ರಾಜ್ಯದಲ್ಲೇ ತೀವ್ರ ಸಂಚಲನ ಮೂಡಿಸಿದ್ದ ದಿಡ್ಡಳ್ಳಿ ಆದಿವಾಸಿ ಜನರ ಹೋರಾಟದ ಫಲವಾಗಿ 500 ಆದಿವಾಸಿ ಕುಟುಂಬಗಳಿಗೆ ಕೊಡಗು ಜಿಲ್ಲಾಡಳಿತ ಜಾಗ ಗುರುತಿಸಿ ಮನೆ ನಿರ್ಮಿಸಿಕೊಡಲು ಮುಂದಾಗಿತ್ತು. ಆಗ ಹೋರಾಟ ಕೈಬಿಟ್ಟಿದ್ದ ಆದಿವಾಸಿಗಳು ಈಗ ಮತ್ತೊಮ್ಮೆ ಹೋರಾಟದ ಮುನ್ಸೂಚನೆ ನೀಡಿದ್ದಾರೆ.. ಅರೆ. ಯಾಕಪ್ಪಾ.. ಏನಾಯ್ತು ಅಂತೀರಾ.. ಈ ರಿಪೋರ್ಟ್​ ನೋಡಿ.

ಮಡಿಕೇರಿ(ಅ. 26): ದಿಡ್ಡಳ್ಳಿ ಆದಿವಾಸಿಗಳ ಹೋರಾಟ ನಿಮಗೆಲ್ಲ ನೆನಪಿದೆ ಅನ್ನಿಸುತ್ತೆ.. ಏಕಾಏಕಿ ಆದಿವಾಸಿಗಳನ್ನು ಜಿಲ್ಲಾಡಳಿತ ಒಕ್ಕಲೆಬ್ಬಿಸಿದಾಗ ಭಿನ್ನ ವಿಭಿನ್ನ ಪ್ರತಿಭಟನೆ ಮೂಲಕ ಜಿಲ್ಲಾಡಳಿತವನ್ನೇ ನಡುಗಿಸಿಬಿಟ್ಟಿದ್ದರು. ಈ ಹೋರಾಟ ಭಾರೀ ಮಟ್ಟದಲ್ಲಿ ಸುದ್ದಿಯಾಗುತ್ತಲೇ ಮಣಿದ ಜಿಲ್ಲಾಡಳಿತ ಹಾಗೂ ಸಮಾಜ ಕಲ್ಯಾಣ ಇಲಾಖೆ, ಒಕ್ಕಲೆಬ್ಬಿಸಿದ್ದ 500 ಕುಟುಂಬಗಳಿಗೂ ಮನೆ ನಿರ್ಮಾಣ ಮಾಡಿಕೊಡುವ ಭರವಸೆ ನೀಡಿತ್ತು. ಆಗ ಪ್ರತಿಭಟನೆ ವಾಪಸ್ ಪಡೆದಿದ್ದ ಆದಿವಾಸಿಗಳು ಈಗ ಮತ್ತೊಮ್ಮೆ ಹೋರಾಟಕ್ಕಿಳಿಯುವ ಮುನ್ಸೂಚನೆ ಕೊಟ್ಟಿದ್ದಾರೆ. ಯಾಕಂದ್ರೆ ಜಿಲ್ಲಾಡಳಿತ ಹೇಳಿದ್ದಕ್ಕಿಂತ ಚಿಕ್ಕ ಮನೆಗಳನ್ನ ನಿರ್ಮಾಣ ಮಾಡಿಕೊಡಲು ಮುಂದಾಗಿದ್ದೇ ಇವರ ಆಕ್ರೋಶಕ್ಕೆ ಕಾರಣ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಕ್ಕಲೆಬ್ಬಿಸಿದ್ದ ದಿಡ್ಡಳ್ಳಿ ಆದಿವಾಸಿಗಳಿಗೆ ಸೋಮವಾರಪೇಟೆ ತಾಲೂಕಿನ ಬಸವನಹಳ್ಳಿ ವ್ಯಾಪ್ತಿಯಲ್ಲಿ ನಿವೇಶನ ನಿರ್ಮಿಸಲಾಗುತ್ತಿದೆ. ಕೇವಲ ನಾಲ್ಕು ಲಕ್ಷ ವೆಚ್ಚದಲ್ಲಿ ಕಳಪೆ ಗುಣಮಟ್ಟದ ಚಿಕ್ಕ ಚಿಕ್ಕ ಮನೆಗಳನ್ನ ನಿರ್ಮಿಸುತ್ತಿದ್ದಾರಂತೆ. ಅಷ್ಟೇ ಅಲ್ಲ, ಮಕ್ಕಳಿಗೆ ಅಲ್ಲಿಯೇ ಅಂಗನವಾಡಿ ನಿರ್ಮಿಸಿ ಕೊಡಿ ಅನ್ನೋ ಬೇಡಿಕೆಗೂ ಸ್ಪಂದನೆ ಸಿಕ್ಕಿಲ್ಲವಂತೆ.

ಒಟ್ಟಿನಲ್ಲಿ, ಜಿಲ್ಲಾಡಳಿತ ತನ್ನ ಮಾತನ್ನೇ ತಾನು ಪಾಲಿಸುತ್ತಿಲ್ಲ ಅನ್ನೋದು ಆದಿವಾಸಿಗಳ ಆರೋಪ. ಜಿಲ್ಲಾಡಳಿತದ ಈ ನಡೆ ದಿಡ್ಡಳ್ಳಿಯಲ್ಲಿ ಮತ್ತೊಂದು ಹೋರಾಟಕ್ಕೆ ನಾಂದಿ ಹಾಡಿದ್ರೂ ಅಚ್ಚರಿಯಿಲ್ಲ.