ರಾಜ್ಯ ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ಗೆ ಅವಮಾನ?
ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಕಡೆಗಣಿಸಿ ಇಡಲಾಗಿದೆ ಎಂಬ ವಿಷಯ ವಿವಾದಕ್ಕೀಡಾಗಿತ್ತು.
ಬೆಂಗಳೂರು: ರಾಜ್ಯ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರವನ್ನು ಕಡೆಗಣಿಸಿ ಇಡಲಾಗಿದೆ ಎಂಬ ವಿಷಯ ವಿವಾದಕ್ಕೀಡಾಗಿತ್ತು.
ಅಂಬೇಡ್ಕರ್ ಭಾವಚಿತ್ರವನ್ನು ಕಚೇರಿಯ ಉಗ್ರಾಣ ಕೊಠಡಿಯಲ್ಲಿ ಇಡುವ ಮೂಲಕ ಅಪಮಾನ ಎಸಗಲಾಗಿದೆ ಎಂದು ಸೋಮವಾರ ಆರೋಪಿಸಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಆದರೆ ಈ ಬಗ್ಗೆ ಸಮಜಾಯಿಷಿ ನೀಡಿರುವ ಪಕ್ಷದ ಕಚೇರಿ ಮೂಲಗಳು, ಈ ಭಾವಚಿತ್ರವನ್ನು ಭಾನುವಾರ ನಡೆದ ಸಂವಿಧಾನ ದಿನ ಕಾರ್ಯಕ್ರಮದ ಅಂಗವಾಗಿ ಬೇರೆಡೆಯಿಂದ ತಂದದ್ದು. ಪಕ್ಷದ ಕಚೇರಿಯಲ್ಲಿರುವ ಭಾವ ಚಿತ್ರ ಹಾಗೆಯೇ ಇದೆ. ಹೊರಗಿನಿಂದ ತಂದಿರುವ ಭಾವಚಿತ್ರ ದೊಡ್ಡದಾಗಿರುವುದರಿಂದ ಸಾಗಿಸುವ ಮೊದಲು ಉಗ್ರಾಣ ಕೊಠಡಿಯಲ್ಲಿ ಇಡಲಾಗಿತ್ತೇ ಹೊರತು ಕಡೆಗಣಿಸಿದ್ದಲ್ಲ. ಪಕ್ಷದ ಕಚೇರಿಯಲ್ಲಿ ಮೊದಲಿನಿಂದಲೂ ಇರುವ ಭಾವಚಿತ್ರ ಹಾಗೆಯೇ ಇದೆ ಎಂದು ತಿಳಿಸಿವೆ.