ಕರುಣಾನಿಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್
ಡಿ.15ರಂದು ರಾತ್ರಿ ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಡಲು ಪ್ರಯಾಸಪಡುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚೆನ್ನೈ(ಡಿ.24): ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಡಿಎಂಕೆ ವರಿಷ್ಠ ಮುತ್ತುವೇಲು ಕರುಣಾನಿಧಿ ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ. ಅವರಿಗೆ ನೀಡಲಾಗುತ್ತಿದ್ದ ಆ್ಯಂಟಿ ಬಯಾಟಿಕ್ಸ್ ನೀಡಿಕೆ ಶುಕ್ರವಾರಕ್ಕೆ ಮುಕ್ತಾಯವಾಗಿದೆ. ಜತೆಗೆ ಅವರಿಗೆ ಉಂಟಾಗಿದ್ದ ಉಸಿರಾಟದ ತೊಂದರೆಯೂ ನಿವಾರಣೆಯಾಗಿದೆ ಎಂದು ವೈದ್ಯ ಡಾ.ಎಸ್.ಅರವಿಂದನ್ ತಿಳಿಸಿದ್ದಾರೆ. ಡಿ.15ರಂದು ರಾತ್ರಿ ಗಂಟಲು ಮತ್ತು ಶ್ವಾಸಕೋಶದ ಸೋಂಕಿನಿಂದಾಗಿ ಉಸಿರಾಡಲು ಪ್ರಯಾಸಪಡುತ್ತಿದ್ದ ತಮಿಳುನಾಡಿನ ಮಾಜಿ ಮುಖ್ಯಮಂತ್ರಿಯವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಸಚಿವ ಪಿ.ಚಿದಂಬರಂ, ಎಐಎಡಿಎಂಕೆ ನಾಯಕರಾದ ಎಂ.ತಂಬಿದೊರೈ, ಡಿ.ಜಯಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.