ಸಿಖ್ ದಂಗೆ : ಕಾಂಗ್ರೆಸ್ ಮುಖಂಡನಿಗೆ ಜೀವಾವಧಿ ಶಿಕ್ಷೆ
ಕಾಂಗ್ರೆಸ್ ಮುಖಂಡಗೆ ದಿಲ್ಲಿ ಹೈ ಕೋರ್ಟ್ ಜೀವಾವಧಿ ಶಿಕ್ಷೆ ಪ್ರಕಟ ಮಾಡಿದೆ. 1984ರ ಸಿಖ್ ದಂಗೆಗೆ ಸಂಬಂಧಿಸಿದಂತೆ ಕೋರ್ಟ್ ಮಹತ್ವದ ತೀರ್ಪು ಪ್ರಕಟ ಮಾಡಿದೆ.
ದೆಹಲಿ : 1984ರ ಸಿಖ್ ವಿರೋಧಿ ದಂಗೆ ಪ್ರಕರಣಕ್ಕೆ ಸಂಬಂಧಿಸಿದಂತೆ, 34 ವರ್ಷಗಳ ನಂತರ ದೆಹಲಿ ಹೈ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕಾಂಗ್ರೆಸ್ ಮುಖಂಡ 73 ವರ್ಷದ ಸಜ್ಜನ್ ಕುಮಾರ್ ದೋಷಿ ಎಂದು ತೀರ್ಪು ನೀಡಿ, ಜೀವಾವಧಿ ಶಿಕ್ಷೆ ವಿಧಿಸಿದೆ.
1984ರಲ್ಲಿ ದಿಲ್ಲಿಯ ಕಂಟೋನ್ಮೆಂಟ್ ಪ್ರದೇಶದಲ್ಲಿ ಗಲಭೆ ನಡೆದಿದ್ದು, ಈ ವೇಳೆ ಐವರ ಕೊಲೆ ನಡೆದಿತ್ತು. ಈ ಪ್ರಕರಣದ ಸಂಬಂಧ ವಿಚಾರಣೆ ನಡೆಸಿದ ನ್ಯಾ. ಎಸ್ ಮುರುಳಿಧರ್ ಹಾಗೂ ನ್ಯಾ. ವಿನೋದ್ ಗೋಯಲ್ ಅವರಿದ್ದ ಪೀಠ ತೀರ್ಪು ಪ್ರಕಟಿಸಿದೆ. ಅಲ್ಲದೇ ಡಿಸೆಂಬರ್ 31ರ ಒಳಗೆ ಸಜ್ಜನ್ ಕುಮಾರ್ ಶರಣಾಗಬೇಕು ಎಂದು ಕೋರ್ಟ್ ಆದೇಶಿಸಿದೆ.
ಇಂದಿರಾ ಗಾಂಧಿ ಹತ್ಯೆಗೆ ಪ್ರತಿಕಾರವಾಗಿ ರಾಜಕೀಯ ಪ್ರೇರಿತ ಹಿಂಸಾಚಾರ ನಡೆದಿತ್ತು. ಈ ಹಿಂದೆ 2013ರಲ್ಲಿ ಕೆಳಹಂತದ ನ್ಯಾಯಾಲಯ ಸಜ್ಜನ್ ಕುಮಾರ್ ದೋಷಿ ಎಂದು ನೀಡಿದ್ದ ತೀರ್ಪನ್ನೇ ಎತ್ತಿ ಹಿಡಿದಿರುವ ದಿಲ್ಲಿ, ಕೋರ್ಟ್ ಇದೀಗ ಶಿಕ್ಷೆ ಪ್ರಮಾಣ ಪ್ರಕಟಿಸಿದೆ.
ಇನ್ನು ಸಜ್ಜನ್ ಕುಮಾರ್ ಜೊತೆಗೆ ಉಳಿದ ಅಪರಾಧಿಗಳಿಗೆ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡಿದ ಹಿನ್ನೆಲೆಯಲ್ಲಿ 1 ಲಕ್ಷ ದಂಡ ವಿಧಿಸಿದೆ. ಅಲ್ಲದೇ ಸಜ್ಜನ್ ಕುಮಾರ್ ಅವರಿಗೆ 5 ಲಕ್ಷ ರು. ದಂಡ ವಿಧಿಸಿದೆ.