ಸಚಿವರ ಉತ್ತರ ಅರ್ಥ ಆಗದೇ ಸದಸ್ಯರು ಪೇಚು
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ವೇಳೆ ಟೀಕೆ, ಟಿಪ್ಪಣಿ, ಕಾಲೆಳೆಯುವುದು ಇವೆಲ್ಲಾ ಕಾಮನ್. ನಿನ್ನೆ ಮಜವಾದ ಪ್ರಸಂಗವೊಂದಕ್ಕೆ ಸಾಕ್ಷಿಯಾಯ್ತು ಬೆಳಗಾವಿ ಅಧಿವೇಶನ.
ಬೆಳಗಾವಿ (ಡಿ. 15): ‘ನನ್ನ ಮೇಲೆ ಏನ್ ದ್ವೇಷ ಇತ್ತೋ..? ಏನ್ ಕೇಳಿದರೋ, ಏನ್ ಉತ್ತರ ಕೊಟ್ಟರೋ ನನಗೆ ಗೊತ್ತಿಲ್ಲ..!’ ಸಭಾಧ್ಯಕ್ಷ ರಮೇಶ್ ಕುಮಾರ್ ಈ ಹೇಳಿಕೆಯು ಇಡೀ ಸದನವೇ ನಗೆಗಡಲಲ್ಲಿ ತೇಲುವಂತೆ ಮಾಡಿತು.
ಶುಕ್ರವಾರ ಜೆಡಿಎಸ್ ಸದಸ್ಯ ಎಂ.ಶ್ರೀನಿವಾಸ ಪ್ರಶ್ನೆ ಮತ್ತು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಉತ್ತರ ಸದನದ ಯಾವೊಬ್ಬ ಸದಸ್ಯರಿಗೂ ಅರ್ಥವಾಗದಿದ್ದಾಗ ರಮೇಶ್ ಕುಮಾರ ಮಾತು ಸದನದಲ್ಲಿ ನಗೆ ಮೂಡಿಸಿದರು. ಈ ನಡುವೆ ಬಿಜೆಪಿ ಶಾಸಕ ಸುನೀಲ್ ಕುಮಾರ್, ಪ್ರಶ್ನೆ ಮತ್ತು ಉತ್ತರವನ್ನು ನೀವು ಮತ್ತೊಮ್ಮೆ ನಮಗೆ ಹೇಳಬೇಕು ಎಂದು ಸಭಾಧ್ಯಕ್ಷರ ಕಾಲೆಳೆದರು. ಕೊನೆಗೆ ಲಿಖಿತ ಉತ್ತರವನ್ನೇ ಸದನಕ್ಕೆ ಒಪ್ಪಿಸಿದ್ದೇನೆ ಎಂದು ಹೇಳುವ ಮೂಲಕ ಸಭಾಧ್ಯಕ್ಷರು ಘಟನೆಗೆ ತೆರೆ ಎಳೆದರು.
ಮಂಡ್ಯ ನಗರದ ಜಿಲ್ಲಾ ಕಚೇರಿಗಳ ಅವರಣದಲ್ಲಿರುವ ಕಾವೇರಿ ವನ ಮತ್ತು ಭವ್ಯ ವನಗಳಿಗೆ ಸೂಕ್ತ ಕಾಂಪೌಂಡ್ ಇಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ವಿಧಾನಸೌಧದ ಸುರಕ್ಷತಾ ಗ್ರೀಲ್ ಮಾದರಿಯಲ್ಲಿ ಗ್ರೀಲ್ ಅಳವಡಿಕೆಗಾಗಿ 1.25 ಕೋಟಿ ಒದಗಿಸಲಾಗಿದೆ ಎಂದು ಸಚಿವ ಮನಗೂಳಿ ತಾವು ನೀಡಿದ ಉತ್ತರದಲ್ಲಿ ತಿಳಿಸಿದ್ದರು. ಆದರೆ, ಅದನ್ನು ವಿವರಿಸಿದ ರೀತಿ ಯಾರಿಗೂ ಅರ್ಥವಾಗುವಂತಿರಲಿಲ್ಲ.