ ಕಿಟ್ಟಿ ಅವರನ್ನು ಭೇಟಿ ಮಾಡಿ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಯತ್ನ ಆರಂಭಿಸಿದ್ದಾರೆ.
ಬೆಂಗಳೂರು : ಜಿಮ್ ತರಬೇತುದಾರನ ಮೇಲಿನ ಹಲ್ಲೆ ಪ್ರಕರಣದಲ್ಲಿ ಜಾಮೀನು ಸಿಗದೆ ನಟ ವಿಜಯ್ ಅವರಿಗೆ ಸಂಕಷ್ಟ ಎದುರಾದ ಬೆನ್ನಲ್ಲೇ ಅವರ ಮೊದಲ ಪತ್ನಿ ರಾಜಿ ಸಂಧಾನ ಮೂಲಕ ಪ್ರಕರಣ ಇತ್ಯರ್ಥಪಡಿಸುವ ಯತ್ನ ಆರಂಭಿಸಿದ್ದಾರೆ. ಈ ಸಂಬಂಧ ಗುರುವಾರ ಸಂಜೆ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಾರುತಿ ಗೌಡ ಅವರನ್ನು ಭೇಟಿಯಾಗಿ ವಿಜಯ್ ಮೊದಲ ಪತ್ನಿ ನಾಗರತ್ನ ಯೋಗಕ್ಷೇಮ ವಿಚಾರಿಸಿದರು.
ಇದೇ ವೇಳೆ ದೂರುದಾರ ಮಾರುತಿಗೌಡರ ಚಿಕ್ಕಪ್ಪ ಕೃಷ್ಣಮೂರ್ತಿ ಅಲಿಯಾಸ್ ಪಾನಿಪುರಿ ಕಿಟ್ಟಿ ಅವರನ್ನು ಸಂಪರ್ಕಿಸಿದ ನಾಗರತ್ನ, ಪತಿಯ ಜಾಮೀನಿಗೆ ಆಕ್ಷೇಪಣೆ ಸಲ್ಲಿಸದಂತೆ ಕೋರಿದ್ದಾರೆ ಎಂದು ತಿಳಿದು ಬಂದಿದೆ.
ಮಾರುತಿಗೌಡ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನಾಗರತ್ನ, ನನ್ನ ಪತಿ ವಿಜಯ್ ಅವರಿಗೆ ಒಳಿತಾಗುವುದಾದರೆ ಯಾರ ಕಾಲ ನ್ನಾದರೂ ನಾನು ಹಿಡಿಯಬಲ್ಲೆ ಎಂದು ಹೇಳುವ ಮೂಲಕ ರಾಜಿ-ಸಂಧಾನ ಪ್ರಕ್ರಿಯೆಗೆ ಚಾಲನೆ ನೀಡಿರುವುದನ್ನು ಪರೋಕ್ಷವಾಗಿ ಒಪ್ಪಿಕೊಂಡರು.
ನಮ್ಮ ಕುಟುಂಬಕ್ಕೆ ಪಾನಿಪುರಿ ಕಿಟ್ಟಿ ಹಳೆಯ ಪರಿಚಯಸ್ಥರು. ವಿಜಯ್ಗೆ ಅವರು ಆಪ್ತರಾಗಿದ್ದರು. ಈಗ ಕೆಲವು ಕೆಟ್ಟ ಗಳಿಗೆಯಲ್ಲಿ ಅವರ ನಡುವೆ ಮೈಮನಸ್ಸು ಉಂಟಾಗಿದೆ. ಇದೂ ಬಹುಬೇಗ ದೂರವಾಗಲಿದೆ ಎಂದು ಆಶಯ ವ್ಯಕ್ತಪಡಿಸಿದರು.