ಪಕ್ಷ ಬಲವರ್ಧನೆಯ ಸಭೆಯಲ್ಲಿ ಹೊಯ್ ‘ಕೈ’: ರಣಾಂಗಣವಾಯ್ತು ಕಾಂಗ್ರೆಸ್ ಮುಖಂಡರ ಸಭೆ
ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡಬೇಕು. ಮತ್ತೊಮ್ಮೆ ಅಧಿಕಾರಕ್ಕೆ ಬರಲೇ ಬೇಕೆಂದು ಪಣತೊಟ್ಟ ಕಾಂಗ್ರೆಸ್ ಸರಣಿ ಸಭೆ ನಡೆಸುತ್ತಿದೆ. ಆದರೆ, ಇದೇ ಸರಣಿ ಸಭೆ ಪಕ್ಷ ಬಲವರ್ಧನೆ ಬಿಟ್ಟು ಪಕ್ಷವನ್ನು ಮತ್ತಷ್ಟು ಮುಜುಗರಕ್ಕೆ ಸಿಲುಕಿಸಲು ಹೊರಟಿದೆ. ನಿನ್ನೆವರೆಗೂ ಬರೀ ಮಾತಿನಲ್ಲಿದ್ದ ಅಸಮಾಧಾನ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ ಕಾಂಗ್ರೆಸ್ ಮಾನ ಹರಾಜು ಹಾಕಿದೆ
ಹಾಸನ(ಮೇ.25): ರಾಜ್ಯದಲ್ಲಿ ಕಾಂಗ್ರೆಸ್ ಬಲವರ್ಧನೆ ಮಾಡಬೇಕು. ಮತ್ತೊಮ್ಮೆ ಅಧಿಕಾರಕ್ಕೆ ಬರಲೇ ಬೇಕೆಂದು ಪಣತೊಟ್ಟ ಕಾಂಗ್ರೆಸ್ ಸರಣಿ ಸಭೆ ನಡೆಸುತ್ತಿದೆ. ಆದರೆ, ಇದೇ ಸರಣಿ ಸಭೆ ಪಕ್ಷ ಬಲವರ್ಧನೆ ಬಿಟ್ಟು ಪಕ್ಷವನ್ನು ಮತ್ತಷ್ಟು ಮುಜುಗರಕ್ಕೆ ಸಿಲುಕಿಸಲು ಹೊರಟಿದೆ. ನಿನ್ನೆವರೆಗೂ ಬರೀ ಮಾತಿನಲ್ಲಿದ್ದ ಅಸಮಾಧಾನ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಗಿ ಕಾಂಗ್ರೆಸ್ ಮಾನ ಹರಾಜು ಹಾಕಿದೆ.
ಹಾಸನ ಮುಖಂಡ ಎಚ್.ಕೆ. ಮಹೇಶ್ ಬೆಂಬಲಿಗರು ಜಿಲ್ಲೆಯಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಬೆಲೆ ಇಲ್ಲ ಹಾಸನ ನಗರಾಭಿವೃದ್ಧಿ ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದವರನ್ನು ತಂದು ಕೂರಿಸಿದ್ದೀರಿ ಎಂದು ಆರೋಪ ಮಾಡಿದರು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಎ. ಮಂಜು ವಿರುದ್ಧ ನೇರವಾಗೇ ವಾಗ್ದಾಳಿ ಮಾಡಿದರು. ಈ ಗದ್ದಲ ದೊಡ್ಡ ಸ್ವರೂಪ ಪಡೆದು ಕೈಕೈ ಮಿಲಾಯಿಸುವ ಹಂತಕ್ಕೆ ಹೋಯಿತು.
ಒಂದು ಹಂತದಲ್ಲಿ ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮಧ್ಯಪ್ರವೇಶಿಸಿ ಗಲಾಟೆ ತಡೆಯುವ ಪ್ರಯತ್ನ ಮಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಇನ್ನು ಸಿಎಂ, ಪರಮೇಶ್ವರ್, ವೇಣುಗೋಪಾಲ್ ಮೂಕವಿಸ್ಮಿತರಾಗಿ ಕುಳಿತುಕೊಳ್ಳಬೇಕಾಯಿತು
ಇಷ್ಟೆಲ್ಲ ಗಲಾಟೆ ರೂವಾರಿ ವಿನಯ್ ಗಾಂಧಿ ತನ್ನನ್ನು ಒಳಗಡೆ ಸಭೆಗೆ ಕರೆದಿಲ್ಲ ಎಂದು ಗಲಾಟೆ ಆರಂಭಿಸಿದ. ಯಶವಂತಪುರ ಶಾಸಕ ಎಸ್.ಟಿ.ಸೋಮಶೇಖರ್ ಈತನ ಸಮಾಧಾನಪಡಿಸುವ ಪ್ರಯತ್ನ ಮಾಡಿದರೂ ಕೇಳಲಿಲ್ಲ. ಒಂದು ಹಂತದಲ್ಲಿ ಪರಮೇಶ್ವರ್ ಗದರಿದ್ದು ಆಯಿತು.
ಇದಲ್ಲದೇ ಮಂಡ್ಯ ಮುಖಂಡರ ಸಭೆಯಲ್ಲಿ ಮಾಜಿ ಸಚಿವ ಅಂಬರೀಶ್, ಮಾಜಿ ಸಂಸದೆ ರಮ್ಯಾ ಗೈರಾಗಿದ್ದು ಕಂಡು ಬಂತು. ಒಟ್ಟಿನಲ್ಲಿ ವೇಣುಗೋಪಾಲ್ ಆರಂಭಿಸಿದ ಐದು ದಿನಗಳ ಸರಣಿ ಸಭೆಯಲ್ಲಿ ಮೂರೇ ದಿನಕ್ಕೆ ಭಾರೀ ಬಂಡವಾಳವೇ ಬಯಲಾಗಿದ್ದು, ಇನ್ನೂ ಎರಡು ದಿನಗಳಲ್ಲಿ ಏನೆಲ್ಲಾ ಆಗುತ್ತದೆ ಕಾದು ನೋಡಬೇಕು.