ಮೂರು ದಿನಗಳ ನಿರಂತರ ಹೋರಾಟ. ಕೊನೆಗೂ ಸಾವನ್ನು ಗೆದ್ದು ಬರಲೇ ಇಲ್ಲ. ಕಾವೇರಿ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಪುಟ್ಟ ಕಂದಮ್ಮನ ಅಂತ್ಯಕ್ರಿಯೆಯನ್ನೂ ನಿನ್ನೆಯೇ ನೆರವೇರಿಸಲಾಯಿತು.

ಬೆಳಗಾವಿ(ಎ.25): ಮೂರು ದಿನಗಳ ನಿರಂತರ ಹೋರಾಟ. ಕೊನೆಗೂ ಸಾವನ್ನು ಗೆದ್ದು ಬರಲೇ ಇಲ್ಲ. ಕಾವೇರಿ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ ಪುಟ್ಟ ಕಂದಮ್ಮನ ಅಂತ್ಯಕ್ರಿಯೆಯನ್ನೂ ನಿನ್ನೆಯೇ ನೆರವೇರಿಸಲಾಯಿತು.

Add Asianetnews Kannada as a Preferred SourcegooglePreferred

ನಿನ್ನೆ ಆರು ವರ್ಷದ ಬಾಲಕಿ ಕಾವೇರಿಯ ಮೃತದೇಹವನ್ನು ರಕ್ಷಣಾ ಸಿಬ್ಬಂದಿ ಹೊರತರುತ್ತಿದ್ದಂತೆ, ನೇರವಾಗಿ ಕಾವೇರಿಯ ಮೃತದೇಹವನ್ನ ಸಾಗಿಸಿದ್ದು ಕೊಕಟನೂರಿನ ಸರ್ಕಾರಿ ಆಸ್ಪತ್ರೆಗೆ,ಅಲ್ಲಿ ತಹಶೀಲ್ದಾರ್ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು.

11.34ರ ಸಮಯಕ್ಕೆ ಮೃತದೇಹವನ್ನ ಹೊರತೆಗೆದ ಬಳಿಕ 12.15ರ ಸುಮಾರಿಗೆ ಕೊಕಟನೂರಿನ ಆಸ್ಪತ್ರೆಗೆ ಮೃತದೇಹ ತಲುಪಿತು. ಅಲ್ಲಿ ಮರಣೋತ್ತರ ಪರೀಕ್ಷೆ ಆದ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

ಬಳಿಕ ಕಾವೇರಿಯ ಮೃತದೇಹವನ್ನ ಝುಂಜರವಾಡ ಗ್ರಾಮಕ್ಕೆ ಮಧ್ಯರಾತ್ರಿ 1.10ರ ಸುಮಾರಿಗೆ ತರಲಾಯಿತು. ಅಷ್ಟರಲ್ಲಾಗಲೇ ಹೆತ್ತ ಪೋಷಕರ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನು, ಮೃತದೇಹ ಗ್ರಾಮ ತಲುಪಿದ ಕೆಲವೇ ಕ್ಷಣದಲ್ಲಿ ಅಂತ್ಯಸಂಸ್ಕಾರಕ್ಕೆ ಸಕಲ ತಯಾರಿ ಮಾಡಿಕೊಳ್ಳಲಾಯ್ತು. ಈ ವೇಳೆ, ಜಿಲ್ಲಾಧಿಕಾರಿ ಜಯರಾಂ, ಎಸ್ಪಿ ರವಿಕಾಂತೇಗೌಡ, ತಹಶೀಲ್ದಾರ್ ಸ್ಥಳದಲ್ಲೇ ಇದ್ದರು.

ಇನ್ನು, ಪೋಷಕರ ಆಕ್ರಂದನ, ಹೆತ್ತವರ ಅಳಲಿನ ನಡುವೆಯೇ ಕಾವೇರಿ ಮಣ್ಣಲ್ಲಿ ಮಣ್ಣಾಗಿ ಹೋದಳು. ಇಂಥಹ ಸಾವು ಯಾರಿಗೂ ಬಾರದಿರಲಿ ಎಂಬುದೇ ನಮ್ಮ ಪ್ರಾರ್ಥನೆ.