ರಸ್ತೆಗಳನ್ನು ಸ್ವಚ್ಚವಾಗಿಟ್ಟುಕೊಳ್ಳದವರಿಗೆ ವಂದೇ ಮಾತರಂ ಎನ್ನಲು ಹಕ್ಕಿದೆಯೇ? ಮೋದಿ
ಮಹಿಳೆಯರ ಬಗ್ಗೆ ಗೌರವ ಇಲ್ಲದ ವ್ಯಕ್ತಿ ಹಾಗೂ ಸ್ವಚ್ಚತೆ ಬಗ್ಗೆ ಗಮನ ಹರಿಸದ ವ್ಯಕ್ತಿಗಳು ವಂದೇ ಮಾತರಂ ಅನ್ನು ಪಠಿಸುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ 125 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದ್ದಾರೆ.
ನವದೆಹಲಿ (ಸೆ.11): ಮಹಿಳೆಯರ ಬಗ್ಗೆ ಗೌರವ ಇಲ್ಲದ ವ್ಯಕ್ತಿ ಹಾಗೂ ಸ್ವಚ್ಚತೆ ಬಗ್ಗೆ ಗಮನ ಹರಿಸದ ವ್ಯಕ್ತಿಗಳು ವಂದೇ ಮಾತರಂ ಅನ್ನು ಪಠಿಸುವ ನೈತಿಕ ಹಕ್ಕನ್ನು ಹೊಂದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ವಾಮಿ ವಿವೇಕಾನಂದರ 125 ನೇ ಜಯಂತಿ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದ್ದಾರೆ.
ತಮ್ಮ ಭಾಷಣದಲ್ಲಿ ಸಾಮಾಜಿಕ ಬದಲಾವಣೆಗೆ ಹೆಚ್ಚಿನ ಒತ್ತು ನೀಡುತ್ತಾ, ಸಮಾಜಘಾತುಕ ಶಕ್ತಿಗಳ ವಿರುದ್ಧ ಹೋರಾಡಲು ಜನರಿಗೆ ಒತ್ತಾಯಿಸಿದ್ದಾರೆ. ಜನರು ಕೆಲವೊಮ್ಮೆ ವಂದೆ ಮಾತರಂ ಎನ್ನುತ್ತಾರೆ. ಈ ಸಂದರ್ಭದಲ್ಲಿ ಮಹಿಳೆಯರನ್ನು ನಾವು ಗೌರವಿಸುತ್ತಿದ್ದೆವೆಯೇ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕು. ಇದರಿಂದ ಬಹಳಷ್ಟು ಜನರಿಗೆ ನೋವಾಗುತ್ತದೆ ಆದರೆ ಮಹಿಳೆಯರನ್ನು ಗೌರವಿಸದೇ ವಂದೇ ಮಾತರಂ ಎನ್ನುವುದು ಸರಿಯೇ? ನಾವು ಸರಿಯಾಗಿದ್ದೇವೆಯೇ ಎಂಬುದನ್ನು 50 ಬಾರಿ ಆಲೋಚಿಸಬೇಕು ಎಂದು ಮೋದಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸ್ವಚ್ಚ ಭಾರತದ ಬಗ್ಗೆ ಮಾತನಾಡುತ್ತಾ, ಜನರು ಪಾನನ್ನು ಜಗಿದು ಅಲ್ಲಿಯೇ ಉಗಿಯುತ್ತಾರೆ. ರಸ್ತೆಗಳನ್ನು ಮೊದಲು ಸ್ವಚ್ಚವಾಗಿಟ್ಟುಕೊಳ್ಳುವವರಿಗೆ ಮಾತ್ರ ವಂದೇ ಮಾತರಂ ಎನ್ನಲು ಹಕ್ಕಿದೆ. ನಾನಿಲ್ಲಿಗೆ ಬಂದಾಗ ಜನರು ವಂದೇ ಮಾತರಂ, ವಂದೇ ಮಾತರಂ ಎಂದು ಜೋರಾಗಿ ಘೋಷಿಸಿದರು. ದೇಶಭಕ್ತಿಯ ಭಾವನೆಗಳೆನೋ ನನ್ನಲ್ಲಿ ತುಂಬಿತು. ಆದರೆ ವಂದೇ ಮಾತರಂ ಎನ್ನಲು ನಮಗೆ ಹಕ್ಕಿದೆಯೇ ಎಂದು ಮೋದಿ ಕೇಳಿದ್ದಾರೆ.