ಉಲ್ಟಾ ಹೊಡೆದ ರಾಜ್ಯ ಕಾಂಗ್ರೆಸ್
ರಾಜ್ಯ ರಾಜಕೀಯದಲ್ಲಿ ಫೋನ್ ಟ್ಯಾಪಿಂಗ್ ಪ್ರಕರಣ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇದೇ ವೇಳೆ ಕಾಂಗ್ರೆಸ್ ಹೇಳಿಕೆ ಬದಲಾಯಿಸಿ ಉಲ್ಟಾ ಹೊಡೆದಿದೆ. ಏನದು ಇಲ್ಲಿದೆ ಹೆಚ್ಚಿನ ಮಾಹಿತಿ.
ಬೆಂಗಳೂರು [ಆ.19]: ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನಡೆಗೆ ವಿರೋಧ ವ್ಯಕ್ತಪಡಿಸಿ ಟ್ವೀಟ್ ಮಾಡಿದ್ದ ರಾಜ್ಯ ಕಾಂಗ್ರೆಸ್ ಬಳಿಕ ಉಲ್ಟಾಹೊಡೆದಿದೆ.
"
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ದೂರವಾಣಿ ಕದ್ದಾಲಿಕೆಯನ್ನು ಸಿಬಿಐ ತನಿಖೆಗೆ ವಹಿಸಿರುವುದಾಗಿ ಘೋಷಿಸಿದ ಬೆನ್ನಲ್ಲೇ ಟ್ವೀಟ್ ಮಾಡಿದ ರಾಜ್ಯ ಕಾಂಗ್ರೆಸ್, ‘ಬಿ.ಎಸ್. ಯಡಿಯೂರಪ್ಪ ಅವರೇ, ‘ತಾನು ಕಳ್ಳ, ಪರರ ನಂಬ ಎಂಬಂತಿದೆ ನಿಮ್ಮ ವರ್ತನೆ. ದೂರವಾಣಿ ಕದ್ದಾಲಿಕೆ ಎಂಬುದೊಂದು ಸುಳ್ಳು, ಸಿಬಿಐ ತನಿಖೆ ದ್ವೇಷ ರಾಜಕಾರಣದ ಸಂಚು’ ಎಂದು ಆರೋಪಿಸಿತ್ತು.
ಅಲ್ಲದೆ, ಆಪರೇಷನ್ ಕಮಲ ಮುಖೇನ ಸರ್ಕಾರ ಬೀಳಿಸಿ, ಹಿಂಬಾಗಿಲಿನಿಂದ ಅನೈತಿಕ ಮುಖ್ಯಮಂತ್ರಿ ಆಗಿರುವ ನೀವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದೀರಿ. ನರೇಂದ್ರ ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿತು.
ಟ್ವೀಟ್ ಅಳಿಸಿದ ಕಾಂಗ್ರೆಸ್:
ಇದೇ ವೇಳೆ ಸಿಬಿಐ ತನಿಖೆಗೆ ವಹಿಸಿರುವ ಮುಖ್ಯಮಂತ್ರಿಗಳ ನಿರ್ಧಾರ ಸ್ವಾಗತಿಸಿ ಸಿದ್ದರಾಮಯ್ಯ ಟ್ವೀಟ್ ಮಾಡಿದರು. ಇದರ ಬೆನ್ನಲ್ಲೇ ಸಿಬಿಐ ತನಿಖೆಗೆ ವಿರೋಧಿಸಿದ್ದ ಟ್ವೀಟನ್ನು ರಾಜ್ಯ ಕಾಂಗ್ರೆಸ್ ತನ್ನ ಅಧಿಕೃತ ಖಾತೆಯಿಂದ ಡಿಲೀಟ್ ಮಾಡಿದೆ.
ಫೋನ್ ಟ್ಯಾಪಿಂಗ್ ಪ್ರಕರಣದ ಬಗೆಗಿನ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಷ್ಟೇ ಅಲ್ಲದೆ, ದೂರವಾಣಿ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂಬ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ಸರಣಿ ಟ್ವೀಟನ್ನು ರೀಟ್ವೀಟ್ ಮಾಡಿದೆ.