ರಾಜ್ಯದ ಉಪ ಚುನಾವಣೆ:ಕಾಂಗ್ರೆಸ್'ಗೆ ಮುಖಭಂಗ, ಜೆಡಿಎಸ್ ಜಯಭೇರಿ
ಕೋಲಾರ ನಗರಸಭೆ 21ನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಮೋಹನ್ ಬಾಬು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಾಸಕ ವರ್ತೂರು ಪ್ರಕಾಶ್ ಗೆ ತೀವ್ರ ಮುಖಭಂಗವಾಗಿದೆ.
ಬೆಂಗಳೂರು(ಜು.05): 2018ರ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿಯಿರುವಾಗ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಪ್ರತಿಷ್ಠೆಯ ಚುನಾವಣೆಯಾಗಿತ್ತು. ಈ ಬೆನ್ನಲ್ಲೇ ಇಂದು ವಿವಿಧೆಡೆ ಬೈ ಎಲೆಕ್ಷನ್ ರಿಸಲ್ಟ್ ಹೊರಬಿದ್ದಿದ್ದು ಕಾಂಗ್ರೆಸ್ ಅಭ್ಯರ್ಥಿಗಳು ಪರಾಭವಗೊಂಡಿದ್ದಾರೆ. ಇದ್ರಿಂದಾಗಿ ಕಾಂಗ್ರೆಸ್ ನಾಯಕರಿಗೆ ಭಾರೀ ಮುಖಭಂಗವಾಗಿದೆ.
ಮದ್ದೂರಿನ ಕೊಪ್ಪ ಜಿಲ್ಲಾ ಪಂಚಾಯತ್ ಕ್ಷೇತ್ರ ಮತ್ತು ನಗರಸಭೆ ವಾರ್ಡ್ ನಂ-28ಕ್ಕೆ ಉಪ ಚುನಾವಣೆ ನಡೆದಿತ್ತು. ಎರಡರಲ್ಲೂ ಕೈ ಅಭ್ಯರ್ಥಿ ಗಳು ಪರಾಭವಗೊಂಡಿದ್ದಾರೆ. ಈ ಸೋಲಿನಿಂದ ಮಾಜಿ ಸಚಿವ ಅಂಬರೀಶ್'ಗೆ ತೀವ್ರ ಮುಖಭಂಗವಾಗಿದ್ದು ಜಿಲ್ಲೆಯಲ್ಲಿ ಅಂಬಿಯ ವರ್ಚಸ್ಸು ಕುಸಿದಿದೆ ಅನ್ನೋ ಮಾತುಗಳು ಕೇಳಿಬರುತ್ತಿವೆ.
ಮೈಸೂರು ಮಹಾನಗರ ಪಾಲಿಕೆ ವಾರ್ಡ್ ನಂಬರ್ 32 ರ ಬೈ ಎಲೆಕ್ಷನ್ನಲ್ಲೂ ಜೆಡಿಎಸ್ ಜಯಭೇರಿ ಬಾರಿಸಿದೆ.
ಬಾಗಲಕೋಟೆಯ ತಾಲೂಕಾ ಪಂಚಾಯತಿ ಉಪಚುನಾವಣೆಯಲ್ಲೂ ಬಿಜೆಪಿ ಅಭ್ಯರ್ಥಿಗಳದ್ದೇ ಕಲರವ. ಹುನಗುಂದ ಪಟ್ಟಣದ ಪುರಸಭೆಯ ಮೂರನೇ ವಾರ್ಡ್ನಲ್ಲಿ ಕಮಲ ಅರಳಿದೆ. ಪಟ್ಟದಕಲ್ಲು ತಾಲೂಕು ಪಂಚಾಯ ಬೈ ಎಲೆಕ್ಷನ್ನಲ್ಲೂ ಬಿಜೆಪಿಯ ಕುಮಾರ ರೋಣದ ಗೆಲುವು ಸಾಧಿಸಿದ್ದಾರೆ.
ಕೋಲಾರದಲ್ಲಿ ಜೆಡಿಎಸ್ ಜಯಭೇರಿ
ಇತ್ತ, ಕೋಲಾರ ನಗರಸಭೆ 21ನೇ ವಾರ್ಡ್ನಲ್ಲಿ ಜೆಡಿಎಸ್ ಅಭ್ಯರ್ಥಿ ಮೋಹನ್ ಬಾಬು ಭರ್ಜರಿ ಗೆಲುವು ಸಾಧಿಸಿದ್ದಾರೆ. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಪರ ಭರ್ಜರಿ ಪ್ರಚಾರ ನಡೆಸಿದ್ದ ಶಾಸಕ ವರ್ತೂರು ಪ್ರಕಾಶ್ ಗೆ ತೀವ್ರ ಮುಖಭಂಗವಾಗಿದೆ.
ಇನ್ನು ಬೀದರ್ ನಗರಸಭೆ ವಾರ್ಡ್ ನಂಬರ್ 33ರಲ್ಲಿ ಕಾಂಗ್ರೆಸ್ ಪಕ್ಷದ ಸರಸ್ವತಿ ಗೆಲವು ಸಾಧಿಸಿದ್ದಾರೆ. ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ತಾಲೂಕು ಪಂಚಾಯತ್ ಅಖಾಡದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕವಿತಾ ತಿನೇಕರ್ ಗೆದ್ದು ಬೀಗಿದ್ದಾರೆ. ಒಟ್ಟಿನಲ್ಲಿ ಇವತ್ತಿನ ಉಪಚುನಾವಣೆಯ ಫಲಿತಾಂಶ ಮುಂದಿನ ಅಸೆಂಬ್ಲಿ ಎಲೆಕ್ಷನ್ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದೆ.