ಕುಡಿತಕ್ಕೆ ಹಣ ಹೊಂದಿಸಲು ಬೈಕ್ ಕದ್ದ!
ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ. ತುರ್ತು ಹಣ ಬೇಕಿದೆ, ಬೈಕ್ನ ದಾಖಲೆಗಳನ್ನು ಬಳಿಕ ತಂದು ಕೊಡುವುದಾಗಿ ಹೇಳಿ ಎರಡರಿಂದ ಮೂರು ಸಾವಿರದಷ್ಟು ಹಣ ಪಡೆದು ಪರಾರಿಯಾಗುತ್ತಿದ್ದ. ಕಡಿಮೆ ಮೊತ್ತಕ್ಕೆ ಬೈಕ್ ಸಿಗುತ್ತಿದ್ದರಿಂದ ಸಾರ್ವಜನಿಕರು ಕೂಡ ಆರೋಪಿ ಸಂಪರ್ಕಿಸುವ ಪ್ರಯತ್ನ ಮಾಡುತ್ತಿರಲಿಲ್ಲ.
ಬೆಂಗಳೂರು(ಆ.17): ಕುಡಿತಕ್ಕೆ ಹಣ ಹೊಂದಿಸಲು ಬೈಕ್ ಕಳವು ಮಾಡುತ್ತಿದ್ದ ಯುವಕನೊಬ್ಬನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ.
ಕಾಳಸ್ತಿನಗರ ನಿವಾಸಿ ರಂಗಸ್ವಾಮಿ (28) ಬಂಧಿತ. ಆರೋಪಿಯಿಂದ 10 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದೆ. ಮತ್ತೊಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ರಂಗಸ್ವಾಮಿ ಯಾವುದೇ ಕೆಲಸಕ್ಕೆ ಹೋಗುತ್ತಿರಲಿಲ್ಲ. ಮದ್ಯ ಸೇವಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದ. ಕುಡಿತಕ್ಕೆ ಹಣ ಹೊಂದಿಸಲು ಬೈಕ್ ಕಳವು ಮಾಡುವ ದಂಧೆಗೆ ಇಳಿದಿದ್ದ. ಆರೋಪಿಗಳು ಮನೆ ಹಾಗೂ ಬಾರ್ ಮತ್ತು ರೆಸ್ಟೋರೆಂಟ್ಗಳ ಬಳಿ ನಿಲ್ಲಿಸಿದ್ದ ಬೈಕ್ಗಳಿಗೆ ನಕಲಿ ಕೀ ಬಳಸಿ ಕಳವು ಮಾಡುತ್ತಿದ್ದ. ಕದ್ದ ಬೈಕ್ಗಳನ್ನು ಕಡಿಮೆ ಮೊತ್ತಕ್ಕೆ ಮಾರಾಟ ಮಾಡುತ್ತಿದ್ದ. ತಮ್ಮ ತಾಯಿಗೆ ಆರೋಗ್ಯ ಸರಿಯಿಲ್ಲ. ತುರ್ತು ಹಣ ಬೇಕಿದೆ, ಬೈಕ್ನ ದಾಖಲೆಗಳನ್ನು ಬಳಿಕ ತಂದು ಕೊಡುವುದಾಗಿ ಹೇಳಿ ಎರಡರಿಂದ ಮೂರು ಸಾವಿರದಷ್ಟು ಹಣ ಪಡೆದು ಪರಾರಿಯಾಗುತ್ತಿದ್ದ. ಕಡಿಮೆ ಮೊತ್ತಕ್ಕೆ ಬೈಕ್ ಸಿಗುತ್ತಿದ್ದರಿಂದ ಸಾರ್ವಜನಿಕರು ಕೂಡ ಆರೋಪಿ ಸಂಪರ್ಕಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಹಣ ಖಾಲಿಯಾದ ಬಳಿಕ ಪುನಃ ಕಳವು ಕೃತ್ಯಕ್ಕೆ ಇಳಿಯುತ್ತಿದ್ದರು. ಆರೋಪಿ ರಂಗಸ್ವಾಮಿ ಒಂದು ವರ್ಷದ ಹಿಂದೆ ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬಂದ ಬಳಿಕವು ಕಳವು ಕೃತ್ಯ ಮುಂದುವರೆಸಿದ್ದ ಎಂದು ಪೊಲೀಸರು ತಿಳಿಸಿದರು.