'ಉಪಚುನಾವಣೆ ನಂತರ ಬಿಜೆಪಿ ಸರ್ಕಾರ ಪತನ, ಕಾಂಗ್ರೆಸ್ ಅಧಿಕಾರಕ್ಕೆ'
ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಪತನ| ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ| ಮಾಜಿ ಸಿಎಂ ವಿಶ್ವಾಸ
ಕಲಬುರಗಿ[ಸೆ.30]: ರಾಜ್ಯದಲ್ಲಿ ನಡೆಯುವ ಉಪ ಚುನಾವಣೆಯ ನಂತರ ಬಿಜೆಪಿ ಸರ್ಕಾರ ಪತನವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದಿದ್ದಾರೆ.
ಈ ಕುರಿತು ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಡಿ.5ರಂದು 15 ಕ್ಷೇತ್ರಗಳಲ್ಲಿ ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿಯವರು 15 ಕ್ಷೇತ್ರದಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುತ್ತೇವೆಂಬ ಹೇಳಿಕೆ ನೀಡಿದ್ದಾರೆ. ಅವರೇ ಮೈತ್ರಿಯ ಬಗ್ಗೆ ಆಸಕ್ತಿಯಿಲ್ಲದ ಮೇಲೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯಿಲ್ಲ, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಏಕಾಂಗಿಯಾಗಿಯೇ ಸ್ಪರ್ಧಿಸಿ ಹೆಚ್ಚು ಸ್ಥಾನ ಗೆಲ್ಲಲಿದೆ ಎಂದರು.
15 ಕ್ಷೇತ್ರಗಳಿಗೆ ಉಪ ಚುನಾವಣೆ: ಪೆಂಡಿಂಗ್ ಇದ್ದ ಮತ ಎಣಿಕೆ ದಿನಾಂಕ ಪ್ರಕಟ
ಬಿಜೆಪಿ ಸರ್ಕಾರದ ಅಣತಿಯಂತೆ ಚುನಾವಣಾ ಆಯೋಗ ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿದ ಸಿದ್ದರಾಮಯ್ಯ ರಾಜ್ಯದ ಸ್ಪೀಕರ್ 17 ಜನರನ್ನು ಅನರ್ಹಗೊಳಿಸಿದ್ದಾರೆ, ಆದರೆ ಚುನಾವಣೆ ಆಯೋಗ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ನಿಲ್ಲಲು ಅನುಕೂಲವಾಗುವಂತೆ ಮೊದಲು ಚುನಾವಣೆ ದಿನಾಂಕ ಘೋಷಣೆ ಮಾಡಿ ಸುಪ್ರೀಂಕೋರ್ಟನಲ್ಲಿ ಹೋಗಿ ಅನರ್ಹ ಶಾಸಕರ ಸ್ಪರ್ದೆಗೆ ಯಾವುದೇ ಅಡೆತಡೆಯಿಲ್ಲ ಎಂದು ಹೇಳಿಕೆ ನೀಡಿ ಅನರ್ಹರಿಗೆ ಅನುಕೂಲವಾಗುವಂತೆ ಮಾಡಿರುವುದೇ ಇದಕ್ಕೆ ಸಾಕ್ಷಿ. ನನ್ನ 40 ವರ್ಷದ ರಾಜಕೀಯ ಜೀವನದಲ್ಲಿ ಒಂದು ತಿಂಗಳಿಗಿಂತ ಮುಂಚೆ ದಿನಾಂಕ ಪ್ರಕಟಿಸಿರುವುದು ನಾನೂ ಎಂದು ನೋಡಿಲ್ಲ ಎಂದರು.
ತಾವು ಮುನಿಯಪ್ಪ ದೊಸ್ತಿಗಳು, ವೈರಿಗಳಲ್ಲ, ನಾನು ಮುನಿಯಪ್ಪ ಕುರಿತು ಏಕವಚನದಲ್ಲಿ ಮಾತನಾಡಿಲ್ಲ, ಅವರೂ ಕೂಡ ನನ್ನ ಬಗ್ಗೆ ಏಕವಚನದಲ್ಲಿ ಮಾತನಾಡಿಲ್ಲ, ರಾಜಕೀಯ ಎಂದ ಮೇಲೆ ಎಲ್ಲರ ನಡುವೆ ಬಿನ್ನಾಭಿಪ್ರಾಯಗಳಿರುತ್ತವೆ, ಅಂದ ಮಾತ್ರಕ್ಕೆ ವೈರಿಗಳಾಗಲು ಸಾಧ್ಯವಿಲ್ಲ. ಕಾಂಗ್ರೆಸ್ನಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗ ಕಾಂಗ್ರೆಸ್ಸಿಗರು ಎಂಬ ಜಟಾಪಟಿಯೇ ಇಲ್ಲ, ಇವೆಲ್ಲಾ ಉಹೋಪೋಹ. ಸಿದ್ದರಾಮಯ್ಯನವರನ್ನು ಮೂಲೆಗುಂಪು ಮಾಡುತ್ತಿದ್ದಾರೆಂಬುದು ಸುಳ್ಳು. ಯಾರಿಂದ ಯಾರನ್ನೂ ಸೈಡ್ ಮಾಡಲು ಸಾಧ್ಯವಿಲ್ಲ ಎಂದರು.
ಹುಣಸೂರಿನಿಂದ ನಾನೇ ಬಿಜೆಪಿ ಅಭ್ಯರ್ಥಿ!: ಎಚ್. ವಿಶ್ವನಾಥ್
ರಾಜ್ಯದಲ್ಲಿ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅತ್ಯಂತ ಬೀಕರ ಪ್ರವಾಹ ಬಂದಿದೆ, ಇಡೀ ರಾಜ್ಯದಲ್ಲಿ ಸಾವಿರಾರು ಕೋಟಿ ನಷ್ಟವಾಗಿದೆ, ಪ್ರವಾಹ ಸಂತ್ರಸ್ಥರು ತೀವ್ರ ಸಂಕಷ್ಟದಲ್ಲಿದ್ದಾರೆ. ನೆರವಿನ ಹಸ್ತ ನೀಡಬೇಕಾದ ರಾಜ್ಯಸರಕಾರ ಸಂಪೂರ್ಣ ವಿಫಲವಾಗಿದೆ, ಪ್ರವಾಹ ಬಂದು 50 ದಿನಗಳಾದರೂ ಇದುವರೆಗೆ ಒಂದು ನಯಾ ಪೈಸೆ ಪರಿಹಾರ ನೀಡಿಲ್ಲ, ಬಿಎಸ್ವೈ ಇಂದು ನಾಳೆ, ನಾಡಿದ್ದು ಎಂದು ಬರೀ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಇನ್ನೂ ರಾಜ್ಯದಿಂದ ಆಯ್ಕೆಯಾಗಿರುವ 25 ಜನ ಸಂಸದರು, ಶಾಸಕರು ಕೇಂದ್ರಸರಕಾರದ ಮೇಲೆ ಒತ್ತಡ ಹೇರುವಲ್ಲಿ ವಿಫಲರಾಗಿದ್ದಾರೆ ಎಂದ ಅವರು, ಆದಷ್ಟುಬೇಗ ಕೇಂದ್ರಸರಕಾರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.