ಮೋದಿ ಮತಗಳಿಕೆ ಹೆಚ್ಚಿದ, ಕಾಂಗ್ರೆಸ್‌ ಮತ ಕುಗ್ಗಿದ್ದಕ್ಕೆ ಕಾರಣ ಹುಡುಕಿ: ತರೂರ್‌| ಕೇರಳ ಕಾಂಗ್ರೆಸ್‌ ನೀಡಿದ ನೋಟಿಸ್‌ಗೆ ತರೂರ್‌ ಉತ್ತರ

ನವದೆಹಲಿ[ಆ.29]: ಕಳೆದ ಐದು ವರ್ಷಗಳಲ್ಲಿ ಬಿಜೆಪಿ ತನ್ನ ಮತ ಗಳಿಕೆ ಪ್ರಮಾಣವನ್ನು ಶೇ.31ರಿಂದ ಶೇ.37ಕ್ಕೆ ಹಿಗ್ಗಿಸಿಕೊಂಡರೆ, 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಕೇವಲ ಶೇ.20ಕ್ಕಿಂತ ಕಡಿಮೆ ಮತಗಳಿಕೆಗೆ ಸೀಮಿತವಾಯಿತು ಎಂಬ ಬಗ್ಗೆ ಚಿಂತಿಸಬೇಕು ಎಂದು ಪಕ್ಷಕ್ಕೆ ಸಂಸದ ಶಶಿ ತರೂರ್‌ ಒತ್ತಾಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೋದಿ ಜನರ ಪ್ರಧಾನಿ: ಬದಲಾಗ್ತಿದೆ ಕೈ ನಾಯಕರ ಧ್ವನಿ!

ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕೆ ಮಾಡುತ್ತಲೇ ಇರುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್‌ ಸಂಸದ ಜೈರಾಮ್‌ ರಮೇಶ್‌ ಅವರ ಹೇಳಿಕೆ ಸಮರ್ಥಿಸಿದ ಬಗ್ಗೆ ಸ್ಪಷ್ಟನೆ ನೀಡುವಂತೆ ಕೇರಳ ಕಾಂಗ್ರೆಸ್‌ ಘಟಕ ತರೂರ್‌ಗೆ ನೋಟಿಸ್‌ ನೀಡಿತ್ತು.

ಇದಕ್ಕೆ ಕೇರಳ ಕಾಂಗ್ರೆಸ್‌ ಅಧ್ಯಕ್ಷ ಮುಲ್ಲಪಳ್ಳಿ ರಾಮಚಂದ್ರನ್‌ ಅವರಿಗೆ ಉತ್ತರ ರೂಪದ ಪತ್ರ ಬರೆದ ತರೂರ್‌, ‘ಮೋದಿ ಕೆಲವೊಂದು ಒಳ್ಳೇ ಕೆಲಸ ಮಾಡಿದ್ದಾರೆ. ಆದರೆ, ಅವರು 2014ರಲ್ಲಿದ್ದ ತಮ್ಮ ಮತ ಗಳಿಕೆ ಪ್ರಮಾಣವನ್ನು ಶೇ.31ರಿಂದ 2019ರಲ್ಲಿ 37ಕ್ಕೆ ಹಿಗ್ಗಿಸಿಕೊಂಡಿದ್ದಾರೆ. ಆದರೆ, ಕೇರಳ ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯಲ್ಲಿ ಕೇವಲ 19ರಷ್ಟುಮತಗಳಿಕೆಯಷ್ಟೇ ಪಡೆದಿದೆ. ಕಾಂಗ್ರೆಸ್ಸಿಗರಾಗಿ ನಾವು ಯಾಕೆ ಹೀಗಾಯಿತು ಎಂಬುದನ್ನು ಅರ್ಥೈಸಿಕೊಳ್ಳಬೇಕು’ ಎಂದು ಪ್ರತಿಪಾದಿಸಿದ್ದಾರೆ.

ಮೋದಿ ಹೊಗಳಿದ ಜೈರಾಂಗೆ ಸಿಂಘ್ವಿ, ತರೂರ್‌ ಬೆಂಬಲ!

ಕಾಂಗ್ರೆಸ್‌ ಏನು ಮಾಡಬೇಕು?:

ಮೋದಿ ಶೌಚಾಲಯಗಳನ್ನು ನಿರ್ಮಿಸಿದ್ದಾರೆ. ಆದರೆ, ಇದರಲ್ಲಿ ಶೇ. 60ರಷ್ಟುಪ್ರಮಾಣದ ಶೌಚಾಲಯಗಳಲ್ಲಿ ನೀರೇ ಇರುವುದಿಲ್ಲ. ಹೌದು, ಅವರು ಗ್ರಾಮೀಣ ಬಡ ಮಹಿಳೆಯರಿಗೆ ಅಡುಗೆ ಅನಿಲ ಸಿಲಿಂಡರ್‌ ಕೊಟ್ಟಿದ್ದಾರೆ. ಆದರೆ, ಇದರಲ್ಲಿ ಶೇ.92ರಷ್ಟುಮಂದಿಗೆ ಮತ್ತೆ ಸಿಲಿಂಡರ್‌ ಭರ್ತಿ ಮಾಡಿಕೊಳ್ಳುವುದು ದುಸ್ತರವಾಗಿದೆ ಎಂಬಂಥ ವಿಚಾರಗಳನ್ನು ನಾವು ಮುನ್ನೆಲೆಗೆ ತರಬೇಕು. ಆದರೆ, ಮೋದಿ ಏನೂ ಮಾಡಿಲ್ಲ ಎಂದು ದೂಷಿಸುತ್ತಾ ಹೋದರೆ, ಅವರಿಗೆ ಮತ ಚಲಾಯಿಸಿದ ಮತದಾರರು ಮೂರ್ಖರು ಎಂದು ನಾವೇ ಹೇಳಿದಂತಾಗಲಿದೆ. ಇದರಿಂದ ನಮಗೆ ಬರುವ ಮತಗಳೂ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.