‘ಮಂಡ್ಯದಲ್ಲಿ ನಿಖಿಲ್ ಸೋಲಿಗೆ ಕುಮಾರಸ್ವಾಮಿ ಕಾರಣ’
ಜೆಡಿಎಸ್ ಭದ್ರಕೋಟೆಯಾಗಿದ್ದ ಮಂಡ್ಯದಲ್ಲಿಯೇ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋತರು. ಇದಕ್ಕೆ ಕುಮಾರಸ್ವಾಮಿ ಕಾರಣ ಎಂದು ಕೈ ನಾಯಕ ಹೇಳಿದ್ದಾರೆ.
ಮಂಡ್ಯ : ಮಂಡ್ಯ ಜನ ಪ್ರಬುದ್ಧರಾಗಿದ್ದು, ಪ್ರೀತಿ ನೀಡಿದವರಿಗೆ ಅದೇ ರೀತಿಯ ಪ್ರೀತಿಯನ್ನು ವಾಪಸ್ ನೀಡುತ್ತಾರೆ ಎಂದು ಕೈ ನಾಯಕ ಎನ್.ಚೆಲುವನಾರಾಯಣ ಸ್ವಾಮಿ ಹೇಳಿದ್ದಾರೆ.
ಮಂಡ್ಯದಲ್ಲಿ ಯಾವ ಸಂದರ್ಭದಲ್ಲಿಯೂ ಕೂಡ ಗಾಸಿಪ್ ಗೆ ಅವಕಾಶ ನೀಡುವುದಿಲ್ಲ. ಕುಮಾರಸ್ವಾಮಿ ಅವರನ್ನ ಸಿಎಂ ಮಾಡಲು ಜನ ಅಂದು ನಿರ್ಧರಿಸಿದ್ದರು. ಹೀಗಾಗಿ ನಮ್ಮನ್ನ ತಿರಸ್ಕರಿಸಿ ಅವರಿಗೆ ವೋಟ್ ಕೊಟ್ಟಿದ್ದರು. ಅಂದು ಇಷ್ಟಪಟ್ಟಿದ್ದ ಜನ ಇಂದು ತಿರಸ್ಕರಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಪರಾಭವದ ಬಗ್ಗೆ ಪರೋಕ್ಷ ಹೇಳಿಕೆ ನೀಡಿದ್ದಾರೆ.
ಜನರು ಮಂಡ್ಯದಲ್ಲಿ ಕೊಟ್ಟ ಪ್ರೀತಿಯನ್ನು ಉಳಿಸಿಕೊಳ್ಳಲಿಲ್ಲ. ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿಲ್ಲ. ಜನರ ನಿರೀಕ್ಷೆಯಂತೆ ಕೆಲಸ ಮಾಡಿದ್ದರೆ ಜೆಡಿಎಸ್ ಗೆ ಸೋಲು ಆಗುತ್ತಿರಲಿಲ್ಲ ಎಂದು ಚೆಲುವರಾಯಸ್ವಾಮಿ ಹೇಳಿದರು.
ಇದೇ ವೇಳೆ ಸಚಿವ ಪುಟ್ಟರಾಜು ವಿರುದ್ಧ ವಾಗ್ದಾಳಿ ನಡೆಸಿದ್ದು, ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾಗುವ ದಿನವಾದ ಮೇ 23 ಕ್ಕೆ ಉತ್ತರ ಕೊಡುತ್ತೇನೆ ಎಂದಿದ್ದರು. ಆದರೆ ಉತ್ತರ ಕೊಟ್ಟದ್ದಾರಾ ಎಂದು ಪ್ರಶ್ನಿಸಿದರು.
ಇದೇ ವೇಳೆ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿ ಜಯಗಳಿಸಿದ ಸುಮಲತಾ ಪರ ಬ್ಯಾಟ್ ಬೀಸಿ ಚೆಲುವನಾರಾಯಣ ಸ್ವಾಮಿ ರೈತರ ಬೆಳೆಗಳಿಗೆ ಸುಮಲತಾ ನೀರು ಬಿಡಿಸಲಿ ಎಂಬ ಶಾಸಕ ರವೀಂದ್ರ ಶ್ರೀಕಂಠಯ್ಯ ಹೇಳಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸುಮಲತಾ ಗೆದ್ದು ನಾಲ್ಕು ದಿನ ಆಗಿದೆ. ಆದರೆ ರಾಜ್ಯದಲ್ಲಿ ಇವರದ್ದೇ ಸರ್ಕಾರ ಇದ್ದು, ಕೆಲಸ ಮಾಡಲಿ. ಚುನಾವಣೆಯಲ್ಲಿ ಸುಮಲತಾ ನಡವಳಿಕೆ ಮೂಲಕ ಕೆಲಸ ಮಾಡುವ ಸಾಮರ್ಥ್ಯ ಇದೆ ಎಂದು ತೋರಿಸಿದ್ದಾರೆ. ನನಗೂ ಆ ನಂಬಿಕೆಯಿದೆ ಎಂದರು.