ಶಿವಮೊಗ್ಗದಲ್ಲಿ ಟಿಕೆಟ್ ಕೊಡ್ತೀವಿ ಅಂದ್ರೂ ನಿಲ್ಲೋಕೆ ಅಭ್ಯರ್ಥಿಗಳೇ ಇಲ್ಲ!
ಶಿವಮೊಗ್ಗದಲ್ಲಿ ಕಾಂಗ್ರೆಸ್ ಟಿಕೆಟ್ ಯಾರಿಗೂ ಬೇಡ | ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳು ಹಿಂದೇಟು | ಸುಂದರೇಶ್ಗೆ ಟಿಕೆಟ್ ಕೊಡುವ ಸಾಧ್ಯತೆ
ಶಿವಮೊಗ್ಗ (ಅ. 11): ಖರ್ಚಿನ ಬಾಬ್ತು ಆಗಿರುವ ಲೋಕಸಭಾ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುತ್ತೇನೆ ಎಂದರೂ ಸ್ಪರ್ಧೆಗೆ ಮುಂದಾಗುವವರೇ ಇಲ್ಲವಾಗಿರುವುದು ಕಾಂಗ್ರೆಸ್ಗೆ ತಲೆ ನೋವಾಗಿದೆ.
ಕಾಂಗ್ರೆಸ್ ನಾಯಕರು ಈ ಲೋಕಸಭಾ ಉಪ ಚುನಾವಣೆಗೆ ಅಭ್ಯರ್ಥಿ ಆಯ್ಕೆಗೆ ಜಿಲ್ಲಾ ನಾಯಕರೊಂದಿಗೆ ಚರ್ಚೆ ನಡೆಸಿದಾಗ ಗೆಲ್ಲುವ ಅಥವಾ ಉತ್ತಮ ಸ್ಪರ್ಧೆ ನೀಡುವ ಸಾಮರ್ಥ್ಯವಿರುವ ಹಲವು ಹೆಸರುಗಳು ಪ್ರಸ್ತಾಪವಾಯಿತು.
ಮುಖ್ಯವಾಗಿ ಕಿಮ್ಮನೆ ರತ್ನಾಕರ್, ಕಾಗೋಡು ತಿಮ್ಮಪ್ಪ, ಸುಂದರೇಶ್ ಹಾಗೂ ಬೇಳೂರು ಗೋಪಾಲಕೃಷ್ಣ ಅವರ ಹೆಸರು ಪ್ರಸ್ತಾಪವಾಗಿತ್ತು. ಅದರಂತೆ ಕಾಂಗ್ರೆಸ್ ನಾಯಕತ್ವವು ಈ ನಾಲ್ಕು ಮಂದಿಯನ್ನು ಪ್ರತ್ಯೇಕವಾಗಿ ಕರೆದು ಚರ್ಚೆ ನಡೆಸಿದ್ದು, ಸ್ಪರ್ಧೆಗೆ ಮುಂದಾಗುವಂತೆ ತಿಳಿಸಿದೆ.
ಆದರೆ, ಕಡಿಮೆಯೆಂದರೂ 10 ಕೋಟಿ ರು. ವೆಚ್ಚವಾಗುವ ಹಿನ್ನೆಲೆಯಲ್ಲಿ ಬೇಳೂರು ಗೋಪಾಲಕೃಷ್ಣ, ಕಿಮ್ಮನೆ ರತ್ನಾಕರ ಹಾಗೂ ಕಾಗೋಡು ತಿಮ್ಮಪ್ಪ ಅವರು ಸ್ಪರ್ಧೆಗೆ ಹಿಂಜರಿದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಸುಂದರೇಶ್ ಅವರು ಮಾತ್ರ ಸ್ಪರ್ಧೆಗೆ ಆಸಕ್ತಿ ತೋರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸುಂದರೇಶ್ ಅವರಿಗೆ ಪಕ್ಷ ಟಿಕೆಟ್ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ