ಗಂಭೀರ ದುರ್ನಡತೆ : ರಾಜಕೀಯ ಮುಖಂಡ ಉಚ್ಛಾಟನೆ
ಗಂಭೀರ ದುರ್ನಡತೆ ಆರೋಪದಡಿಯಲ್ಲಿ ಮುಖಂಡನೋರ್ವನ ಉಚ್ಛಾಟನೆಯಾಗಿದೆ. ಸಿಪಿಎಂನ ಕೇಂದ್ರೀಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಶ್ರೀರಾಮರೆಡ್ಡಿಯನ್ನು ಉಚ್ಛಾಟನೆ ಮಾಡಲಾಗಿದೆ.
ನವದೆಹಲಿ: ಗಂಭೀರ ದುರ್ನಡತೆ ತೋರಿದ್ದಾರೆ ಎಂಬ ಆರೋಪದ ಮೇರೆಗೆ ಜಿ.ವಿ. ಶ್ರೀರಾಮರೆಡ್ಡಿ ಅವರನ್ನು ಸಿಪಿಎಂನ ಕೇಂದ್ರೀಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿಯ ಕಾರ್ಯದರ್ಶಿ ಹುದ್ದೆ ಸೇರಿದಂತೆ ಎಲ್ಲ ಸ್ಥಾನಗಳಿಂದ ಉಚ್ಚಾಟಿಸಲಾಗಿದೆ ಎಂದು ಸಿಪಿಎಂ ತಿಳಿಸಿದೆ.
ಆದರೆ, ಶ್ರೀರಾಮರೆಡ್ಡಿ ಅವರು ಯಾವ ರೀತಿಯ ದುರ್ನಡತೆ ತೋರಿದರು ಎಂಬುದರ ಮಾಹಿತಿಯನ್ನು ಸಿಪಿಎಂ ಹೊರಗೆಡವಿಲ್ಲ.
ಈ ಬಗ್ಗೆ ಗುರುವಾರ ಹೇಳಿಕೆ ಬಿಡುಗಡೆ ಮಾಡಿರುವ ಸಿಪಿಎಂ, ‘2018ರ ಡಿಸೆಂಬರ್ 15, 16ರಂದು ನಡೆದ ಕಮ್ಯೂನಿಸ್ಟ್ ಪಕ್ಷದ ಕೇಂದ್ರೀಯ ಸಮಿತಿ ಸಭೆಯಲ್ಲಿ ಜಿ.ವಿ. ಶ್ರೀರಾಮರೆಡ್ಡಿ ಅವರ ವಿರುದ್ಧ ಗಂಭೀರ ದುರ್ನಡತೆ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಅವರನ್ನು ಪಕ್ಷದ ಎಲ್ಲ ಹುದ್ದೆಗಳಿಂದ ವಜಾ ಮಾಡಬೇಕೆಂಬ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಹೇಳಿದೆ.