ಆಳ್ವಾಸ್ ಶಿಕ್ಷಣ ಸಂಸ್ಥೆ ಮೇಲೆ ಕ್ರಮಕ್ಕೆ ಸಮಿತಿ ರಚನೆ
ಜುಲೈ 20 ರಂದು ನಡೆದ ಕಾವ್ಯಾ ಅಸಹಜ ಸಾವಿನ ವಿವಾದದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿತ್ತು.
ಮಂಗಳೂರಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಆಳ್ವಾಸ್ ಸಂಸ್ಥೆಗೆ ನಿಜಕ್ಕೂ ಇದೊಂದು ಶಾಕಿಂಗ್ ನ್ಯೂಸ್. ಆಳ್ವಾಸ್ ಸಂಸ್ಥೆಯ ನ್ಯೂನತೆ ಆರೋಪಗಳ ವಿರುದ್ಧ ಕ್ರಮಕ್ಕೆ ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂದಾಗಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಜುಲೈ 20 ರಂದು ನಡೆದ ಕಾವ್ಯಾ ಅಸಹಜ ಸಾವಿನ ವಿವಾದದ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ ವಿ.ಎಸ್. ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಭೇಟಿ ನೀಡಿತ್ತು. ಈ ವೇಳೆ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಮಿತಿ ಸಂಸ್ಥೆಯಲ್ಲಿ ಕಂಡುಬಂದಿರೋ ನ್ಯೂನತೆ ಕುರಿತಾಗಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿದ್ದ ಸಭೆಯಲ್ಲಿ ಸಮಿತಿಯ ಅಧ್ಯಕ್ಷ ಉಗ್ರಪ್ಪ ತಿಳಿಸಿದರು.
ಪ್ರಮುಖವಾಗಿ ಆಳ್ವಾಸ್ ಶಿಕ್ಷಣ ಸಂಸ್ಥೆಯವರು ವಿದ್ಯಾಸಂಸ್ಥೆಯನ್ನು ನಡೆಸಲು ಅನುಮತಿ ಪಡೆದು ವಸತಿ ಶಾಲೆಯನ್ನು ಕಾನೂನು ಬಾಹಿರವಾಗಿ ನಡೆಸುತ್ತಿರುವುದರ ವಿರುದ್ಧ ಕ್ರಮಕ್ಕೆ ಕೋರಲಾಗಿತ್ತು. ಜೊತೆಗೆ ಕಟ್ಟಡ ನಿರ್ಮಾಣ ನಿಯಮಾವಳಿಗಳು ಹಾಗೂ ಅಗ್ನಿ ಸುರಕ್ಷತೆ ನಿಯಮಾವಳಿಗಳನ್ನೂ ಆಳ್ವಾಸ್ ಶಿಕ್ಷಣ ಸಂಸ್ಥೆ ಉಲ್ಲಂಘಿಸಿರುವುದರ ಬಗ್ಗೆಯೂ ಗಮನಸೆಳೆದಿತ್ತು. ಅಲ್ಲದೆ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡೋ ಸಿಬ್ಬಂದಿಗೆ ಸರ್ಕಾರದ ಮಾನದಂಡದಂತೆ ವೇತನ ನೀಡದಿರುವುದರ ಕುರಿತಾಗಿಯೂ, ವಿಶಾಖ ಗೈಡ್ ಲೈನ್ ಪಾಲನೆಯಾಗಿರದ ಕುರಿತಾಗಿಯೂ ಕ್ರಮಕ್ಕೆ ಕೋರಿಕೆ ಸಲ್ಲಿಸಿತ್ತು. ಇದೀಗ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರೋ ದ.ಕ ಜಿಲ್ಲಾಡಳಿತ ವಿವಿಧ ಇಲಾಖೆಗಳ ತಜ್ಞರನ್ನೊಳಗೊಂಡ ಸಮಿತಿಗಳನ್ನು ರಚಿಸಿದೆ. ಅಲ್ಲದೆ ಒಂದು ತಿಂಗಳೊಳಗಾಗಿ ತನಿಖೆ ನಡೆಸಿ ಕ್ರಮ ಕೈಗೊಂಡು ಅದರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ. ಕೆ.ಜಿ ಜಗದೀಶ್ ಸೂಚಿಸಿದ್ದಾರೆ.