ಶಂಕಿತ ನಕ್ಸಲರು ಪ್ರತ್ಯಕ್ಷವಾಗಿರುವ ಮಡಪ್ಪಾಡಿಯ ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ನಡೆದಿದೆ. 

ಸುಳ್ಯ: ಶಂಕಿತ ನಕ್ಸಲರು ಪ್ರತ್ಯಕ್ಷವಾಗಿರುವ ಮಡಪ್ಪಾಡಿಯ ಅರಣ್ಯದಲ್ಲಿ ಶನಿವಾರ ಮಧ್ಯಾಹ್ನ ಕೂಂಬಿಂಗ್‌ ಕಾರ್ಯಾಚರಣೆಯ ವೇಳೆ ನಕ್ಸಲ್‌ ನಿಗ್ರಹ ಪಡೆಯ ಪೊಲೀಸರೊಬ್ಬರು ಹೃದಯಾಘಾತದಿಂದ ಮೃತಪಟ್ಟಘಟನೆ ನಡೆದಿದೆ. ಎಎನ್‌ಎಫ್‌ ಕಾರ್ಕಳ ಕ್ಯಾಂಪ್‌ನ ಪೊಲೀಸ್‌ ಸಿಬ್ಬಂದಿ, ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿ ರಂಗಸ್ವಾಮಿ (48) ಮೃತಪಟ್ಟವರು.

Add Asianetnews Kannada as a Preferred SourcegooglePreferred

ಶನಿವಾರ ಬೆಳಗ್ಗೆ ಎಎನ್‌ಎಫ್‌ ತಂಡವೊಂದು ಮಡಪ್ಪಾಡಿಯಿಂದ ಕಡ್ಯ ಮಾರ್ಗವಾಗಿ ಅರಣ್ಯದೊಳಗೆ ತೆರಳಿ ಕೂಂಬಿಂಗ್‌ ಕಾರ್ಯಾಚರಣೆ ನಡೆಸುತ್ತಿತ್ತು. ಮಧ್ಯಾಹ್ನ ಈ ತಂಡ ಕಠಿಣವಾದ ಏರುಹಾದಿಯಲ್ಲಿ ತೆರಳುತ್ತಿತ್ತು. ಮಳೆ ಸಹ ಸುರಿಯುತ್ತಿತ್ತು. ಈ ವೇಳೆ ರಂಗಸ್ವಾಮಿ ಅವರಿಗೆ ಮುಂದೆ ನಡೆಯಲಾಗದೆ ಬಸವಳಿದು ಕುಸಿದು ಬಿದ್ದು ಮೃತಪಟ್ಟರೆಂದು ಮೂಲಗಳು ತಿಳಿಸಿವೆ.

ಕಡ್ಯದಿಂದ ಕೋಟೆಗುಡ್ಡೆಯವರೆಗೆ ಐದು ಕಿ.ಮೀ. ದುರ್ಗಮ ರಸ್ತೆ ಇದ್ದು, ಜೀಪ್‌ ಮಾತ್ರ ಸಂಚರಿಸಬಹುದಾಗಿದೆ. ಅಲ್ಲಿಂದ ಮೂರು ಕಿ.ಮೀ. ದೂರದ ಕಾಡೊಳಗೆ ಈ ಘಟನೆ ನಡೆದಿದೆ. ದುರ್ಗಮ ಕಾಡಿನಿಂದ ಮೃತದೇಹವನ್ನು ತರಲು ಹರಸಾಹಸ ಪಟ್ಟರು. ರಂಗಸ್ವಾಮಿ ಅವರು ನಕ್ಸಲ್‌ ನಿಗ್ರಹ ಪಡೆಗೆ ಬರುವ ಮೊದಲು ವೀರಪ್ಪನ್‌ ವಿರುದ್ಧದ ಕಾರ್ಯಾಚರಣೆಯ ಎಸ್‌ಟಿಎಫ್‌ನಲ್ಲೂ ಕಾರ್ಯ ನಿರ್ವಹಿಸಿದ್ದರು.