ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಂದು ಹೋದ ನಂತರ ‘ಝೀ' ಕನ್ನಡ ವಾಹಿನಿಯ ‘ವೀಕೆಂಡ್‌ ವಿತ್‌ ರಮೇಶ್‌' ರಿಯಾಲಿಟಿ ಶೋನ ಹಾಟ್‌ ಸೀಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಂಟ್ರಿಯ ಕಾರಣಕ್ಕೆ ಸಾಕಷ್ಟುಸದ್ದು ಮಾಡಿದೆ. ಕಲರ್‌ಫುಲ್‌ ಕಾರ್ಯಕ್ರಮದ ಕೆಂಪು ಕುರ್ಚಿ ಮೇಲೆ ಸಿದ್ದರಾಮಯ್ಯ ಕೊನೆಗೂ ಆಸೀನರಾಗಿದ್ದಾರೆ.

ಬೆಂಗಳೂರು(ಜೂ.23): ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಬಂದು ಹೋದ ನಂತರ ‘ಝೀ' ಕನ್ನಡ ವಾಹಿನಿಯ ‘ವೀಕೆಂಡ್‌ ವಿತ್‌ ರಮೇಶ್‌' ರಿಯಾಲಿಟಿ ಶೋನ ಹಾಟ್‌ ಸೀಟ್‌ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಎಂಟ್ರಿಯ ಕಾರಣಕ್ಕೆ ಸಾಕಷ್ಟುಸದ್ದು ಮಾಡಿದೆ. ಕಲರ್‌ಫುಲ್‌ ಕಾರ್ಯಕ್ರಮದ ಕೆಂಪು ಕುರ್ಚಿ ಮೇಲೆ ಸಿದ್ದರಾಮಯ್ಯ ಕೊನೆಗೂ ಆಸೀನರಾಗಿದ್ದಾರೆ.

ಗುರುವಾರ ಹಲವು ಗಂಟೆಗಳಷ್ಟುಕಾಲ ಬೆಂಗಳೂರಿನ ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಅವರ ಬಾಲ್ಯ, ರಾಜಕಾರಣ, ಖಾಸಗಿ ಬದುಕು ಇತ್ಯಾದಿ ಸಂಗತಿಗಳು ಅನಾವರಣಗೊಂಡಿವೆ. ವಿಶೇಷವಾಗಿ ಹಿರಿಯ ಪುತ್ರ ರಾಕೇಶ್‌ ನೆನೆಪಿಸಿಕೊಂಡು ಸಿದ್ದರಾಮಯ್ಯ ಕಣ್ಣೀರಿಟ್ಟಿದ್ದಾರೆ. ‘ಆತ ಈಗ ಇದಿದ್ದರೆ 2018ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಯಾಗಿರುತ್ತಿದ್ದ' ಎಂದು ಅವರು ನೋವು ಹೊರಹಾಕಿದ್ದು, ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

ನಿಗದಿತ ಕಾರ್ಯಕ್ರಮದ ಪ್ರಕಾರ ಬೆಳಗ್ಗೆ ಸಿದ್ದರಾಮಯ್ಯ, ಅಬ್ಬಯ್ಯನಾಯ್ಡು ಸ್ಟುಡಿಯೋಕ್ಕೆ ಬಂದಾಗ ಪಕ್ಷದ ಮುಖಂಡರು, ಅಭಿಮಾನಿಗಳು ಅಧಿಕ ಸಂಖ್ಯೆಯಲ್ಲಿ ಸೇರಿದ್ದರು. ಸಚಿವರಾದ ಆಂಜನೇಯ, ಕೆ.ಜೆ. ಜಾಜ್‌ರ್‍ ಅವರೊಂದಿಗೆ ಸಿದ್ದರಾಮಯ್ಯನವರ ಪುತ್ರ ಯತೀಂದ್ರ ಹಾಗೂ ಮೊಮ್ಮಕ್ಕಳು ಬಂದಿದ್ದರು. ಕಾರ್ಯಕ್ರಮದ ನಿರೂಪಕ ನಟ ರಮೇಶ್‌, ಅಲ್ಲಿ ಶೋ ಶುರು ಮಾಡುವುದಕ್ಕೂ ಮುನ್ನ ಸಿಎಂಗೆ ಮೊದಲು ಸ್ವಾಗತ ಕೋರಿದ್ದು ಮೇಕಪ್‌ ಮನೆ.

ಅಲ್ಲಿಯೇ ಇದ್ದ ಕ್ಯಾರಾವಾನ್‌ನಲ್ಲಿ ಮೇಕಪ್‌ಗೆ ಕರೆದಾಗ ಸಿಎಂ ನಗು ಬೀರಿದರು.‘ ನಮ್ಗೆಲ್ಲ ಅದು ಬೇಕಾ? ಹೀಗೆ ಚೆನ್ನಾಗಿದ್ದೇವೆ ಬಿಡಪ್ಪಾ' ಅಂತ ಹಾಸ್ಯ ಚಟಾಕಿ ಹಾರಿಸಿದರು. ಶೂಟಿಂಗ್‌ ಕಾರಣಕ್ಕೆ ಕೊನೆಗೂ ಮುಖಕ್ಕೆ ಬಣ್ಣ ಹಾಕಿಕೊಂಡು ಸ್ಟುಡಿಯೋ ಪ್ರವೇಶಿಸಿದಾಗ ಅವರಿಗಾಗಿ ಕಾದಿದ್ದು ಹಾಟ್‌ ಸೀಟ್‌ ಜತೆಗೆ ನಿರೂಪಕ ರಮೇಶ್‌ ಅರವಿಂದ್‌. ಅಲ್ಲಿಂದ ಶುರುವಾಯಿತು ಮಾತು. ‘ರಾಜಕಾರಣದಲ್ಲಿ ನಮ್ಮ ಸಮಯ ಮುಗಿಯಿತು. ರಾಕೇಶ್‌ ಇರಬೇಕಿತ್ತು. ಆತ ಇದ್ದಿದ್ದರೆ 2018ರ ಚುನಾವಣೆಗೆ ಅವನೇ ಅಭ್ಯರ್ಥಿಯಾಗಿರುತ್ತಿದ್ದ' ಎಂದು ಅತ್ತರು.

ನಂತರ ಸಚಿವ ಎಚ್‌.ಆಂಜನೇಯ ಸಿಎಂ ಜತೆಗಿನ ಒಡನಾಟದ ಕುರಿತು ಮಾತನಾಡಿದರು. ‘ಸಿದ್ದರಾಮಯ್ಯ ಶ್ರೀರಾಮ, ನಾನು ಅವರ ಭಕ್ತ ಆಂಜನೇಯ' ಎಂದು ಬಣ್ಣಿಸಿದರು. ಸಿಎಂಗೆ ಇಷ್ಟವಾಗಿದ್ದ ಖರ್ಜೂರ ತಂದಿದ್ದರು. ತಮಗೆ ಖರ್ಜೂರ ಹಾಗೂ ಮಸಾಲೆ ವಡಾ ಅಂದ್ರೆ ಪಂಚಪ್ರಾಣ ಅಂತ ಸಿದ್ದರಾಮಯ್ಯ ಹೇಳಿದರು.

ಕಾರ‍್ಯಕ್ರಮಕ್ಕೆ ಪತ್ನಿ ಗೈರು

ಸೀಸನ್‌-1ರಿಂದಲೂ ಸಿದ್ದರಾಮಯ್ಯ ಅವರನ್ನು ಕಾರ್ಯಕ್ರಮಕ್ಕೆ ಕರೆ ತರುವ ಪ್ರಯತ್ನ ನಡೆದಿತ್ತು. ಕೊನೆಗೂ ಸೀಸನ್‌-3ರಲ್ಲಿ ಸಕ್ಸಸ್‌ ಕಂಡಿರುವ ಝೀ ಕನ್ನಡ ವಾಹಿನಿ, ಒಟ್ಟು 14 ದಿನಗಳ ಕಾಲ ರೀಸಚ್‌ರ್‍ ನಡೆಸಿ, ಸಿದ್ದರಾಮಯ್ಯನವರ ಹುಟ್ಟೂರು, ಮೈಸೂರಿನಲ್ಲಿ ಬೆಳೆದ ದಿನಗಳಲ್ಲಿ ಕಳೆದ ಜಾಗಗಳನ್ನು ಚಿತ್ರೀಕರಿಸಿಕೊಳ್ಳುವ ಮೂಲಕ, ಬಾಲ್ಯದ ಅವರ ಗೆಳೆಯರ ಮಾತುಗಳನ್ನು ಸಂಗ್ರಹಿಸಿದೆ. ಅಲ್ಲದೇ ಅವರಿಗೆ ತೀರಾ ಆಪ್ತರಾಗಿರುವವರನ್ನು ಶೋಗೆ ಕರೆತಂದಿದೆ. ಆದರೆ ಸಿದ್ದರಾಮಯ್ಯ ಪತ್ನಿ ಮಾತ್ರ ಕಾರ್ಯಕ್ರಮದಲ್ಲಿ ಭಾಗಿಯಾಗಲಿಲ್ಲ.

ಸಿಎಂ ಕುರಿತು ಪವರ್‌ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಹಾಗೂ ರೆಬೆಲ್‌ ಸ್ಟಾರ್‌ ಅಂಬರೀಷ್‌ ವಿಶೇಷವಾಗಿ ಮಾತನಾಡಿದ್ದಾರೆ. ಅವೆಲ್ಲವೂ ಜೂನ್‌ 24 ಶನಿವಾರ ಮತ್ತು ಜೂನ್‌ 25 ಭಾನುವಾರದ ರಾತ್ರಿ 9ಕ್ಕೆ ‘ವೀಕೆಂಡ್‌ ವಿತ್‌ ರಮೇಶ್‌' ಎಪಿಸೋಡ್‌ನಲ್ಲಿ ಮೂಡಿಬರಲಿವೆ.