ರಾಜಸ್ಥಾನ ಚುನಾವಣೆ ಪ್ರಚಾರಕ್ಕೆ ಪ್ರಧಾನಿ ಮೋದಿ ಚಾಲನೆ! ಕಾಂಗ್ರೆಸ್ನ ವೋಟ್ ಬ್ಯಾಂಕ್ ರಾಜಕಾರಣ ದೇಶಕ್ಕೆ ಮಾರಕ! ಕುಟುಂಬ ರಾಜಕಾರಣವನ್ನು ಧಿಕ್ಕರಿಸುವಂತೆ ಕರೆ ನೀಡಿದ ಪ್ರಧಾನಿ! ದೇಶದ ಅಭಿವೃದ್ಧಿಗೆ ಬಿಜೆಪಿ ಕಂಕಣಬದ್ಧ ಎಂದ ಮೋದಿ! ದೇಶದ ಜನರೇ ನಮ್ಮ ಹೈಕಮಾಂಡ್ ಎಂದ ಪ್ರಧಾನಿ
ಜೈಪುರ(ಅ.6): ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿದ್ದು, ಅಧಿಕಾರಕ್ಕಾಗಿ ಸಮಾಜ ಒಡೆಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.
ಇಂದು ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಮುನ್ನ ಅಜ್ಮೇರ್ನಲ್ಲಿ ಬಿಜೆಪಿ ಪ್ರಚಾರಾಭಿಯಾನಕ್ಕೆ ಚಾಲನೆ ನೀಡಿದ ಪ್ರಧಾನಿ ಮೋದಿ, ದೇಶದ ಜನರು ತಮಗೆ ಅಭಿವೃದ್ಧಿ ರಾಜಕಾರಣ ಬೇಕೋ ವೋಟ್ ಬ್ಯಾಂಕ್ ರಾಜಕಾರಣ ಬೇಕೋ ಎಂಬುದನ್ನು ತೀರ್ಮಾನಿಸಬೇಕಿದೆ ಎಂದರು.
ಕಾಂಗ್ರೆಸ್ ಕಳೆದ 60 ವರ್ಷಗಳಿಂದ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಇದರಿಂದ ದೇಶದ ಅಭಿವವೃದ್ಧಿ ಸಾಧ್ಯವಿಲ್ಲ. ಆದರೆ ಬಿಜೆಪಿ ಜನರ ಒಳತಿಗಾಗಿ, ದೇಶದ ಆರ್ಥಿಕಾಭಿವೃದ್ಧಿಯನ್ನು ಸಾಧಿಸುವುದಕ್ಕೆ ಕಟಿಬದ್ಧವಾಗಿದ್ದು ಆ ದಿಶೆಯಲ್ಲಿ ಹೆಜ್ಜೆ ಇರಿಸಿದೆ ಎಂದು ಪ್ರಧಾನಿ ಹೇಳಿದರು.
ಕಾಂಗ್ರೆಸ್ ಪಕ್ಷ ವಂಶಾಡಳಿತದ ಪಕ್ಷವಾಗಿ ಮುಂದುವರಿಯುತ್ತಿದೆ ಎಂದು ಟೀಕಿಸಿದ ಮೋದಿ, ರಾಜಸ್ಥಾನದ ಮತ್ತು ದೇಶದ ಜನರು ನಮ್ಮ ಹೈಕಮಾಂಡ್ ಆಗಿದ್ದಾರೆ. ಕಾಂಗ್ರೆಸ್ ನ ಹೈಕಮಾಂಡ್ ಒಂದು ಕುಟುಂಬವಾಗಿದೆ ಎಂದು ವಾಗ್ದಾಳಿ ನಡೆಸಿದರು.
