ಮನವಿ ಸ್ವೀಕರಿಸದ ಸಿಎಂ ವಿರುದ್ಧ ಸಿಡಿದ ಶ್ರೀಗಳು
ಪ್ರತ್ಯೇಕ ಲಿಂಗಾಯತ ಧರ್ಮ, ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸು ಹಿಂಪಡೆಯಲು ಒತ್ತಾಯಿಸಿ ನಗರದಲ್ಲಿ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಮಠಾಧೀಶರು, ವೀರಶೈವ ಸಮಾಜದವರು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪಕ್ಕದ ರಸ್ತೆಯಲ್ಲೇ ಸಾಗಿದರೂ ಮುಖ್ಯಮಂತ್ರಿಗಳು ಸಂಚರಿಸಿದರೂ ಪ್ರತಿಭಟನಾ ಸ್ಥಳಕ್ಕೆ ತೆರಳದೆ, ಹಿಂತಿರುಗಿದ್ದು ಪ್ರತಿಭಟನಾನಿರತರ ಆಕ್ರೋಶಕ್ಕೆ ಕಾರಣವಾಯಿತು.
ಗದಗ (ಮಾ.23): ಪ್ರತ್ಯೇಕ ಲಿಂಗಾಯತ ಧರ್ಮ, ಅಲ್ಪಸಂಖ್ಯಾತ ಸ್ಥಾನಮಾನ ಶಿಫಾರಸು ಹಿಂಪಡೆಯಲು ಒತ್ತಾಯಿಸಿ ನಗರದಲ್ಲಿ ದಿಂಗಾಲೇಶ್ವರ ಶ್ರೀ ನೇತೃತ್ವದಲ್ಲಿ ಮಠಾಧೀಶರು, ವೀರಶೈವ ಸಮಾಜದವರು ಪ್ರತಿಭಟನೆ ನಡೆಸುತ್ತಿದ್ದರು. ಇದರ ಪಕ್ಕದ ರಸ್ತೆಯಲ್ಲೇ ಸಾಗಿದರೂ ಮುಖ್ಯಮಂತ್ರಿಗಳು ಸಂಚರಿಸಿದರೂ ಪ್ರತಿಭಟನಾ ಸ್ಥಳಕ್ಕೆ ತೆರಳದೆ, ಹಿಂತಿರುಗಿದ್ದು ಪ್ರತಿಭಟನಾನಿರತರ ಆಕ್ರೋಶಕ್ಕೆ ಕಾರಣವಾಯಿತು.
ಪ್ರತ್ಯೇಕ ಲಿಂಗಾಯತ ಧರ್ಮ ಇಬ್ಭಾಗ ನಿರ್ಣಯ ಖಂಡಿಸಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ಬೆಳಗ್ಗೆಯಿಂದಲೇ ಕಿತ್ತೂರು ಚÜನ್ನಮ್ಮ ಪ್ರತಿಮೆ ಸಮೀಪ ಪ್ರತಿಭಟನೆ ನಡೆಸಲಾಗುತ್ತಿತ್ತು. ಮನವಿ ಸ್ವೀಕರಿಸಲು ಸಿದ್ದರಾಮಯ್ಯ ಬರಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸುತ್ತಿದ್ದರು.
ಆದರೆ ಮುಖ್ಯಮಂತ್ರಿಗಳು ಜಿಲ್ಲಾಡಳಿತ ಭವನದ ಹಿಂಭಾಗದಲ್ಲಿರುವ ಹೆಲಿಪ್ಯಾಡ್ನಿಂದ ರಿಂಗ್ ರಸ್ತೆ ಮೂಲಕ ನೇರವಾಗಿ ಅಂಬೇಡ್ಕರ್ ಭವನಕ್ಕೆ ತೆರಳಿ, ಗ್ರಾಮೀಣಾಭಿವೃದ್ಧಿ ವಿವಿ ಲೋಕಾರ್ಪಣೆ ಮಾಡಿದರು. ಅಲ್ಲಿಂದ ನೇರವಾಗಿ ಗದಗ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ಹಾಗೂ ಗ್ರಾಮೀಣಾಭಿವೃದ್ಧಿ ವಿವಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ತೆರಳಿದರು. ಕಾರ್ಯಕ್ರಮ ಪೂರ್ಣಗೊಂಡ ಬಳಿಕ ರಿಂಗ್ ರಸ್ತೆ ಮೂಲಕವೇ ಬಹು ಗ್ರಾಮ ಕುಡಿವ ನೀರಿನ ಯೋಜನೆಯ ಲೋಕಾರ್ಪಣೆಗೆ ವಿದ್ಯಾದಾನ ಸಮಿತಿ ಮೈದಾನಕ್ಕೆ ಆಗಮಿಸಿ, ಕಾರ್ಯಕ್ರಮ ಪೂರ್ಣಗೊಳಿಸಿ, ಅದೇ ಮಾರ್ಗದಲ್ಲಿಯೇ ತೆರಳಿದರು. ಶ್ರೀಗಳು ಪ್ರತಿಭಟನೆ ನಡೆಸುತ್ತಿದ್ದ ರಸ್ತೆಗೆ ಬಾರದ ಸಿದ್ದರಾಮಯ್ಯ ಬೇರೆ ಮಾರ್ಗದಲ್ಲಿ ಸಂಚರಿಸಿ ಬೆಂಗಳೂರಿಗೆ ತೆರಳಿದರು.
ಹೆಚ್ಚಿದ ಆಕ್ರೋಶ:
ಮುಖ್ಯಮಂತ್ರಿಗಳ ಈ ವರ್ತನೆ ಖಂಡಿಸಿ ದಿಂಗಾಲೇಶ್ವರ ಶ್ರೀಗಳ ನೇತೃತ್ವದಲ್ಲಿ ವೀರಶೈವರು ತಕ್ಷಣವೇ ಮುಳಗುಂದ ನಾಕಾದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿ ಆಕ್ರೋಶ ವ್ಯಕ್ತ ಪಡಿಸಿದರು. ಜಿಲ್ಲೆಗೆ ಬಂದರೂ ನಮ್ಮ ಮನವಿ ಸ್ವೀಕರಿಸದೇ ಹಾಗೆಯೇ ಹೋಗಿರುವುದನ್ನು ಖಂಡಿಸಿ ರಸ್ತೆ ತಡೆ ನಡೆಸಿದರು. ಈ ವೇಳೆ ಸಂಚಾರ ವ್ಯತ್ಯಯವಾಗಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಮನವಿ ಸ್ವೀಕರಿಸಿದ ನಂತರ ಪ್ರತಿಭಟನೆ ಹಿಂದಕ್ಕೆ ಪಡೆದರು.