ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಜೈಲಿಗಟ್ಟಲು ರಾಜ್ಯ ಸರ್ಕಾರ ಭಾರೀ ಷಡ್ಯಂತ್ರ ನಡೆಸಿಯಾ? ಎಸಿಬಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯಾ..? ಇಂತದೊಂದು ಪ್ರಶ್ನೆ ಉದ್ಭವಿಸಲು ಕಾರಣವೂ ಇದೆ. ಎಸಿಬಿ ದುರ್ಬಳಕೆ ಮಾಡ್ಕೊಂಡು ಯಡಿಯೂರಪ್ಪ ವಿರುದ್ಧ ಸುಳ್ಳು ಕೇಸ್ ದಾಖಲಿಸಲಾಗಿದೆ ಅಂತೇಳಿ ಕೆಎಎಸ್ ಅಧಿಕಾರಿಯೊಬ್ಬರು  ರಾಜ್ಯಪಾಲರು ಮತ್ತು ಮುಖ್ಯಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.

ಬೆಂಗಳೂರು(ಆ.20): ರಾಜ್ಯ ಸರ್ಕಾರದ ವಿರುದ್ಧ ತಿರುಗಿ ಬಿದ್ದಿರುವ ಬಿಜೆಪಿಯನ್ನು ಕಟ್ಟಿಹಾಕಲು ಸಿದ್ದು ಸರ್ಕಾರ ಎಸಿಬಿ ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪ ಕೇಳಿ ಬಂದಿದೆ. ಯಡಿಯೂರಪ್ಪ ಕೊರಳಿಗೆ ಭೂಹಗರಣ ಉರುಳು ಸುತ್ತಲೇಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ. ಡಿನೋಟಿಫಿಕೇಷನ್​​ ಸಂಬಂಧ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹೇಳಿಕೆ ಪಡೆದು ಬಿಎಸ್​ವೈ ವಿರುದ್ಧ ಎಫ್​ಐಆರ್​ ದಾಖಲಿಸಿದೆ. ಒತ್ತಡಕ್ಕೆ ಮಣಿಯದ ಅಧಿಕಾರಿಯನ್ನ 2ನೇ ಆರೋಪಿಯಾಗಿಸಿ ಎಫ್​ಐಆರ್​ ದಾಖಲಿಸಿದೆ. ಹೀಗಾಗಿ ಕೆಎಎಸ್​ ಅಧಿಕಾರಿ ಬಸವರಾಜೇಂದ್ರ ಎಸಿಬಿ ಅಧಿಕಾರಿಗಳ ವಿರುದ್ಧ ಸಿಡಿದೆದ್ದಿದ್ದು, ರಾಜ್ಯಪಾಲರಿಗೆ, ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ..?

ಆಗಸ್ಟ್​​ 10 ರಂದು ವಿಚಾರಣೆಗೆ ಕರೆದಿದ್ದ ಎಸಿಬಿ ಡಿವೈಎಸ್ಪಿಗಳಾದ ಬಾಲರಾಜ್​ ಹಾಗೂ ಅಂಟೋನಿ ಜಾನ್​​ ಅವರು ನನ್ನನ್ನು ವಿಚಾರಣೆ ನಡೆಸಿದ್ದಾರೆ. ನಾನು ಹೇಳೇ ಇಲ್ಲದ ವಿಷಯಗಳನ್ನೆಲ್ಲಾ ಹೇಳಿಕೆಯನ್ನಾಗಿ ಬರೆದುಕೊಂಡ ಡಿವೈಎಸ್​ಪಿ, ನನಗೆ ಬೆದರಿಕೆ ಹಾಕಿದ್ದಾರೆ. ಅಂದಿನ ಮುಖ್ಯಮಂತ್ರಿ ಬಿಎಸ್​​ ಯಡಿಯೂರಪ್ಪ ಒತ್ತಡ ಹಾಕಿ ಡಿನೋಟಿಫೈ ಮಾಡಿದ್ದಾರೆ ಎಂದು ಹೇಳಿಕೆ ದಾಖಲಿಸಿಕೊಂಡಿದ್ದಾರೆ. ತಾವು ಬರೆದುಕೊಂಡ ಹೇಳಿಕೆಗೆ ಒಪ್ಪಿಗೆ ಸೂಚಿಸುವಂತೆ ಎಸಿಬಿ ಅಧಿಕಾರಿಗಳು ಒತ್ತಡ ಹಾಕಿದ್ದಾರೆ. ಅಲ್ಲದೆ, ಬಡ್ತಿಗೆ ತೊಂದರೆಯಾಗುತ್ತೆ ಎಂದು ಬೆದರಿಸಿದ್ದಾರೆ ಎಂದು ಬಸವರಾಜೇಂದ್ರ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಎಸಿಬಿಯನ್ನು ದುರ್ಬಳಕೆ ಮಾಡಿಕೊಂಡಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಹರಿಹಾಯ್ದಿದಿದ್ದರೆ, ಸಿದ್ದರಾಮಯ್ಯ ಮಾತ್ರ ಈ ಬಗ್ಗೆಯೇ ನನಗೆ ಗೊತ್ತಿಲ್ಲ ಎಂಬ ುತ್ತರ ನೀಡಿದ್ದಾರೆ. 

ಡಿ.ಕೆ.ಶಿವಕುಮಾರ್​ ವಿಷಯ ಮುಂದಿಟ್ಟುಕೊಂಡು ಹೋರಾಟಕ್ಕಿಳಿದ ಯಡಿಯೂರಪ್ಪ ಅವರನ್ನು ಕಟ್ಟಿಹಾಕಲು ಸಿದ್ದರಾಮಯ್ಯ ಕೀಳು ಮಟ್ಟಕ್ಕೆ ಇಳಿದಿದ್ದಾರೆಂದು ಬಿಜೆಪಿ ಆರೋಪಿಸಿದೆ. ಅಲ್ಲದೆ, ತನಿಖಾ ಸಂಸ್ಥೆ ದುರುಪಯೋಗ ಮಾಡಿಕೊಂಡ ಸರ್ಕಾರ ವಿರುದ್ಧ ಹೋರಾಟ ನಡೆಸುವ ಸೂಚನೆಯನ್ನೂ ನೀಡಿದ್ದಾರೆ..