Asianet Suvarna News Asianet Suvarna News

ಸಿಎಂ ಅಮೆರಿಕದಿಂದ ಬೇಗ ಬಂದಿದ್ರೆ ಸರ್ಕಾರ ಉಳಿಯುತ್ತಿತ್ತಾ?

ಪತನದ ಅಂಚಿನಲ್ಲಿದೆ ಮೈತ್ರಿ ಸರ್ಕಾರ | ಅಮೆರಿಕದಲ್ಲೇ ಇರು. ಇಲ್ಲಿ ನಾವಿದ್ದೇವೆ’ ಎಂಬ ದೇವೇಗೌಡ್ರ ಸಲಹೆಯೇ ಸಿಎಂಗೆ ಮುಳುವಾಯ್ತಾ?  

Could CM HD Kumaraswamy safeguard the coalition govt if he was back soon from America
Author
Bengaluru, First Published Jul 9, 2019, 11:40 AM IST

ಕುಮಾರಸ್ವಾಮಿ ಅವರು ರೆಸಾರ್ಟ್‌ ಪಾಲಿಟಿಕ್ಸ್‌, ಶಾಸಕರನ್ನು ಸೆಳೆಯುವುದು ಇದರಲ್ಲೆಲ್ಲಾ ಪಳಗಿದ ಹೊಸ ತಲೆಮಾರಿನ ರಾಜಕಾರಣಿ. ಆದರೆ ಏಕೋ ಏನೋ ಎರಡು ಪಕ್ಷಗಳ ಶಾಸಕರ ಅಸಮಾಧಾನ ತಾರಕದಲ್ಲಿದೆ ಎಂದು ಗೊತ್ತಿದ್ದರೂ ಅಮೆರಿಕಕ್ಕೆ ತೆರಳಿದರು. ಅಷ್ಟೇ ಅಲ್ಲ, ಎರಡು ವಿಕೆಟ್‌ ಬಿದ್ದ ನಂತರವೂ ತಂದೆಯ ಅಣತಿಯಂತೆ ಅಮೆರಿಕದಲ್ಲೇ ಉಳಿದರು.

'ಅತೃಪ್ತರ ರಾಜೀನಾಮೆ ತುರ್ತು ಅಂಗೀಕಾರ ಇಲ್ಲ': ದೋಸ್ತಿಗೆ ಕೊಂಚ ರಿಲೀಫ್!

ಆಗ 2 ಇದ್ದ ಸಂಖ್ಯೆ ಈಗ 14ಕ್ಕೆ ಬಂದಿದೆ. 3 ದಿನದಲ್ಲಿ ಚೆಂಡು ಸ್ಪೀಕರ್‌ ಕೈಯಿಂದ ರಾಜ್ಯಪಾಲರ ಅಂಗಳಕ್ಕೆ ಬಂದಿದೆ. ಹತ್ತು ವರ್ಷದ ಹಿಂದೆ 2008ರಲ್ಲಿ ‘ಬಿಜೆಪಿಗೆ ಅಧಿಕಾರ ಬೇಡ’ ಎಂಬ ತಂದೆಯ ಸಲಹೆ ಕುಮಾರಸ್ವಾಮಿಯವರ ವಿಶ್ವಾಸಾರ್ಹತೆಯನ್ನೇ ಕುಂದಿಸಿತ್ತು.

ಈಗ, ‘ಅಮೆರಿಕದಲ್ಲೇ ಇರು. ಇಲ್ಲಿ ನಾವಿದ್ದೇವೆ’ ಎಂಬ ತಂದೆಯ ಸಲಹೆ ಅವರನ್ನು ಕುರ್ಚಿಯಿಂದ ಬಹುತೇಕ ದೂರ ಮಾಡಿದಂತೆ ಕಾಣುತ್ತಿದೆ. ಹಿಂದೆ ರಾಜ ಮಹಾರಾಜರು ಕೂಡ ಅರಮನೆಯಲ್ಲೇ ಶತ್ರುಗಳಿದ್ದ ಕಾರಣ ಯುದ್ಧಕ್ಕೆ ಹೋಗುವಾಗ ಎಲ್ಲ ಬಂದೋಬಸ್ತ್ ಮಾಡಿಯೇ ಹೋಗುತ್ತಿದ್ದರು. ಜಗತ್ತಿನ ಇತಿಹಾಸದಲ್ಲಿ ಬಹಳಷ್ಟುಕ್ಷಿಪ್ರಕ್ರಾಂತಿ ನಡೆದದ್ದು ರಾಜ ರಾಜಧಾನಿಯಿಂದ ಹೊರಗಿದ್ದಾಗ ಅಲ್ಲವೇ!

ಸೂಪರ್‌ ಸಿಎಂ ರೇವಣ್ಣನ ಅತಿರೇಕವೂ

ಸರ್ಕಾರದಲ್ಲಿ ನಡೆಯುತ್ತಿರುವ ಕಂಪನಕ್ಕೆ ಗೌಡರು ಮತ್ತು ಸಿದ್ದು ನಡುವಿನ ಜಿದ್ದು ಮುಖ್ಯ ಕಾರಣ ಆದರೂ, ಸೂಪರ್‌ ಸಿಎಂ ರೇವಣ್ಣ ಕಾರಣದಿಂದ 5 ಶಾಸಕರು ಮುಂಬೈ ಸೇರಿದ್ದಾರೆ. ಬೆಂಗಳೂರು ಕಾಂಗ್ರೆಸ್‌ ಶಾಸಕರಾದ ಮುನಿರತ್ನ, ಸೋಮಶೇಖರ್‌, ಬೈರತಿ ಬಸವರಾಜ್‌, ಜೆಡಿಎಸ್‌ ಶಾಸಕರಾದ ವಿಶ್ವನಾಥ್‌ ಮತ್ತು ನಾರಾಯಣ ಗೌಡ ಇವರೆಲ್ಲ ರೇವಣ್ಣನವರ ಅತಿಯಾದ ಹಸ್ತಕ್ಷೇಪದಿಂದ ಉಸಿರುಗಟ್ಟಿಹೊರಗೆ ಹೋಗುತ್ತಿದ್ದೇವೆ ಎಂದಿದ್ದಾರೆ.

ಕೈ ಶಾಸಕಿ ಬರ್ತೀನಿ ಅಂದು ಬೇಡ ಅಂತಿದ್ದಾರೆ ಬಿಜೆಪಿ ನಾಯಕರು

ರೇವಣ್ಣ ಒಬ್ಬ ಒಳ್ಳೆಯ ಕೆಲಸಗಾರ; ಇದರಲ್ಲಿ ಎರಡು ಮಾತಿಲ್ಲ. ಆದರೆ ಅವರ ಬಳಿ ನಯ-ನಾಜೂಕು ಇಲ್ಲ. ನಾನೊಬ್ಬನೇ ಎಲ್ಲ ಮಾಡುತ್ತೇನೆ ಎಂಬ ಉತ್ಸಾಹವಿದೆ. ಇದೇ ಮಂತ್ರಿಗಳು ಮತ್ತು ಶಾಸಕರ ಕೋಪಕ್ಕೆ ಕಾರಣ. 4 ತಿಂಗಳ ಹಿಂದೆ ರೇವಣ್ಣ ದಿಲ್ಲಿಗೆ ಬಂದಿದ್ದರು. ನನಗೆ ಯಾವುದೋ ಕಟ್ಟಡದ ನಕಾಶೆ ತೋರಿಸುತ್ತಿದ್ದರು.

ಏಕಾಏಕಿ, ‘ಪ್ರಶಾಂತ, ನನ್ನ ಬೈಟ್‌ ತಗೊಳ್ಳಿ’ ಅಂದರು. ಕ್ಯಾಮೆರಾ ಚಾಲೂ ಆದ ತಕ್ಷಣ, ಸುಮಲತಾ ಬಗ್ಗೆ ಬೇಕು ಬೇಡವಾದದ್ದನ್ನೆಲ್ಲ ಮಾತನಾಡಿದರು. ಒಬ್ಬ ಮಹಿಳೆ ಬಗೆಗಿನ ಈ ರೀತಿಯ ಮಾತುಗಳು ದೇವೇಗೌಡರ ಕುಟುಂಬದ ಬಗ್ಗೆ ರಾಜ್ಯದ ಜನರಲ್ಲಿ ಬೇಸರ ಮೂಡಲು ಕಾರಣವಾಯಿತು. ಮಂಡ್ಯದ ಸೋಲು, ತುಮಕೂರಿನ ಸೋಲು, ಈಗಿನ ಸಂಕಷ್ಟಎಲ್ಲದರಲ್ಲೂ ಆ ಮಾತುಗಳ ಎಫೆಕ್ಟ್ ಇದೆ. 

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ‘ಇಂಡಿಯಾ ಗೇಟ್ ಕ್ಲಿಕ್ ಮಾಡಿ 

Follow Us:
Download App:
  • android
  • ios