ಗೇರ್ ಬದಲಿಸಿದ್ದ ’ವಾಯು’ ಮತ್ತೆ ಗುಜರಾತ್ಗೆ ಯೂ ಟರ್ನ್!
ಒಮಾನ್ ಬದಲು ಮತ್ತೆ ಗುಜರಾತ್ ಕರಾವಳಿಯತ್ತ ‘ವಾಯು’ ಮಾರುತ!| ಸೋಮವಾರ ಕಛ್ಗೆ ಅಪ್ಪಳಿಸುವ ಸಾಧ್ಯತೆ: ಅಪಾಯವಿಲ್ಲ
ನವದೆಹಲಿ[ಜೂ.15]: ಒಮಾನ್ನತ್ತ ಪಥ ಬದಲಿಸಿದ್ದ ‘ವಾಯು’ ಚಂಡಮಾರುತ ಮತ್ತೆ ಗುಜರಾತ್ನತ್ತ ಮುಖಮಾಡುವ ಲಕ್ಷಣಗಳು ಕಂಡುಬಂದಿವೆ. ಇದರಿಂದಾಗಿ ಚಂಡಮಾರುತ ಅಪಾಯದಿಂದ ಪಾರಾದ ನಿರಾಳತೆಯಲ್ಲಿದ್ದ ಗುಜರಾತ್ ಸರ್ಕಾರಕ್ಕೆ ಆತಂಕ ಶುರುವಾದಂತಾಗಿದೆ.
ಅರಬ್ಬೀ ಸಮುದ್ರದಲ್ಲಿ ಸೃಷ್ಟಿಯಾದ ‘ವಾಯು’ ಚಂಡಮಾರುತ ಗುರುವಾರ ಗುಜರಾತ್ ಕರಾವಳಿಗೆ ಅಪ್ಪಳಿಸಬೇಕಿತ್ತು. ಆದರೆ ಬುಧವಾರ ರಾತ್ರಿ ಪಥ ಬದಲಿಸಿ, ಒಮಾನ್ನತ್ತ ಮುಖ ಮಾಡಿತ್ತು. ಆದರೆ ಈಗ ಚಂಡಮಾರುತ ಭಾನುವಾರ ಮತ್ತೆ ತಿರುವು ಪಡೆದುಕೊಳ್ಳುವ ಸಾಧ್ಯತೆ ಇದೆ. ಜೂ.17ರ ಸೋಮವಾರ- ಜೂ.18ರ ಮಂಗಳವಾರದಂದು ಗುಜರಾತಿನ ಕಛ್ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇದೆ ಎಂದು ಭೂವಿಜ್ಞಾನ ಸಚಿವಾಲಯದ ಕಾರ್ಯದರ್ಶಿ ರಾಜೀವನ್ ತಿಳಿಸಿದ್ದಾರೆ.
ಕರಾವಳಿಯಲ್ಲಿ ಭಾರಿ ಮಳೆ : ತುಂಬಿದ ನೇತ್ರಾವತಿಯ ಒಡಲು
ಈ ಕುರಿತು ಗುಜರಾತ್ ಸರ್ಕಾರಕ್ಕೆ ಈಗಾಗಲೇ ಮಾಹಿತಿ ನೀಡಲಾಗಿದೆ. ಆದರೆ ಗುಜರಾತ್ ಕರಾವಳಿಗೆ ಅಪ್ಪಳಿಸುವಷ್ಟರಲ್ಲಿ ಚಂಡಮಾರುತ ತನ್ನ ತೀವ್ರತೆ ಕಳೆದುಕೊಂಡಿರುವ ಸಾಧ್ಯತೆ ಇದೆ ಎಂದು ವಿವರಿಸಿದ್ದಾರೆ.