ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿದ ಡಿ.ಕೆ. ಸುರೇಶ್!
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಿ.ಕೆ.ಸುರೇಶ್ ಅಪಘಾತದಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿ ಮಾನವೀಯತೆ ಮೆರೆದಿದ್ದಾರೆ.
ಬೆಂಗಳೂರು : ಕನಕಪುರದ ಬಳಿ ಬೈಕ್ ಅಪಘಾತವಾಗಿ ಸಾವು ಬದುಕಿನ ನಡುವೆ ನರಳಾಡುತ್ತಿದ್ದ ಯುವಕರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಿ.ಕೆ.ಸುರೇಶ್ ಮಾನವೀಯತೆ ಮೆರೆದಿದ್ದಾರೆ.
ಶನಿವಾರ ಹಬ್ಬದ ಪ್ರಯುಕ್ತ ಬೆಂಗಳೂರಿನಿಂದ ತಮ್ಮ ಸ್ವಗ್ರಾಮ ದೊಡ್ಡಾಲಳ್ಳಿಗೆ ತೆರಳುತ್ತಿರುವಾಗ ಕನಕಪುರ ಸಮೀಪದ ಹರಲಾಳು ಗ್ರಾಮದ ಸಮೀಪ ಮಧ್ಯಾಹ್ನ 2ರ ಸುಮಾರಿಗೆ ಎರಡು ಬೈಕ್ ನಡುವೆ ಮುಖಾಮುಖಿ ಡಿಕ್ಕಿಯಾಗಿತ್ತು.
ಅಪಘಾತದಲ್ಲಿ ಇಬ್ಬರು ಯುವಕರು ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಅವರನ್ನು ಗಮನಿಸಿದ ತಕ್ಷಣ ಡಿ.ಕೆ.ಸುರೇಶ್ ನೆರವಿಗೆ ಧಾವಿಸಿದರು. ಅಪಘಾತಗೊಂಡವರ ಪೈಕಿ ಓರ್ವ ಯುವಕನನ್ನು ಹರಲಾಳು ಗ್ರಾಮದ ಶಿವಸ್ವಾಮಿ (19) ಹಾಗೂ ಮತ್ತೊಬ್ಬ ಯುವಕ ಹೊಂಗನಹಳ್ಳಿ ಗ್ರಾಮದ ನವೀನ್ (28) ಎಂದು ಹೇಳಲಾಗಿದೆ.
ಅಪಘಾತ ಗಮನಕ್ಕೆ ಬಂದ ತಕ್ಷಣವೇ ಸಂಸದರು ಒಬ್ಬ ಯುವಕನನ್ನು ತಮ್ಮದೇ ಎಸ್ಕಾರ್ಟ್ ವಾಹನದಲ್ಲಿ ಹಾಗೂ ಇನ್ನೊಬ್ಬ ಯುವಕನನ್ನು ಮತ್ತೊಂದು ವಾಹನದಲ್ಲಿ ಆಸ್ಪತ್ರೆಗೆ ರವಾನಿಸಿದರು. ಆದರೆ ಶಿವಸ್ವಾಮಿ ಮಾರ್ಗ ಮಧ್ಯದಲ್ಲಿ ಕೊನೆಯುಸಿರೆಳೆದಿದ್ದು, ನವೀನ್ ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ ಸಂಸದ ಡಿ.ಕೆ.ಸುರೇಶ್ ಅವರು, ನಂತರ ಯುವಕನ ಚಿಕಿತ್ಸೆ ಕುರಿತು ನಿಮ್ಹಾನ್ಸ್ ವೈದ್ಯಾಧಿಕಾರಿಗಳ ಜತೆ ಮಾತುಕತೆ ನಡೆಸಿದ್ದಾರೆ. ಈ ಎಲ್ಲಾ ಕಾರ್ಯ ಮುಗಿದ ಬಳಿಕವಷ್ಟೇ ಡಿ.ಕೆ.ಸುರೇಶ್ ತಮ್ಮ ಸ್ವಗ್ರಾಮಕ್ಕೆ ತೆರಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.