Asianet Suvarna News Asianet Suvarna News

ರವಿಶಂಕರ್‌ ಪ್ರಸಾದ್‌ ವಿರುದ್ಧ ಪ್ರತಿಭಾ ಕುಳಾಯಿ ದೂರು

ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರು ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

Complaint Against Ravishankar Prasad

ಮಂಗಳೂರು : ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ರಾಜ್ಯ ಮಹಿಳಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಮಂಗಳೂರು ಕಾರ್ಪೊರೇಟರ್‌ ಪ್ರತಿಭಾ ಕುಳಾಯಿ ಅವರು ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ.

ಭಾನುವಾರ ರವಿಶಂಕರ ಪ್ರಸಾದ್‌ ಬಿಡುಗಡೆ ಮಾಡಿರುವ ‘ಚಾರ್ಜ್ಶೀಟ್‌’ ಪುಸ್ತಕದಲ್ಲಿ ‘ಬಿಬಿಎಂಪಿಯಲ್ಲಿ ಮುಖ್ಯಮಂತ್ರಿ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಜೆಡಿಎಸ್‌ ಪಾಲಿಕೆ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಸೀರೆಯನ್ನು ಎಳೆದಾಡಿದ್ದಂತೂ ಕಾಂಗ್ರೆಸ್‌ ನೆರಳಲ್ಲಿ ದುರುಳ ಶಕ್ತಿಗಳ ಉಪಟಳ ಎಷ್ಟುಎಂಬುದಕ್ಕೆ ನಿದರ್ಶನವಾಗಿದೆ.

ಹಾಗೆಯೇ ಶಾಸಕ ಮುನಿರತ್ನ ಬೆಂಬಲಿಗರನ್ನು ಮರ್ಜಿಯಲ್ಲಿರಿಸಲು ನಿರಾಕರಿಸಿದ ಬಿಜೆಪಿ ಪಾಲಿಕೆ ಸದಸ್ಯೆ ಮಮತಾ ವಾಸುದೇವ್‌ ಅವರಿಗೆ ಪ್ರತಿನಿತ್ಯ ಕಿರುಕುಳ ನೀಡಲಾಗುತ್ತಿದೆ’ ಎಂಬ ಒಕ್ಕಣೆಯ ಬರಹವನ್ನು ಪ್ರಕಟಿಸಲಾಗಿದೆ. ಈ ಬರಹಕ್ಕೆ ಸಂಬಂಧಪಡದ ಪ್ರತಿಭಾ ಕುಳಾಯಿ ಅವರ ಫೋಟೊ ಬಳಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರತಿಭಾ ಕುಳಾಯಿ ಸೋಮವಾರ ದೂರು ನೀಡಿದ್ದಾರೆ.

ಪುಸ್ತಕದಲ್ಲಿರುವ ಬರಹಕ್ಕೆ ಸಂಬಂಧವೇ ಇಲ್ಲದಿದ್ದರೂ ನನ್ನ ಅನುಮತಿ ಇಲ್ಲದೆ ಫೋಟೊ ಹಾಕಿ ರಾಜಕೀಯ, ಸಾಮಾಜಿಕ, ವೈಯಕ್ತಿಕ ಗೌರವಕ್ಕೆ ಧಕ್ಕೆ ತರಲಾಗಿದೆ. ರಾಜಕೀಯ ಮೈಲೇಜ್‌ ಪಡೆಯಲು ಇಂತಹ ಮಟ್ಟಕ್ಕಿಳಿದ ಬಿಜೆಪಿ ನಾಯಕರ ನಡೆ ಖಂಡನೀಯ. ಚುನಾವಣೆ ಸಂದರ್ಭದಲ್ಲಿ ತಪ್ಪು ಸಂದೇಶ ನೀಡುವ ಈ ಕಾರ್ಯವನ್ನು ಅವರು ಪ್ರಯತ್ನಪೂರ್ವಕವಾಗಿ ನಡೆಸಿದ್ದಾರೆ.

ನಾನು ಬಿಬಿಎಂಪಿ ಕಾರ್ಪೊರೇಟರ್‌ ಅಲ್ಲ. ನನ್ನ ಗೌರವಕ್ಕೆ ಧಕ್ಕೆ ತಂದಿರುವ ಬಿಜೆಪಿ ನಾಯಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಾ ಕುಳಾಯಿ ದೂರಿನಲ್ಲಿ ಒತ್ತಾಯಿಸಿದ್ದಾರೆ.

Follow Us:
Download App:
  • android
  • ios